Pratap Simha's Blog, page 29
December 13, 2016
November 27, 2016
November 26, 2016
ಗೇಲಿ ಮಾಡುತ್ತಿದ್ದವರ ಮುಂದೆಯೇ ಬೆಳೆದುನಿಂತ ಪತಂಜಲಿ ಮತ್ತು ಜಾಲಿ ನೋಟಿನ ಕಥೆ
ಗೇಲಿ ಮಾಡುತ್ತಿದ್ದವರ ಮುಂದೆಯೇ ಬೆಳೆದುನಿಂತ ಪತಂಜಲಿ ಮತ್ತು ಜಾಲಿ ನೋಟಿನ ಕಥೆ
ನಾವು ಬೆಳಗ್ಗೆ ಎದ್ದ ಕೂಡಲೇ ಬಳಸುವ ಬ್ರಸ್ಸು, ಟೂತ್ ಪೇಸ್ಟ್, ಸಾಬೂನಿನಿಂದ ಹಿಡಿದು ಚಪಾತಿ ಹಿಟ್ಟಿನವರೆಗೂ ಮನೆಬಳಕೆಯ ಎಲ್ಲ ವಸ್ತುಗಳ ಉತ್ಪಾದನೆಯಲ್ಲಿ ಭಾರತೀಯ ಮಾರುಕಟ್ಟೆಯನ್ನೇ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ವಿದೇಶಿ ಕಂಪನಿಗಳಾದ ಹಿಂದೂಸ್ಥಾನ್ ಲೀವರ್ ಲಿಮಿಟೆಡ್ ಮತ್ತು ಐಟಿಸಿಯನ್ನು ಹೆಡೆಮುರಿ ಕಟ್ಟುವುದು ಅಥವಾ ಹಿಂದಕ್ಕೆ ಹಾಕುವುದನ್ನು ಮತ್ತೊಂದು ಬಹುರಾಷ್ಟ್ರೀಯ ಕಂಪನಿಗೂ ಕೂಡಾ ಊಹಿಸಿಕೊಳ್ಳಲೂ ಸಾಧ್ಯವಾಗದ ಮಾತಾಗಿತ್ತು. ಇನ್ನು ಭಾರತೀಯ ಕಂಪನಿಯೊಂದು ಅಂಥ ಸಾಹಸಕ್ಕೆ ಕೈಹಾಕುವುದನ್ನು ದುಸ್ಸಪ್ನದಲ್ಲೂ ಕೂಡಾ ಕಾಣಲು ಸಾಧ್ಯವಿರಲಿಲ್ಲ. ಆದರೂ ಒಬ್ಬ ವ್ಯಕ್ತಿ ಮಾತ್ರ ಅಂಥ ಕನಸ್ಸನ್ನು ಕಂಡರು. ಆ ಕನಸ್ಸನ್ನು ಸಾಕಾರಗೊಳಿಸಲು ಬೆನ್ನುಬಿದ್ದರು. ಇಡೀ ದೇಶವನ್ನೇ ತಿರುಗಿ ಜನರಲ್ಲಿ ಜಾಗೃತಿ ಮೂಡಿಸಿದರು. ಸ್ವದೇಶಿಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.
ಅದರ ಫಲವೇ ಐದೇ ವರ್ಷಗಳಲ್ಲಿ ನಂಬರ್ 1 ದೇಶೀಯ ಕಂಪನಿಯೊಂದು ಹೊರಹೊಮ್ಮಿತು!
ಅದು ಪತಂಜಲಿ.
ಷೇರು ಮಾರುಕಟ್ಟೆಯಲ್ಲಿ ಅದನ್ನು FMCG ಎನ್ನಲಾಗುತ್ತದೆ. ಅಂದರೆ FAST MOVING CONSUMER GOODS.
ಅರ್ಥಾತ್ ಗ್ರಹೋಪಯೋಗಿ ಸರಕುಗಳು. ಷೇರು ಮಾರುಕಟ್ಟೆಯಲ್ಲಿ ಉಳಿದ ಸರಕುಗಳದ್ದು ಒಂದು ತೂಕವಾದರೆ FMCGಯದ್ದು ಇನ್ನೊಂದು ತೂಕ. ಭಾರತದಲ್ಲಂತೂ ಅದು ಇಡೀ ಮಾರುಕಟ್ಟೆಯನ್ನು ಆವರಿಸಿಕೊಳ್ಳುವಂಥ, ಮಾರುಕಟೆಯ ಸ್ವರೂಪವನ್ನೇ ಬದಲಿಸುವಂಥಾ ಶಕ್ತಿಯನ್ನು ಹೊಂದಿದೆ. ಏಕೆಂದರೆ ಭಾರತ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಯುವಕರಿರುವ ದೇಶ. ಅಲ್ಲದೆ ದೇಶದಲ್ಲಿ ಹೂಡಿಕೆಗೆ ಮೂಲಸೌಕರ್ಯಗಳ ಕೊರತೆ ಸದ್ಯದಲ್ಲಿ ಇಲ್ಲ. ನಗರಗಳ ಜನಸಂಖ್ಯೆ ಏರುತ್ತಿದೆ. ದೇಶದ ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚುತ್ತಿದೆ. ಪರಿಣಾಮ ಭಾರತದ FMCG ವಲಯದ ಗಾತ್ರ 25 ಬಿಲಿಯನ್ ಡಾಲರಿಗಿಂತಲೂ ಹೆಚ್ಚಿದೆ. ಪ್ರತಿ ವರ್ಷ 10 ರಿಂದ 12 ಶೇಕಡಾದಷ್ಟು ಇದರ ಗಾತ್ರ ಹೆಚ್ಚುತ್ತಲೇ ಇದೆ. 2011-12ರ ಅವಧಿಯಲ್ಲಿ ಡಿಪಾರ್ಟ್ ಮೆಂಟಲ್ ಸ್ಟೋರ್ಗಳು, ಹೈಪರ್ ಮಾರ್ಕೆಟ್ಗಳು ಮತ್ತು ಸೂಪರ್ ಮಾರ್ಕೆಟ್ಗಳ ಸಂಖ್ಯೆಗಳಲ್ಲಿ ವಿಪರೀತ ಹೆಚ್ಚಳವಾಗಿದೆ.
ಅಲ್ಲದೆ ಈ ವಲಯದಲ್ಲಿ ತೀವ್ರವಾದ ಪೈಪೋಟಿಯನ್ನೂ ಭಾರತದಲ್ಲಿ ಕಾಣುತ್ತಿದ್ದೇವೆ . ಆದರೆ ಈ ಸರಕುಗಳ ಅಧಿಪತ್ಯ ಬಹುರಾಷ್ಟ್ರೀಯ ಕಂಪನಿಗಳ ತೆಕ್ಕೆಯಲ್ಲೇ ಹೆಚ್ಚು ಇರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ.
ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಬೆಳೆದ ಪರಿಯದ್ದು ಒಂದು ದೊಡ್ಡ ಕಥೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದ ಯಾವ ದೇಶೀಯ ಕಂಪನಿಗಳನ್ನೂ ಅವರು ಸುಮ್ಮನೆ ಬಿಟ್ಟ ಉದಾಹರಣೆ ಇಲ್ಲ. ಒಂದು ತಂಪು ಪಾನೀಯವೋ ಅಥವಾ ಟೂತ್ ಪೇಸ್ಟೋ ಅಥವಾ ಇನ್ನಾವುದೋ ಉತ್ಪನ್ನಗಳನ್ನು ನಾವು ಬಳಸುತ್ತಿದ್ದಾಗಲೇ ಅವು ಬಹುರಾಷ್ಟೀಯರ ತೆಕ್ಕೆಗೆ ಜಾರಿರುತ್ತವೆ. ಅವು ಇನ್ನೂ ದೇಶಿ ಕಂಪನಿಗಳಾಗಿ ಉಳಿದಿವೆ ಎನ್ನುವುದನ್ನು ಕೂಡಾ ಬಹುರಾಷ್ಟ್ರೀಯರು ಜಾಹೀರಾತುಗಳ ಮೂಲಕ ಬಿಂಬಿಸಿದ ಉದಾಹರಣೆಗಳಿವೆ. ಅಂದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ದೇಶಿ ಉತ್ಪನ್ನಗಳ ಹೆಸರಲ್ಲಿ ಭಾರತೀಯ ಗ್ರಾಹಕರು ಮತ್ತು ಅವರಿಂದ ಲಾಭ ಬೇಕಾಗಿದೆ. ಹಲವು ದೇಶೀಯ ಕಂಪನಿಗಳಿಗೆ ಬಹುರಾಷ್ಟ್ರೀಯರ ಗುಟ್ಟು ತಿಳಿದಿತ್ತಾದರೂ ಅವರು ನಿಸ್ಸಾಯಕರಾಗಿದ್ದರು. ವ್ಯವಸ್ಥಿತವಾಗಿ ದೇಶಿ ಕಂಪನಿಗಳನ್ನು ಹಣಿಯುವ ಕೆಲಸವನ್ನು ಮಾಡಲಾಗಿತ್ತು. ಅದು ನಿತ್ಯೋಪಯೋಗಿ ಸರಕುಗಳಾಗಿರಬಹುದು, ಔಷಧಿಗಳಾಗಿರಬಹುದು, ತಂಪು ಪಾನೀಯಗಳಾಗಿರಬಹುದು, ಚಿಲ್ಲರೆ ವ್ಯಾಪಾರಗಳಾಗಿರಬಹುದು. ಹಲವು ಮಹತ್ತ್ವಾಕಾಂಕ್ಷಿ ದೇಶಿ ಉದ್ದಿಮೆಗಳು ಬಹುರಾಷ್ಟ್ರೀಯರ ತಂತ್ರಗಳಿಗೆ ಬಲಿಯಾದವು.
ಅಂಥ ಬಹುರಾಷ್ಟ್ರೀಯರಿಗೆ ತಲೆ ಕೆಡುವಂತೆ ಮಾಡಿದವರು ಬಾಬಾ ರಾಮ್ ದೇವ್. ಒಮ್ಮೆ ಹಳೆಯದನ್ನು ನೆನಪಿಸಿಕೊಳ್ಳಿ. ಈ ಕೋಲಾಗಳು (ಪೆಪ್ಸಿ ಮತ್ತು ಕೋಕ್) ಭಾರತಕ್ಕೆ ಬಂದಾಗ ನಮ್ಮ ದೇಶೀಯ ಮಾಲಿಕತ್ವದ ಥಂಪ್ಸಾಪನ್ನು ತಿಪ್ಪರಲಾಗ ಹಾಕಿದರೂ ಹಿಂದಕ್ಕೆ ಹಾಕಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು 500, 1000 ರೂಪಾಯಿ ನೋಟುಗಳನ್ನು ನಿಷೇಧ ಮಾಡಿದಾಗ ಅದನ್ನು ಅಂತರಾಷ್ಟ್ರೀಯ ಖ್ಯಾತಿಯ ಮಾರುಕಟ್ಟೆ ತಜ್ಞ ಫಿಲಿಪ್ ಕೋಟ್ಲರ್ ಅದ್ಭುತ ಕ್ರಮ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಈ ಫಿಲಿಫ್ ಕೋಟ್ಲರ್ ಮಾರುಕಟ್ಟೆಯಲ್ಲಿ ಎಂಥೆಂಥ ತಂತ್ರಗಾರಿಕೆ ನಡೆಯುತ್ತಿದೆ ಎಂಬುದನ್ನು ಪುಸ್ತಕವೊಂದರಲ್ಲಿ ವಿವರಿಸುತ್ತಾ, “ if you cant fight him,you join him ’’ ಎಂಬ ನೀತಿಯನ್ನು ಬಹುರಾಷ್ಟ್ರಿಯ ಕಂಪನಿಗಳು ಅನುಸರಿಸುತ್ತಿವೆ ಎಂದಿದ್ದರು. ಆದರೆ ನಮ್ಮ ಥಂಪ್ಸಪ್ ಜೊತೆ ಸೆಣಸಲಾಗದ ಕೋಕ್ ಕಂಪನಿ “ if you cant fight him you buy him’’ ಎಂಬಂತೆ ಯದ್ವಾತದ್ವಾ ತಲೆ ಕೊಟ್ಟು ಥಂಪ್ಸಪನ್ನೇ ಖರೀದಿ ಮಾಡಿಬಿಟ್ಟರು. ಇಂಥ ನೀತಿ ಅನುಸರಿಸುವ ಬಹುರಾಷ್ಟ್ರೀಯ ಕಂಪನಿಗಳ ದುಡ್ಡಿನ ಬಲದ ಮುಂದೆ ನಮ್ಮ ದೇಶೀಯ ಕಂಪನಿಗಳ ಜಂಘಾಬಲವೇ ಉಡುಗಿಹೋಗಿತ್ತು, ಬಾಬಾ ರಾಮ್ದೇವ್ ಬರುವವರೆಗೆ!
ಅದು ಪತಂಜಲಿ.
ಇದೊಂದು ಕಂಪನಿ ಈಗ ವಿದೇಶಿ ಕಂಪೆನಿಗಳೂ ಮೂಗಿನ ಮೇಲೆ ಬೆರಳಿಡುವಂತೆ ಬೆಳೆದಿದೆ. ಬೆಳೆಯುತ್ತಲೇ ಇದೆ. ಗ್ರಹೋಪಯೋಗಿ ಸರಕುಗಳ ವಲಯದಲ್ಲಿ ಏಕಚಕ್ರಾಧಿಪತ್ಯವನ್ನು ಸಾಧಿಸುವ ಲಕ್ಷಣಗಳು ಈಗಲೇ ಕಾಣುತ್ತಿವೆ. ಷೇರುಪೇಟೆಯಲ್ಲೂ ಈ ಸಂಸ್ಥೆಯದ್ದೇ ಸದ್ದು ಕೇಳಿಬರುತ್ತಿದೆ. ಸಾಂಪ್ರದಾಯಿಕ ಗ್ರಹೋಪಯೋಗಿ ಸರಕುಗಳ ಷೇರುಗಳು ಮಕಾಡೆ ಮಲಗುತ್ತಿವೆ. ಸಮಸ್ತ FMCG ವಲಯದ ಚಿತ್ತ ಈಗ ಅದರತ್ತ ನೆಟ್ಟಿದೆ. ಷೇರುಮಾರುಕಟ್ಟೆ ಪಂಡಿತರೇ ಮಾರುಕಟ್ಟೆಯಲ್ಲಿ ಹೊಸ ಅಲೆಯೊಂದು ಹುಟ್ಟಿದೆ ಎಂಬುದನ್ನು ಅಚ್ಚರಿಯಿಂದ ಗಮನಿಸುತ್ತಿದ್ದಾರೆ. ಪ್ರಮುಖವಾಗಿ ಟೂತ್ಪೇಸ್ಟ್, ಸಾಬೂನು ಮತ್ತು ಜೇನುತುಪ್ಪಗಳ ಮಾರಾಟದಲ್ಲಿ ಇಡೀ ಮಾರುಕಟ್ಟೆ ಪತಂಜಲಿಯತ್ತ್ತ ನೋಡುತ್ತಿದೆ.
ಯೋಗ ಗುರು ಬಾಬಾ ರಾಮ್ ದೇವ್ರವರ ಪತಂಜಲಿ ಆಯುರ್ವೇದ ಉತ್ಪನ್ನಗಳು 2016-17ರ ಆರ್ಥಿಕ ವರ್ಷದಲ್ಲಿ 10,000 ಕೋಟಿಯ ವ್ಯವಹಾರವನ್ನು ನಡೆಸಿ ಮಾರುಕಟ್ಟೆ ಜಗತ್ತಿನ ಕಣ್ಣನ್ನು ಭಾರತದತ್ತ ನೋಡುವಂತೆ ಮಾಡಿದೆ. ಕಳೆದ ವರ್ಷ ಇದರ ವ್ಯವಹಾರ 5000 ಕೋಟಿಯಷ್ಟಿತ್ತು ಎಂದರೆ ಕಳೆದೊಂದು ವರ್ಷದಲ್ಲಿ ಅದರ ಬೆಳವಣಿಗೆಯ ಪರಿಯನ್ನು ಅಂದಾಜು ಮಾಡಬಹುದು. ಪತಂಜಲಿ ಉತ್ಪನ್ನಗಳ ಈ ಸಾಧನೆಗೆ ಮಾರುಕಟ್ಟೆ ಕಡಿಮೆ ಬೆಲೆ ಮತ್ತು ಬ್ರಾಂಡ್ ಗ್ಯಾರೆಂಟಿಯನ್ನು ಕೊಡುತ್ತದಾದರೂ ಅವೆಲ್ಲಕ್ಕೂ ಮಿಗಿಲಾಗಿ ನಮಗೆ ಕಾಣುವುದು ಸ್ವಾಮಿ ರಾಮದೇವರ ಸ್ವದೇಶಿ ಶ್ರದ್ಧೆ. ಮತ್ತು ಅದನ್ನು ಗ್ರಾಹಕರಲ್ಲಿ ಬಿತ್ತಿದ ಅಚಲ ಶ್ರಮ. ಕಳೆದ ಮೂರು ತಿಂಗಳಿನಿಂದ ಬಾಂಬೆ ಸ್ಟಾಕ್ ಎಕ್ಸ್ಚೇಂಜಿನಲ್ಲಿ ಗ್ರಹೋಪಯೋಗಿ ಸರಕುಗಳ ಷೇರು ಇಂಡೆಕ್ಸ್ ಶೇ 2ರಷ್ಟಿದ್ದರೆ ಈಗ ಅದರ ಇಂಡೆಕ್ಶ್ ಪ್ರಮಾಣ 0.50 ಆಗಿದೆ. ಗ್ರಹೋಪಯೋಗಿ ಸರಕುಗಳಲ್ಲಿ ಹಲವು ವರ್ಷಗಳಿಂದ ಪ್ರಸಿದ್ಧ ಏಳು ಸರಕುಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದವು. ಮತ್ತು ಆ ಕಂಪನಿಗಳೆಲ್ಲವೂ ತಮಗೆ ಪ್ರತಿಸ್ಪರ್ಧಿಯಾಗುವ ಇನ್ನೊಂದು ಕಂಪನಿಯ ಆಗಮನದ ನಿರೀಕ್ಷೆಯಲ್ಲಿ ಇರಲೇ ಇಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ಅವು ಆಡಿದ್ದೇ ಆಟ ಎಂಬಂತಾಗಿತ್ತು. ಆದರೆ ಪತಂಜಲಿ ಅವುಗಳ ನಂಬಿಕೆಗಳೆಲ್ಲವನ್ನೂ ಬುಡಮೇಲು ಮಾಡಿಬಿಟ್ಟಿದೆ. ಒಂದು ಕಾಲದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಮಾಡಿದಂತೆ ಪತಂಜಲಿ ಕೂಡಾ ಬೆಲೆಯೊಡನೆ ಆಟವಾಡಿತು. ಗುಣಮಟ್ಟಕ್ಕೆ ಪ್ರಾಮುಖ್ಯತೆ ಕೊಟ್ಟಿತು. ಮಾರುಕಟ್ಟೆಯಲ್ಲಿ ಗೆರಿಲ್ಲಾ ತಂತ್ರವನ್ನು ಅನುಸರಿಸಿತು. ದಶಕಗಳ ಕಾಲ ಯಾವ ವಿದೇಶಿ ಕಂಪನಿಗಳು ಭಾರತೀಯ ಕಂಪನಿಗಳನ್ನು ಹಣಿಯಲು ಯಾವ ಯಾವ ತಂತ್ರಗಳನ್ನು ಅನುಸರಿಸಿತ್ತೋ ಅದೇ ತಂತ್ರವನ್ನು ಪತಂಜಲಿ ವಿದೇಶಿ ಕಂಪನಿಗಳ ವಿರುದ್ಧ ಪ್ರಯೋಗಿಸಿತು. ವರ್ಷಗಟ್ಟಲೆ ಮೆರೆದ ಕಂಪನಿಗಳಿಗೆ ನಡುಕ ಹುಟ್ಟಿದ್ದೇ ಆವಾಗ. ಕೆಲವು ಕಂಪನಿಗಳು ಹೊಸ ಪ್ರತಿಸ್ಪರ್ಧಿಯನ್ನು ಹಣಿಯಲು ಸಾರಿಗೆ ವ್ಯವಸ್ಥೆಯನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನಿಸಿತ್ತಾದರೂ ಪತಂಜಲಿ ನೆಲಕಚ್ಚಲಿಲ್ಲ.
ಪತಂಜಲಿ ಯಶಸ್ಸಿನ ಹಿಂದೆ ರಾಮ್ದೇವರ ಪಾತ್ರವೆಷ್ಟಿದೆಯೋ ಅಷ್ಟೇ ಪಾತ್ರವಿರುವ ಮತ್ತೊಬ್ಬ ವ್ಯಕ್ತಿ ಅದರ ಕಾರ್ಯನಿರ್ವಹಣಾಧಿಕಾರಿ ಆಚಾರ್ಯ ಬಾಲಕೃಷ್ಣ. 44ರ ಹರೆಯದ ಬಾಲಕೃಷ್ಣ ಈಗ ಭಾರತದ ಶ್ರೀಮಂತ ಉದ್ಯಮಿಗಳಲೊಬ್ಬರು. ಇವರ ಯಶಸ್ಸು ಕೂಡ ಒಂದು ವಿಚಿತ್ರ. ಏಕೆಂದರೆ ಎಲ್ಲಾ ಸಿಇಒಗಳಂತೆ ಇವರು ಸೂಟು ಧರಿಸಲಾರರು. ಕಂಪ್ಯೂಟರ್ ಬಳಸಲಾರರು, ಇಂಗ್ಲಿಷ್ ಮಾತಾಡಲಾರರು. ಪ್ರಾಚೀನ ಆಯುರ್ವೇದಕ್ಕೆ ಎಂಥ ಮಾರ್ಕೆಂಟಿಂಗ್ ಎಕ್ಸಿಕ್ಯುಟಿವ್ಗಳಿರಬೇಕೆಂದು ಸಾಮಾನ್ಯರಿಗನಿಸುತ್ತದೋ ಅಂಥ ಸಿಇಒ ಈ ಆಚಾರ್ಯ ಬಾಲಕೃಷ್ಣ. ಅಂದರೆ ಪ್ರಾಚೀನದ ಜೊತೆಗೆ ಆಧುನಿಕತೆಯ ಸ್ಪರ್ಶ ನೀಡಿ ಕಂಪನಿಯನ್ನು ವಿಶ್ವವಿಖ್ಯಾತ ಮಾಡಿದವರು ಈ ದೇಸೀ ಬಾಲಕೃಷ್ಣ. ದೇಶೀ ಕಂಪನಿಯೊಂದು ವಿದೇಶಿ ಕಂಪನಿಗಳಿಗೆ ಸೆಡ್ಡು ಹೊಡೆಯುತ್ತಿರುವಾಗ ಏನೇನನ್ನು ಎದುರಿಸಬೇಕೋ ಅವೆಲ್ಲವನ್ನೂ ಪತಂಜಲಿ ಮತ್ತು ಅದರ ಸಿಇಒ ಅನುಭವಿಸಿದೆ. ಬಾಲಕೃಷ್ಣರ ಮೇಲೆ ಮೋಸದ ಜಾಲವನ್ನು ಸೆಣೆದು ಹೆಸರಿಗೆ ಮಸಿ ಬಳಿಯುವ ತಂತ್ರವನ್ನು ಕೂಡ ಕಾಣದ ಕೈಗಳು ಮಾಡಿದವು. ವಂಚನೆ ಪ್ರಕರಣವನ್ನು ದಾಖಲಿಸಿದವು. ಸಿಬಿಐವರೆಗೂ ಪ್ರಕರಣವನ್ನು ಕೊಂಡೊಯ್ದವು. ಆದರೂ ಸತತ ದುಡಿಮೆ, ಆಯುರ್ವೇದದ ಮೇಲಿನ ಪ್ರೀತಿ ಅವರನ್ನು ಈ ಮಟ್ಟಕ್ಕೆ ಮುಟ್ಟಿಸಿದೆ. ಇವೆಲ್ಲ ಸವಾಲುಗಳ ನಡುವೆಯೂ ಪತಂಜಲಿ ವಿವಿಧ ಪ್ರಯೋಗಗಳನ್ನು ನಡೆಸಿತು. ಚಾಕಲೇಟುಗಳಿಂದ ಹಿಡಿದು ಔಷಧಿ, ಪೇಯಗಳವರೆಗೂ ಪತಂಜಲಿಯನ್ನು ಎತ್ತರಕ್ಕೇರಿಸಿದ ಕೀರ್ತಿ ಅವರದ್ದು.
ಅಷ್ಟಕ್ಕೂ ಪತಂಜಲಿ ಈ ಪರಿಯಲ್ಲಿ ಜನಪ್ರೀಯವಾಗುವುದಕ್ಕೆ ಕಾರಣಗಳೇನು?
ಅದಕ್ಕೆ ಕಾರಣಗಳನ್ನು ಹುಡುಕುವಲ್ಲಿ ಬಹುರಾಷ್ಟ್ರೀಯ ಕಂಪನಿಗಳೂ ಸೋತಿವೆ. ಏಕೆಂದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತೀಯ ಗ್ರಾಹಕರ ದೌರ್ಬಲ್ಯಗಳೇ ಅಸ್ತ್ರಗಳಾಗಿದ್ದವು. ಅಂದರೆ ವಿದೇಶಿ ಸರಕುಗಳಿಗೆ ಮತ್ತು ಬ್ರಾಂಡ್ಗಳಿಗೆ ಭಾರತೀಯ ಗ್ರಾಹಕರು ಹಾತೊರೆಯುತ್ತಾರೆ ಎಂಬುದು ಬಹುರಾಷ್ಟ್ರೀಯ ಕಂಪನಿಗಳಿಗೆ ಚೆನ್ನಾಗಿ ತಿಳಿದಿತ್ತು. ಪರಿಣಾಮ ರಾತ್ರೋರಾತ್ರಿ ಸ್ವದೇಶಿ ಕಂಪನಿಗಳು ಬಹುರಾಷ್ಟ್ರೀಯರ ತೆಕ್ಕೆಗೆ ಜಾರಿಕೊಳ್ಳುತ್ತಿತ್ತು. ಬಹುರಾಷ್ಟ್ರೀಯರು ಕೈಹಾಕಿದ ಯಾವ ಸ್ವದೇಶಿ ಕಂಪನಿಗಳೂ ದೇಶದಲ್ಲಿ ಉಳಿಯುತ್ತಿರಲಿಲ್ಲ.
ಅಷ್ಟಕ್ಕೂ ಪತಂಜಲಿ ಉತ್ಪನ್ನಗಳ ಯಶಸ್ಸಿನ ಗುಟ್ಟೇನು ಎಂದು ನೋಡಿದರೆ ಸೋಜಿಗ ಹುಟ್ಟುತ್ತದೆ. ಏಕೆಂದರೆ ಪತಂಜಲಿಯ ಉತ್ಪನ್ನಗಳ ಜಾಹೀರಾತುಗಳಲ್ಲಿ ಸಿನಿಮಾ ನಟ-ನಟಿಯರು, ಕ್ರಿಕೇಟ್ ತಾರೆಯರು ಕಾಣಿಸಿಕೊಳ್ಳುವುದಿಲ್ಲ. ಉತ್ಪನ್ನಗಳ ಪೊಟ್ಟಣಗಳಲ್ಲಿ ಬಾಬಾ ರಾಮ್ದೇವ್ ಅವರ ಚಿತ್ರವೊಂದನ್ನು ಬಿಟ್ಟು ಬೇರೇನೂ ಇರುವುದಿಲ್ಲ. ಪತಂಜಲಿಯ ಜನಪ್ರಿಯತೆಗೆ ಇದೊಂದೇ ಕಾರಣ. ಜಾಹೀರಾತುಗಳಿಗೆ ಕೋಟಿಗಟ್ಟಲೆ ಸುರಿಯುವ ಬಹುರಾಷ್ಟ್ರೀಯ ಕಂಪನಿಗಳನ್ನು ಪತಂಜಲಿ ಜಾಹೀರಾತಿಲ್ಲದೆ ದಾಟಿ ಮತ್ತಷ್ಟು ಹೆದರಿಸಿಬಿಟ್ಟಿತು. ಹಾಗಾದರೆ ದೇಶದ ಜನ ಒಬ್ಬ ಸಂನ್ಯಾಸಿಯ ಮೇಲೆ ಅಷ್ಟೊಂದು ನಂಬಿಕೆ ಇಡುವವರು ಅಂದಾಯಿತು. ಜೊತೆಗೆ ಬಹುರಾಷ್ಟ್ರೀಯರ ಅಬ್ಬರದ ನಡುವೆಯೂ ನಮ್ಮ ಜನರಲ್ಲಿ ಸ್ವದೇಶಿ ಪ್ರೇಮ ಇದೆಯೆಂದಾಯಿತು. ಇಂದು ಪತಂಜಲಿಯ ವೇಗ ಅದೆಷ್ಟು ಜೋರಾಗಿದೆಯೆಂದರೆ ದೇಶದ ಎಲ್ಲಾ ಜಿಲ್ಲೆ ಗಳಲ್ಲೂ ಅದರ ಮಳಿಗೆಗಳಿವೆ. ಎಲ್ಲಾ ಗ್ರಾಮಗಳಲ್ಲೂ ಮಳಿಗೆಗಳು ಮುಟ್ಟಬೇಕೆಂಬ ಗುರಿಯನ್ನು ಪತಂಜಲಿ ಹಾಕಿಕೊಂಡಿದೆ. ದೇಶದ ಎಲ್ಲಾ ಗ್ರಾಮಗಳಲ್ಲೂ ಪತಂಜಲಿ ಮುಟ್ಟಲು ಸಾಧ್ಯ ಎಂಬುದು ಅವರ ವಿಶ್ವಾಸ. ಏಕೆಂದರೆ ಒಂದು ಕಾಲದಲ್ಲಿ ಯೋಗವನ್ನು ಊರೂರುಗಳಿಗೂ ಮುಟ್ಟಿಸಿದವರು ಈ ರಾಮದೇವರು.
ಬಾಬಾ ರಾಮದೇವರು ಹುಟ್ಟಿದ್ದು 1965ರಲ್ಲಿ. ಹರ್ಯಾಣದ ಒಂದು ಪುಟ್ಟ ಗ್ರಾಮದಲ್ಲಿ. ಪೂರ್ವಾಶ್ರಮದ ಹೆಸರು ರಾಮಕೃಷ್ಣ ಯಾದವ್. ಆನಂತರ ಸಂನ್ಯಾಸ ಸ್ವೀಕರಿಸಿ ಬಾಬಾ ರಾಮದೇವರಾದರು. ಆರಂಭದಲ್ಲಿ ಹರ್ಯಾಣದ ಜಿಂದ್ ಜಿಲ್ಲೆಯ ಗುರುಕುಲದಲ್ಲಿ ಕಲಿಯುತ್ತಿದ್ದ ಗ್ರಾಮಸ್ಥರಿಗೆ ಯೋಗ ಹೇಳಿಕೊಡುತ್ತಿದ್ದರು. ನಂತರ ಹರಿದ್ವಾರಕ್ಕೆ ತೆರಳಿ ಭಾರತೀಯ ಶಾಸ್ತ್ರಗಳನ್ನು ಅಭ್ಯಸಿಸಿದರು. ರಾಮಕೃಷ್ಣ ಯಾದವ್ ಈಗ ಯೋಗಗುರುವಾದರು.
1995ರಲ್ಲಿ ದಿವ್ಯಯೋಗ ಮಂದಿರ ಟ್ರಸ್ಟನ್ನು ಸ್ಥಾಪಿಸಿ ಯೋಗದ ಪ್ರಚಾರಕ್ಕೆ ಮುಂದಾದರು. ಖಾಸಗಿ ವಾಹಿನಿಯೊಂದು ಅವರನ್ನು ಯೋಗ ಕಲಿಕೆಗೆ ಆಹ್ವಾನಿಸಿದ ನಂತರ ರಾಮ ದೇವ್, ಯೋಗ ಮತ್ತು ಆ ಚಾನಲ್ ಎಲ್ಲರ ಅದೃಷ್ಟವೂ ಬದಲಾಯಿತು. ಜನ ರಾಮದೇವರ ಯೋಗವನ್ನು ಕಾಯತೊಡಗಿದರು. ಅದರ ಪ್ರಭಾವವನ್ನು ಪ್ರತ್ಯಕ್ಷ ಅನುಭವಿಸಿದರು. ಸೂರ್ಯನಮಸ್ಕಾರ ಜನಪ್ರೀಯವಾಯಿತು. ಅವರ ಮಾತುಗಳನ್ನು ಜನ ನಂಬಿದರು. ಅನಂತರ ರಾಮದೇವ್ ವಿದೇಶಗಳಿಗೂ ಯೋಗ ಕಲಿಸಿ ಬಂದರು. ಯೋಗದೊಂದಿಗೆ ಆಯುರ್ವೇದ, ಭಾರತೀಯ ನಂಬಿಕೆಗಳ ಪ್ರಚಾರವೂ ನಡೆಯತೊಡಗಿತು. ಆ ನಂಬಿಕೆಗಳ ಫಲವೇ ಪತಂಜಲಿಯ ಯಶಸ್ಸು. ಪ್ರತೀ ಉತ್ಪನ್ನಗಳ ಪ್ರಚಾರದಲ್ಲೂ ರಾಮದೇವ್ ಇದರ ಗುಣಮಟ್ಟಕ್ಕೆ ನಾನೇ ಗ್ಯಾರಂಟಿ ಎಂದರು, ಅಷ್ಟೇ. ಅದರ ವೇಗವನ್ನು ತಡೆಯಲು ಯಾವ ವಿದೇಶಿ ಕಂಪನಿಗಳಿಗೂ ಸಾಧ್ಯವಾಗಲಿಲ್ಲ.
80ರ ದಶಕದ ನಂತರ ಒಂದು ದೇಶಿ ಕಂಪನಿ ಹೀಗೆ ಬೆಳವಣಿಗೆ ಹೊಂದಿರಲಿಲ್ಲ. ಕೆಲವೊಂದು ಬೆಳೆಯುವ ಭರವಸೆಯನ್ನು ತೋರಿಸಿತ್ತಾದರೂ ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಆದರೆ ಪತಂಜಲಿ ಹಾಗಲ್ಲ. ಅದು ಪ್ರತೀ ಮನೆಗೂ ಇಂದು ಮುಟ್ಟಿದೆ. ಪತಂಜಲಿಯ ಒಂದಾದರೂ ಉತ್ಪನ್ನಗಳಿಲ್ಲದ ಮನೆಯನ್ನು ಇಂದು ನಾವು ಕಾಣಲಾರೆವು.
ಮರೆಯುವ ಮುನ್ನ ಮತ್ತೊಂದು ಮಾತು ಇವತ್ತು ದೇಶವೇ ಕೊಂಡಾಡುತ್ತಿರುವ ಪ್ರಧಾನಿ ಮೋದಿಯವರಿಗೆ 500, 1000ನೋಟನ್ನು ನಿಷೇಧ ಮಾಡಿ ಎಂದು ಮೊದಲು ಐಡಿಯಾ ಕೊಟ್ಟಿದ್ದೇ ಬಾ ರಾಂ ದೇವ್. ಅವ್ರು ಸ್ವದೇಶಿ ಬಗ್ಗೆ ಮಾತನಾಡಲಾರಂಬಿಸಿದಾಗ ಬಹಳ ಜನ ಮೂಗು ಮುರಿಯುತ್ತಿದ್ದರು. ಜಾಲಿ (ನಕಲಿ)ನೋಟಿನ ಬಗ್ಗೆ ಧ್ವನಿ ಎತ್ತಿದಾಗ ಇವರಿಗೇನು ಗೊತ್ತು ಅಥಶಾಸ್ತ್ರ ಎಂದು ಅಣಕಿಸಿದವರಿದ್ದರು. ಹೀಗೆ ಗೇಲಿ ಮಾಡಿದವರ ಮುಂದೆಯೇ ಬೆಳೆಯಿತೊಂದು ಪತಂಜಲಿ ಮತ್ತು ಜಾಲಿ ನೋಟಿನ ಅಮೋಘ ಕಥೆ!
November 19, 2016
ಇನ್ನೂ ಸ್ವಲ್ಪ ಸಾವಕಾಶ, ಇದು ದೇಶವನ್ನು ಸರಿಪಡಿಸಲು ನಿಮಗೇ ಸಿಕ್ಕಿರುವ ಅವಕಾಶ!
ಇನ್ನೂ ಸ್ವಲ್ಪ ಸಾವಕಾಶ, ಇದು ದೇಶವನ್ನು ಸರಿಪಡಿಸಲು ನಿಮಗೇ ಸಿಕ್ಕಿರುವ ಅವಕಾಶ!
——————————————————————————————————–
ಒಮ್ಮೆ ಹಳೆಯದ್ದನ್ನೆಲ್ಲ ನೆನಪಿಸಿಕೊಳ್ಳಿ…. ಕಾರಿನ ಸೀಟ್ ಬೆಲ್ಟ್ ಹಾಕಿಕೊಳ್ಳಲೇಬೇಕು ಎಂದು ನಿಯಮ ಮಾಡಿದಾಗ ನಿಮಗೆ ಕಿರಿ ಕಿರಿಯಾಗಿತ್ತಲ್ಲವೆ? ಬೆಲ್ಟ್ ಹಾಕಿಕೊಳ್ಳುವುದನ್ನು ಪದೇ ಪದೆ ಮರೆತು ದಂಡ ಹಾಕಿಸಿಕೊಂಡಾಗ ನಿಯಮ ಮಾಡಿದವರ ಮೇಲೆ ಸಿಟ್ಟುಗೊಂಡಿದ್ದಿರಲ್ಲವೆ? ಹೆಲ್ಮೆಟ್ ಕಡ್ಡಾಯ ಮಾಡಿದಾಗಲೂ ಕೋಪ ಬಂದಿತ್ತು! ಅದರಲ್ಲೂ ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯವೆಂದಾಗಲಂತೂ ಸಿಟ್ಟು ನೆತ್ತಿಗೇರಿತ್ತು ಅಲ್ವಾ?
ಹೌದು, ಯಾವುದೇ ಹೊಸ ವ್ಯವಸ್ಥೆ, ನಿಯಮ ಬಂದಾಗ ಅದಕ್ಕೆ ಹೊಂದಿಕೊಳ್ಳಲು ಪ್ರಾರಂಭದಲ್ಲಿ ನಮ್ಮ ಮನಸ್ಸು ಅಡ್ಡಿ ಮಾಡುತ್ತದೆ, ಕಾಲಾಂತರದಲ್ಲಿ ಒಗ್ಗಿಕೊಳ್ಳುತ್ತದೆ!
ಸಡನ್ನಾಗಿ ಬ್ರೇಕ್ ಹಾಕಬೇಕಾದ ಸಂದರ್ಭ ಬಂದು ಕುಳಿತಲ್ಲೇ ಮುಗ್ಗರಿಸಬೇಕಾದ ಹೊತ್ತಿನ ನಂತರ ಸದ್ಯ ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದ ಏನೂ ಆಗಲಿಲ್ಲ ಎಂದು ನಿಟ್ಟುಸಿರು ಬಿಟ್ಟಿರುತ್ತೀರಲ್ಲವೆ? ಆಗ ಸರ್ಕಾರ ಮಾಡಿದ ನಿಯಮದಿಂದ ಒಳ್ಳೆಯದೇ ಆಯಿತು ಎಂದು ಮನಸ್ಸಿಗೆ ಅನಿಸಿದ ಅನುಭವ ಒಂದಲ್ಲಾ ಒಂದು ಸಂದರ್ಭದಲ್ಲಿ ಆಗಿದೆಯಲ್ಲವೆ? ಅದೃಷ್ಟವಶಾತ್, ಹೆಲ್ಮೆಟ್ ಹಾಕಿಕೊಂಡಿದ್ದರಿಂದ ನನ್ನ ಮಗ ಉಳಿದ ಎಂದು ಹೇಳಿಕೊಂಡ ತಂದೆ-ತಾಯಂದಿರ ಮುಖದಲ್ಲಿ ಮೂಡಿದ್ದ ಆತಂಕದ ಗೆರೆಗಳನ್ನು ಒಂದು ಸಲ ಕಲ್ಪಿಸಿಕೊಳ್ಳಿ! ಇನ್ನು ರಾತ್ರಿಯಿಂದ ಪೆಟ್ರೋಲ್, ಡೀಸೆಟ್ ಬೆಲೆ ಲೀಟರ್ಗೆ 5 ರೂ. ಹೆಚ್ಚಳ ಎಂದು ಘೋಷಿಸಿದರೆ ರಾತ್ರಿ ಊಟ ಬಿಟ್ಟು ಬಂಕ್ ಎದುರು ಕ್ಯೂ ನಿಲ್ಲುತ್ತೀರೋ ಇಲ್ಲವೋ? ನಾಲ್ಕು ಕಾಸು ಉಳಿಯುತ್ತದೆ, ಅದರಿಂದ ಮತ್ತೊಂದಕ್ಕೆ ಅನುಕೂಲವಾಗುತ್ತದೆ ಎಂಬ ಯೋಚನೆ ನಮ್ಮಲ್ಲಿ ತಾಳ್ಮೆಯನ್ನು ತುಂಬಿ ಸಾಲಿನಲ್ಲಿ ನಿಲ್ಲುವಂತೆ ಮಾಡುತ್ತದೆ ತಾನೆ? ಅಂಗಾರಕ ಸಂಕಷ್ಟ ಬಂದ ದಿನ ಒಂದು ಹಿಡಿ ಅವಲಕ್ಕಿಯನ್ನೂ ತಿನ್ನದೆ ರಾತ್ರಿ ಚಂದ್ರನ ಆಗಮನಕ್ಕಾಗಿ ಹಠ ಹಿಡಿದವರಂತೆ ಕಾಯುತ್ತೀರಿ. ಶ್ರಾವಣ ಶುಕ್ರವಾರ ಮಡಿಯುಟ್ಟು ದೇವಸ್ಥಾನಕ್ಕೆಂದು ಹೋದಾಗ ಕಿಲೋಮೀಟರ್ಗೂ ಮೀರಿದ ಕ್ಯೂ ನೋಡಿದಾಗಲೂ ಮನಸ್ಸಿಗೆ ಕಿರಿಕಿರಿ ಮಾಡಿಕೊಳ್ಳದೆ ಭಕ್ತಿಯಿಂದ ಸಾಲಿನಲ್ಲಿ ಬರುತ್ತೀರಿ. ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡಿದ ನಂತರ ಕೊಡುವ ತಿಳಿ ಸಾರು ಅನ್ನವನ್ನು ಉದ್ದದ ಸಾಲಿನಲ್ಲಿ ನಿಂತು ಪ್ರಸಾದ ಅಂತ ತಾಳ್ಮೆಯಿಂದ ಸ್ವೀಕರಿಸಿ ಬರುತ್ತೀರಿ. ತಿರುಪತಿಯಲ್ಲಿ ಗಂಟೆ ಗಟ್ಟಲೆ ಒಂದೊಂದು ರೂಮಿನಲ್ಲಿ ಕೂಡಿ ಹಾಕಿದರೂ ಅದು ನಿಮಗೆ ಬಂಧನದ ಅನುಭವ ಕೊಡುವುದಿಲ್ಲ. ಏಕೆ ಹಾಗೆ ನಿಲ್ಲುತ್ತೇವೆ ಎಂದರೆ ಆ ದೇವರು ಒಲಿದರೆ ನಮಗೆ, ನಮ್ಮ ಮಕ್ಕಳಿಗೆ ಒಳ್ಳೆಯದಾಗಬಹುದು ಎಂಬ ವಿಶ್ವಾಸದಿಂದ.
ಬಹಳ ಖುಷಿಕೊಡುವ ಸಂಗತಿಯೆಂದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಏನೇ ಹೇಳಿದರೂ ದೇಶಕ್ಕೆ ಒಳ್ಳೆಯದನ್ನು ಮಾಡುವುದಕ್ಕೆಂದೇ ಭಾವಿಸಿ ನೀವು ಓಗೊಡುತ್ತೀರಿ!
ಮಹತ್ಮಾ ಗಾಂಧಿ ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟರು, ಅವರಿಗೆ ಸ್ವಚ್ಛತೆಯೆಂಬುದು ಬಹಳ ಪ್ರಿಯವಾದ ವಿಚಾರ. ಕನಿಷ್ಟ ಅವರಿಗೆ ಸ್ವಚ್ಛ ಭಾರತವನ್ನಾದರೂ ಕೊಡೋಣ ಎಂದ ಕೂಡಲೇ ನೀವೂ ಪೊರಕೆ ಹಿಡಿದು ಬೀದಿಗಿಳಿದಿರಿ. ಹಳ್ಳಿಯಲ್ಲಿರುವ ಆ ತಾಯಂದಿರು ಸೌದೆ ಒಲೆಯಲ್ಲಿ ಅಡುಗೆ ಬೇಯಿಸಿ ಕಣ್ಣು ಪೊರೆ ಕಟ್ಟಿಕೊಂಡಿದೆ, ಹೊಗೆ ಕುಡಿದು ಎದೆ ಸುಟ್ಟಿದೆ ಎಂದ ಕೂಡಲೇ ಒಂದೂಕಾಲು ಕೋಟಿ ಕುಟುಂಬಗಳು ಗ್ಯಾಸ್ ಸಬ್ಸಿಡಿ ಬಿಟ್ಟವು. ಪ್ರತಿ ಕುಟುಂಬಕ್ಕೂ ಒಂದೊಂದು ಅಕೌಂಟ್ ಕೊಡಬೇಕು, ಸರ್ಕಾರದ ಸವಲತ್ತು, ಸಬ್ಸಿಡಿ ನೇರವಾಗಿ ಫಲಾನುಭವಿಗಳಿಗೆ ಸೇರಬೇಕು ಎಂದಾಗ ನೀವೂ ಮುಂದೆ ಬಂದಿರಿ, ಜತೆಗೆ ಇಡೀ ಬ್ಯಾಂಕಿಂಗ್ ಕ್ಷೇತ್ರದ ಅಧಿಕಾರಿಗಳು ಕಾರ್ಯತತ್ಪರರಾದರು. 21 ಕೋಟಿ ಅಕೌಂಟ್ ತೆರೆದವು. ಜನ ಅವುಗಳಲ್ಲಿ 33,740 ಕೋಟಿ ಹಣ ಇಟ್ಟರು! ಐನೂರು ಸಾವಿರ ರೂಪಾಯಿ ನೋಟುಗಳನ್ನು ನಿಷೇಧ ಮಾಡುವ ಮೊದಲಿನವರೆಗೂ 71 ಪರ್ಸೆಂಟ್ ಅಕೌಂಟ್ಗಳು ಕ್ರಿಯಾಶೀಲವಾಗಿದ್ದವು. ಈಗಂತೂ ಎಲ್ಲಾ ಅಕೌಂಟ್ಗಳೂ ಹಣ ಹೊಂದಿರುತ್ತವೆ ಬಿಡಿ!
ಅಂದರೆ ನಮ್ಮ ಜನರಲ್ಲಿ ಹೊಸ ಸಂಸ್ಕೃತಿ ಯನ್ನು ಹುಟ್ಟುಹಾಕುವ ಪ್ರಯತ್ನ ಅದಾಗಿತ್ತು!
ಜನರೂ ಸ್ಪಂದಿಸಿದರು. ಮನೆಯ ಯಾವುದೋ ಮೂಲೆಯಲ್ಲೋ, ಪೆಟ್ಟಿಗೆಯಲ್ಲೋ, ಹಾಸಿಗೆಯಡಿಯೋ ಇಟ್ಟುಕೊಳ್ಳುವ ಬದಲು ಖಾತೆಯಲ್ಲಿಟ್ಟರೆ 6 ಪರ್ಸೆಂಟ್ ಬಡ್ಡಿಯೂ ಸಿಗುತ್ತದೆ, ಕಷ್ಟ ಬಂದಾಗ ಖಚಿತವಾಗಿ ನಿಮ್ಮ ಸಹಾಯಕ್ಕೆ ಬರುತ್ತದೆ ಎಂಬ ನಂಬಿಕೆಯೂ ಆರಂಭವಾಯಿತು. ಈಗ ಮೋದಿಯವರು ಬ್ಯಾನ್ ಮಾಡಿರುವ 500, 100 ಸಾವಿರ ನೋಟುಗಳ ಹಿಂದೆ ಇರುವುದೂ ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್ನಂತ ದೇಶ ನಮ್ಮದಾಗಬೇಕು ಎಂದು ಕನಸ್ಸು ಕಂಡರೆ ಸಾಕಾಗುವುದಿಲ್ಲ, ಅಂತಹ ವ್ಯವಸ್ಥೆಯನ್ನು ಮೊದಲು ಅಳವಡಿಸಿಕೊಳ್ಳಬೇಕು, ಎಲ್ಲ ವ್ಯವಹಾರಗಳೂ ಕಾನೂನುಬದ್ಧವಾಗಿಯೇ, ನೈತಿಕವಾಗಿಯೇ ನಡೆಯಬೇಕು, ಅದಕ್ಕೆ ಪ್ರತಿಯೊಬ್ಬನ ಯೋಗದಾನವೂ ಇರಬೇಕು ಎಂಬ ಸಂದೇಶವೇ. ನಮ್ಮಲ್ಲಿ ಸರ್ಕಾರದ ಕಣ್ಣುತಪ್ಪಿ ಇಟ್ಟಿರುವ ದುಡ್ಡನ್ನು ಬ್ಲ್ಯಾಕ್ ಮನಿ ಅಥವಾ ಕಪ್ಪುಹಣ ಎಂದು ಸಾಮಾನ್ಯವಾಗಿ ಕರೆಯುತ್ತೇವೆ. ಅನ್ಯ ದೇಶಗಳಲ್ಲಿ ಇದನ್ನು ಕಪ್ಪುಹಣವೆನ್ನುವುದಿಲ್ಲ, ಡರ್ಟಿ ಮನಿ ಅಥವಾ ಕೊಳಕು ಹಣ ಎನ್ನುತ್ತಾರೆ! ಭ್ರಷ್ಟ ರಾಜಕಾರಣಿಗಳ ಬಳಿ ಇರುವುದು, ರಿಯಲ್ ಎಸ್ಟೇಟ್ ದಣಿಗಳು, ಮೀಟರ್ ಬಡ್ಡೀದಾರರು, ಚಿನ್ನ-ಬೆಳ್ಳಿ ಮಾರಾಟಗಾರರು ಹಾಗೂ ಅದನ್ನು ಕೆಜಿ ಗಟ್ಟಲೆ ತುಂಬಿಕೊಂಡಿರುವವರು, ಕಳ್ಳ ಅಧಿಕಾರಿಗಳು ಕೂಡಿಟ್ಟಿರುವುದಷ್ಟೇ ಕಪ್ಪುಹಣ ಎಂದು ಭಾವಿಸಬೇಡಿ. ತೆರಿಗೆ ಕಟ್ಟದ ಕೃಷಿಯೇತರ ಆದಾಯದ ಹಣವನ್ನೂ ಇದೇ ಕ್ಯಾಟೆಗರಿಯಲ್ಲಿ ನೋಡಬೇಕಾಗುತ್ತದೆ!
ಖಂಡಿತ ನಿಮಗೆ ಕಷ್ಟವಾಗಿದೆ. ಪ್ರತಿನಿತ್ಯವೂ ಉದ್ದುದ್ದ ಸಾಲಿನಲ್ಲಿ ನಿಂತೂ ನಿಂತು ತಾಳ್ಮೆ ಬರಿದಾಗುತ್ತಿದೆ. ಕೃಷಿ ಅಥವಾ ಕೂಲಿ ಕಾರ್ಮಿಕರಿಗೆ ವಾರದ ಬಟವಾಡೆ ಮಾಡುವುದೂ ಕಷ್ಟವಾಗಿ ಬದುಕು ದುಸ್ತರವಾಗಿದೆ, ಕೆಲಸ ಕಾರ್ಯಗಳು ನಿಂತು ಹೋಗಿವೆ. ಮದುವೆಗಳನ್ನು ಮುಂದುಹಾಕಬೇಕಾದ ಸ್ಥಿತಿ ಎದುರಾಗಿದೆ. ಖರೀಫ್ ಬೆಳೆ ಕೊಯ್ಲಿಗೆ ಬಂದು ನಿಂತಿದೆ, ಯಾರು ಖರೀದಿಸುತ್ತಾರೆ ಎಂಬ ಚಿಂತೆ ಕಾಡುತ್ತಿದೆ. ಇಂಥ ವಿಚಾರಗಳನ್ನು ಹೆಕ್ಕಿ ಹೆಕ್ಕಿ ತೋರಿಸುತ್ತಿರುವ ಮಾಧ್ಯಮಗಳೂ ಜನರಲ್ಲಿ ಭಯಭೀತಿ ಹುಟ್ಟಿಸುತ್ತಿವೆ. ಇನ್ನೊಂದೆಡೆ, ಇದು ನರೇಂದ್ರ ಮೋದಿಯವರು ಕೈಹಾಕಿರುವ ಅತಿ ದೊಡ್ಡ ಸವಾಲು ಅಥವಾ ಜೂಜು. ಗೆದ್ದರೆ ಮೋದಿ ಇತಿಹಾಸ ನಿರ್ಮಿಸುತ್ತಾರೆ, ಈ ದೇಶದ ಭವಿಷ್ಯವನ್ನೇ ಬದಲಾಯಿಸಿದ ಕೀರ್ತಿ ಅವರದ್ದಾಗುತ್ತದೆ, ಇಲ್ಲವಾದರೆ ಇದು ಮೋದಿಯವರ ಅತಿ ದೊಡ್ಡ ವೈಫಲ್ಯ ಎಂದು ಇತಿಹಾಸದಲ್ಲಿ ದಾಖಲಾಗುತ್ತದೆ ಎಂಬ ಮಾತು ಮಾಧ್ಯಮದ ವಿಶ್ಲೇಷಣಾಕಾರರ ಬಾಯಿಂದ ಹೊರಬರುತ್ತಿದೆ! ಅದನ್ನು ಕಾಲ ನಿರ್ಧರಿಸುತ್ತದೆ ಎಂದು ಹೇಳುತ್ತಿದ್ದಾರೆ!!
ಆದರೆ…
ಅದನ್ನು ನಿರ್ಧರಿಸುವುದು ಕಾಲವಲ್ಲ, ನಾವು ಮತ್ತು ನೀವು! ಈ ಸವಾಲಿನಲ್ಲಿ ಮೋದಿಯವರು ಯಶಸ್ವಿಯಾದರೆ ದೇಶದ ಪಾಲಿಗೆ ಇತಿಹಾಸ ನಿರ್ಮಾಣವಾದರೆ, ನಮ್ಮ ಪಾಲಿಗೆ ನಮ್ಮ ಮಕ್ಕಳ ಭವ್ಯ ಭವಿಷ್ಯದ ನಿರ್ಮಾಣವಾಗುತ್ತದೆ ಎಂಬುದನ್ನು ಮರೆಯದಿರಿ. ಆಡಳಿತದಲ್ಲಿ ಸುಧಾರಣೆ ತರುವುದು ಆಳುವ ಸರ್ಕಾರ ಅಥವಾ ಅದರ ಚುಕ್ಕಾಣಿ ಹಿಡಿದಿರುವವರ ಕರ್ತವ್ಯವಾದರೆ, ಆ ಸುಧಾರಣೆಗಳನ್ನು ಜಾರಿಗೆ ಮಾಡುವುದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಬೇಕು. ಮೋದಿ ಕೈಹಾಕಿರುವ ಕೆಲಸದಲ್ಲಿ ಸಾರ್ವಜನಿಕರ ಸಹಭಾಗಿತ್ವವೆಂದರೆ ಸರ್ಕಾರದಿಂದ, ರಾಜಕಾರಣಿಗಳಿಂದ, ಅಧಿಕಾರಿಗಳಿಂದ ಪ್ರಾಮಾಣಿಕತೆಯನ್ನು ಬಯಸುವ ಜನರ ವ್ಯವಹಾರವೂ ಪಾರದರ್ಶಕವಾಗಿರಬೇಕು! ಬಿಲ್ ಬೇಕೆಂದರೆ ವ್ಯಾಟ್ ತೆರಬೇಕಾಗುತ್ತದೆ ಎಂಬ ಲೆಕ್ಕಾಚಾರ ಹಾಕುವ ನಮ್ಮ ಮನಸ್ಥಿತಿಯೂ ಬದಲಾಗಬೇಕು. ಆದರೆ ದೇಶದ ವಿಷಯ ಬಂದಾಗ ವೈಯಕ್ತಿಕ ಲಾಭವನ್ನು ಮರೆತು ಸಹಕರಿಸುತ್ತೀರಿ ನೀವೆಲ್ಲ ಎಂದೇ ಮೋದಿಯವರು ಜೀವಮಾನದ ಅತಿ ದೊಡ್ಡ ಅಪಾಯವನ್ನು ಮೈಗೆಳೆದುಕೊಂಡಿದ್ದಾರೆ. ಅವರು ನಂಬಿರುವುದು ಈ ದೇಶದ ಸಾಮಾನ್ಯ ನಾಗರೀಕರನ್ನೇ ಹೊರತು ಕಳ್ಳ ರಾಜಕಾರಣಿಗಳನ್ನಲ್ಲ, ಭ್ರಷ್ಟ ಅಧಿಕಾರಿಗಳನ್ನಲ್ಲ, ದಂಧೆಕೋರರನ್ನೂ ಅಲ್ಲ. ಹಳೇ ಸೀರೆ ಹವಾಯಿ ಚಪ್ಪಲಿ ಹಾಕುವ ಮಮತಾ ಬ್ಯಾನರ್ಜಿ, ಔಟ್ ಷರ್ಟು ಗೂರಲು ಕೆಮ್ಮಿನ ಕೇಜ್ರೀವಾಲ್, ಸರ್ವರಿಗೂ ಸಮಪಾಲು ಸಮಭಾಳು ಎಂದು ಜೀವನದುದ್ದಕ್ಕೂ ಓಳು ಬಿಡುತ್ತಾ ಬಂದಿರುವ ಕಮ್ಯುನಿಸ್ಟರು, ಹಾಸಿಗೆಯಿಂದೇಳಲಾರದೆ ಭವಿಷ್ಯವೇ ಪ್ರಶ್ನಾರ್ಥಕ ಚಿಹ್ನೆಯಾಗಿರುವ ಅಮ್ಮ(ಇಂದು ಎಐಡಿಎಂಕೆ ಪಕ್ಷದ ಸಂಸದರೂ ಸ್ಪೀಕರ್ ಮುಂದೆ ಚೀರಾಡುತ್ತಾ ನಿಂತಿದ್ದರು), ಸ್ವಘೋಷಿತ ದಲಿತರ ಉದ್ಧಾರಕಿ ಮಾಯಾವತಿಯಂಥವರೇ ಇಂದು 500, 1000 ನೋಟಿನ ನಿಷೇಧವನ್ನು ಹಿಂತೆಗೆದುಕೊಳ್ಳಿ ಎಂದು ಬೀದಿಗಿಳಿದಿದ್ದಾರೆಂದರೆ, ಮೋದಿಯವರಿಗೆ ಮೂರು ದಿನಗಳ ಗಡುವಿನ ಧಮಕಿ ಹಾಕುತ್ತಿದ್ದಾರೆಂದರೆ ಎಂತಹ ಭ್ರಷ್ಟ ರಾಜಕೀಯ ಮನಸ್ಸುಗಳು ಈ ದೇಶವನ್ನು ಆಕ್ರಮಿಸಿವೆ ಎಂಬುದನ್ನು ಸ್ವಲ್ಪ ಕಲ್ಪಿಸಿಕೊಳ್ಳಿ. ಬಿಜೆಪಿಯ ಎಷ್ಟೋ ಕಳ್ಳ ಮನಸ್ಸುಗಳು ಕೈಕೈ ಹಿಸುಕಿಕೊಳ್ಳುತ್ತಿದ್ದುದನ್ನು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲೂ ಕಳೆದೆರಡು ದಿನದಿಂದ ನೋಡಿದ್ದಾಯಿತು. ಇಂದು ಮೋದಿ ವರ್ಸಸ್ ಉಳಿದವರೆಲ್ಲ ಎಂಬಂಥ ಪರಿಸ್ಥಿತಿ ರಾಜಕೀಯದಲ್ಲೂ ನಿರ್ಮಾಣವಾಗಿದೆ.
ಮೋದಿಯವರು ಹೇಳಿದಂತೆ ಬೇನಾಮಿ ಆಸ್ತಿಗೆ ಜನವರಿಯಲ್ಲಿ ಕಂಟಕ ಬಂತೆಂದರೆ ನಮ್ಮ ವ್ಯವಸ್ಥೆ ಹೆಚ್ಚೂ ಕಡಿಮೆ ಸ್ವಚ್ಛವಾಗಿ ಬಿಡುತ್ತದೆ. ನಿಮ್ಮ ಬಳಿಯೂ ಮೂರ್ನಾಲ್ಕು ಸೈಟುಗಳಿರಬಹುದು ಅಥವಾ ಮನೆ ಮಂದಿಯೆಲ್ಲರ ಹೆಸರಿನಲ್ಲೂ ಸೈಟು ಮಾಡಿಟ್ಟಿರಬಹುದು. ನ್ಯಾಯಯುತವಾಗಿ ದುಡಿದು ಮಾಡಿದ್ದರೆ ಖಂಡಿತ ಅದರಲ್ಲಿ ತಪ್ಪೂ ಇಲ್ಲ, ಅದಕ್ಕೆ ಯಾವ ಕಂಟಕವೂ ಇಲ್ಲ. ಈ ಬೇನಾಮಿ ಆಸ್ತಿ ಕಾಯಿದೆಯಿಂದ ಕಂಟಕ ಎದುರಾಗುವುದು ರಾಜಕಾರಣಿಗಳಿಗೇ ಹೆಚ್ಚು. ತಮ್ಮ ಶಿಷ್ಯನ, ಚೇಲಾಗಳ, ನಿಷ್ಠರ, ನೆಂಟರಿಸ್ಟರ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿ, ಅದರ ಮೂಲ ಕಾಗದ ಪತ್ರಗಳನ್ನು ತಮ್ಮ ಬಳಿ ಇಟ್ಟುಕೊಂಡು ಆ ಶಿಷ್ಯ, ಚೇಲಾಗಳಿಂದ ಅಸೈನ್ಮೆಂಟ್ ಡೀಡ್(ಪರಭಾರೆ ಪತ್ರ) ಕೂಡ ಮಾಡಿಸಿಟ್ಟುಕೊಂಡಿರುತ್ತಾರೆ. ಅದಕ್ಕೆ ಸ್ಟ್ಯಾಂಪ್ ಡ್ಯೂಟಿ ಕಟ್ಟಿ ರಿಜಿಸ್ಟರ್ ಮಾಡಿಕೊಂಡರೆ ಎಲ್ಲಿ ಗೊತ್ತಾಗಿ ಬಿಡುತ್ತದೋ ಎಂದು ಹೆದರಿ ಮಾಡಿಸಿರುವುದಿಲ್ಲ. ಇಂತಹ ಠಕ್ಕರ ಆಸ್ತಿಗೆ ಕತ್ತರಿ ಬೀಳಲಿದೆ. ಇನ್ನು ಕೆಲವು ಮೀಟರ್ ಬಡ್ಡೀದಾರರು ನಿಮ್ಮಿಂದ ಸೇಲ್ ಡೀಡ್ ಮಾಡಿಸಿಕೊಂಡಿರುತ್ತಾರೆ. ಇನ್ನು ಮುಂದೆ ಅವರಿಗೆ ಬಡ್ಡಿ ಕೊಡಬೇಡಿ, ವಕೀಲರನ್ನು ಸಂಪರ್ಕಿಸಿ ಕೋರ್ಟಿಗೆಳೆಯಿರಿ. “ಸಾಲ ಭಾದೆಯಿಂದ ನೊಂದ ರೈತ ಆತ್ಮಹತ್ಯೆ, ಸಾಲಭಾದೆಯಿಂದ ಸಾವಿಗೆ ಶರಣಾದ ದಂಪತಿ, ಸಾಲಬಾಧೆಯಿಂದ ನೊಂದು ಮಕ್ಕಳಿಗೂ ವಿಷವುಣಿಸಿ ಆತ್ಮಹತ್ಯೆ ಮಾಡಿಕೊಂಡ ದಂಪತಿ” ಇಂತಹ ಶೀರ್ಷಿಕೆಗಳನ್ನು ನೀವು ಆಗಾಗ್ಗೆ ಪತ್ರಿಕೆಗಳಲ್ಲಿ ಓದುತ್ತಿರುತ್ತೀರಿ. ಈ ಸಾಲಭಾದೆ ಯಾವುದೇ ಬ್ಯಾಂಕಿನದ್ದಲ್ಲ, ಮೀಟರ್ ಬಡ್ಡೀದಾರರು ಖಾಲಿ ಚೆಕ್ ಪಡೆದುಕೊಂಡು ಬಾಯಿಗೆ ಬಂದ ಮೊತ್ತವನ್ನು ಬರೆಯುತ್ತೇನೆ ಎಂದು ಹಾಕುವ ಧಮಕಿಗೆ ಹೆದರಿ ಸಾವಿಗೆ ಶರಣಾಗಿರುತ್ತಾರೆ, ಇಲ್ಲವೆ ಬೀದಿಯಲ್ಲಿ ನಿಂತು ಜರಿಯುವ ಬೈಗುಳಗಳಿಗೆ ನೊಂದು ಮರ್ಯಾದೆ ಹೋಯಿತಲ್ಲಾ ಎಂದು ಜೀವ ಕಳೆದುಕೊಂಡಿರುತ್ತಾರೆ. ಇಂತಹ ಬಡ್ಡೀಮಗನೊಬ್ಬನ ಕಾಟಕ್ಕೆ ಹೆದರಿ ಕನ್ನಡದ ಅತ್ಯದ್ಭುತ ವ್ಯಂಗ್ಯಚಿತ್ರ ಬರಹಗಾರ ಎಸ್.ವಿ. ಪದ್ಮನಾಭ ಆತ್ಮಹತ್ಯೆ ಮಾಡಿಕೊಂಡಿದ್ದಿದೆ. ಮಕ್ಕಳ ಎದುರು ಬಡಿಸಿಕೊಂಡ ತಂದೆಯರಿದ್ದಾರೆ, ಮಾನಹೋಯಿತಲ್ಲಾ ಎಂದು ಸೆರಗಿನೊಳಗೆ ಕಣ್ಣೀರನ್ನು ಅದುಮಿಟ್ಟುಕೊಂಡ ತಾಯಂದಿರಿದ್ದಾರೆ.
ನರೇಂದ್ರ ಮೋದಿ ಮಾಡಲು ಹೊರಟಿರುವುದು ಕೇವಲ ಕಪ್ಪುಹಣದ ಮೇಲೆ ಕಡಿವಾಣಕುವುದನ್ನಷ್ಟೇ ಅಲ್ಲ, ಇದೊಂದು ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆ. ನಿಮ್ಮನ್ನು ಗದರಿಸಿನಿಮ್ಮ ಸೈಟಿಗೆ ಅಡ್ವಾನ್ಸ್ ಕೊಟ್ಟು ಬೇರೆಯವರಿಗೆ ಒಂದೂವರೆ ಪಟ್ಟು ಹೆಚ್ಚು ಮೊತ್ತಕ್ಕೆ ಮಾರಿಕೊಂಡ ಎಷ್ಟು ಪುಢಾರಿಗಳು ಹಾಗೂ ಅವರ ಚೇಲಾಗಳಿಲ್ಲ ಹೇಳಿ? ಮೀಟರ್ ಬಡ್ಡಿ ವ್ಯವಹಾರ ಮಾಡುವ ಯಾವನಿಗೆ ರಾಜಕಾರಣಿಗಳ ನಂಟಿಲ್ಲ? 1999ರಲ್ಲಿ ಅರ್ಬನ್ ಲ್ಯಾಂಡ್ ಸೀಲಿಂಗ್ ನಿಯಮವನ್ನು ತೆಗೆದ ನಂತರ ಅದಕ್ಕೂ ಮೊದಲು ಹರಕಲು ಬಟ್ಟೆ ಹವಾಯಿ ಚಪ್ಪಲಿ ಹಾಕಿಕೊಂಡು ರಾಜಕಾರಣಕ್ಕೆ ಬಂದ ಪುಢಾರಿಗಳು ಮತ್ತು ಅವರ ಹಿಂಬಾಲಕರೇ ಅಲ್ಲವೇ ದೊಡ್ಡ ರಿಯಲ್ಎಸ್ಟೇಟ್ ಕುಳಗಳಾಗಿ ಮಾರ್ಪಟ್ಟಿದ್ದು? ನನಗೆ ಬಿರ್ಯಾನಿ ತಿನ್ನಿಸು, ಎಣ್ಣೆ ಕುಡಿಸು, ಕೈಗೆ ಕಾಸು ಕೊಡು ಎಂದು ಯಾವ ಮತದಾರರ ಕೇಳಲು ಬಂದಿದ್ದ? ಕೇಳದೇ ಕೊಟ್ಟು ಜನರನ್ನೂ ಕರಪ್ಟ್ ಮಾಡಲು ಬಳಕೆಯಾಗಿದ್ದು ಇದೇ ಡರ್ಟಿ ಮನಿಯಲ್ಲವೆ? ಹಾದಿ ಬೀದಿಗಳನ್ನು ತಿಪ್ಪೆಗಳನ್ನಾಗಿ ಮಾಡಿರುವ ಈ ರಾಜಕಾರಣಿಗಳ ಫ್ಲೆಕ್ಸ್ ರಾಜಕಾರಣಕ್ಕೆ ಕಡಿವಾಣ ಹಾಕಬೇಕೋ ಬೇಡವೋ?
ಇನ್ನು ನಮ್ಮ ದುಡ್ಡಿಗೂ ಕತ್ತರಿ ಬೀಳುತ್ತದೆ ಎಂದು ಎಲ್ಲರೂ ಭಾವಿಸಬೇಡಿ. ಇಡೀ ದೇಶದಲ್ಲಿ ಚಲಾವಣೆಯಲ್ಲಿರುವುದು 14 ಲಕ್ಷದ 94 ಸಾವಿರ ಕೋಟಿ ಮೌಲ್ಯದ 500, 1000 ರೂಪಾಯಿ ನೋಟುಗಳು. ಇವಿಷ್ಟನ್ನೂ ಬದಲಾಯಿಸುವುದು ಹೈರಾಣದ ಕೆಲಸವಾಗಿದ್ದರೂ ದೇಶದ 125 ಕೋಟಿ ಜನರಲ್ಲಿ ಕಪ್ಪುಹಣ ಹೆಚ್ಚಾಗಿ ಇರುವುದು 30-40 ಲಕ್ಷ ಜನರ ಬಳಿ ಮಾತ್ರ. ಹಾಗಾಗಿ ಎಲ್ಲರೂ ಭಯಪಡಬೇಕಾಗಿಲ್ಲ. ಹಾಗಂತ ನಿರಾಳವಾಗಿ ಕುಳಿತುಕೊಳ್ಳಲೂ ಬಾರದು. ಕಿಸೆಯಲ್ಲಿ ದುಡ್ಡು ಇಟ್ಟುಕೊಂಡು ಓಡಾಡುವ ಅಭ್ಯಾಸಕ್ಕೆ ನಾವೆಲ್ಲ ಒಗ್ಗಿಕೊಂಡಿದ್ದೇವೆ. ಖರೀದಿ ಮಾಡುವಾಗಲೂ ಕಿಸೆಯಿಂದ ನೋಟಿನ ಕಂತೆಯನ್ನು ಹೊರತೆಗೆದರಷ್ಟೇ ಕೆಲವರಿಗೆ ಸಮಾಧಾನ. ಇನ್ನು ಮುಂದೆ ಏನೇ ವ್ಯವಹಾರವಿದ್ದರೂ ಬ್ಯಾಂಕು, ಎಟಿಎಂ, ಡೆಬಿಟ್ ಕಾರ್ಡ್ ಮುಖಾಂತರವೇ ಮಾಡಿ. ಬ್ಯಾಂಕುಗಳಿಗೆ ಯಥೇಚ್ಛವಾಗಿ ಕಡಿಮೆ ವೆಚ್ಚದಲ್ಲಿ ಠೇವಣಿ ಬರುತ್ತದೆ, ಸಾಲ ಕೊಡುವ ಶಕ್ತಿ ತನ್ನಿಂದಾಗಿಯೇ ಬಂದು ರಿಸರ್ವ್ ಬ್ಯಾಂಕಿನಿಂದ ಸಾಲಪಡೆದುಕೊಂಡು ಬಂದು ಹೆಚ್ಚಿನ ಬಡ್ಡಿಗೆ ಜನರಿಗೆ ಕೊಡುವ ಅನಿವಾರ್ಯತೆ ಬ್ಯಾಂಕುಗಳಿಗೂ ಎದುರಾಗುವುದಿಲ್ಲ. ಜತೆಗೆ ಮುಂದಿನ ದಿನಗಳಲ್ಲಿ ಕಪ್ಪು ಹಣ ನಮ್ಮ ಅರ್ಥವ್ಯವಸ್ಥೆಯಿಂದ ದೂರವಾಗಿ ಸರ್ಕಾರಕ್ಕೆ ರಿಸರ್ವ್ ಬ್ಯಾಂಕಿನ ಮೇಲಿರುವ ಋಣಭಾರದ ಕಡಿಮೆಯಾಗಿ ಬಡ್ಡೀ ದರವೂ ಕುಸಿದು ಜನರಿಗೆ ಅನುಕೂಲವಾಗುತ್ತದೆ, ಸರ್ಕಾರದ ಬೊಕ್ಕಸವೂ ತುಂಬಿ ಜನಪರ ಯೋಜನೆಗಳಿಗೆ ಆಗಾಧ ದೇಣಿಗೆ ಬರುತ್ತದೆ. ಇನ್ನು ಕೃಷಿಯಲ್ಲಿ ತೊಡಗಿರುವವರು ಕಾಫಿ ಬೆಳೆಯುವವರು ತೋಟದಲ್ಲಿರುವ ಮೆಣಸು, ಏಲಕ್ಕಿ, ಭತ್ತದ ಗದ್ದೆಯಲ್ಲಿ ಅಡಿಕೆ ಬೆಳೆದವರೂ ಕೂಡಲೇ ನಿಮ್ಮ ಅರ್ಟಿಸಿಯ ನಾಲ್ಕನೇ ಕಾಲಂನಲ್ಲಿ ನಿಮ್ಮ ಜಮೀನಿನಲ್ಲಿ ಬೆಳೆಯುವ ಎಲ್ಲ ಬೆಳೆಗಳನ್ನೂ ನಮೂದನೆ ಮಾಡಿಸಿ, ಆಗ ಹೆಚ್ಚಿನ ಆದಾಯಕ್ಕೆ ಟ್ಯಾಕ್ಸ್ ಕಟ್ಟಬೇಕೇನೋ ಎಂಬ ಆತಂಕವೂ ಇರುವುದಿಲ್ಲ.
ಒಟ್ಟಿನಲ್ಲಿ, ನರೇಂದ್ರ ಮೋದಿಯವರು ಕೈಹಾಕಿರುವ ಜಿಎಸ್ಟಿ ಹಾಗೂ 500, 1000 ರೂ. ನೋಟುಗಳ ನಿಷೇಧ ಇವೆರಡೇ ಸವಾಲುಗಳು ಫಲಕೊಟ್ಟರೆ ಸಾಕು ಭಾರತ ಅನಾಮತ್ತಾಗಿ ಜಗತ್ತಿನ ನಾಲ್ಕೈದು ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿ ಬಿಡುತ್ತದೆ. ಇತ್ತ ದುಡ್ಡು ಮಾಡಬಹುದು ಎಂದೇ ರಾಜಕೀಯಕ್ಕೆ ಮುಗಿಬೀಳುತ್ತಿದ್ದ, ಲಾಭ ಮಾಡಿಕೊಳ್ಳುವುದಕ್ಕಾಗಿ ಮಂತ್ರಿಗಿರಿಗಾಗಿ ಹೋರಾಡುತ್ತಿದ್ದ, ಕಾರ್ಪೋರೇಶನ್ಗಳಲ್ಲಿ ವಕ್ರ್ಸ್ ಕಮಿಟಿ ಮತ್ತು ಹೆಲ್ತ್ ಕಮಿಟಿಗಳೇ ಬೇಕೆನ್ನುವ, ಜಿಲ್ಲಾ ಪಂಚಾಯಿತಿಯಲ್ಲಿ ಸೋಷಿಯಲ್ ವೆಲ್ಫೇರ್ ಕಮಿಟಿ ಕೊಡಿ ಎಂದು ಹಠ ಹಿಡಿಯುವ ಮನಸ್ಥಿತಿಗಳಿಗೆ ರಾಜಕೀಯದಲ್ಲಿ ಲಾಭವಿಲ್ಲ ಎಂಬುದನ್ನು ನೀವು ಗೊತ್ತು ಮಾಡಿದರೆ, ಎಲ್ಲವನ್ನೂ ಆನ್ಲೈನ್ ಮುಖಾಂತರವೇ ವ್ಯವಹಾರ ಮಾಡಿದರೆ, ಯೋಗ್ಯರು, ಸೇವಾ ಮನೋಭಾವ ಹೊಂದಿರುವವರು ಮಾತ್ರ ರಾಜಕೀಯ ಹಾಗೂ ಆಡಳಿತಶಾಹಿಯಲ್ಲಿ ಬರಲು ವೇದಿಕೆ ಸಿದ್ಧವಾಗುತ್ತದೆ.
ಇಷ್ಟಕ್ಕೂ ನೀವು ತೋರುವ ಸಾವಕಾಶ, ಈ ದೇಶವನ್ನು ಸರಿಪಡಿಸಲು ನಿಮಗೆ ಸಿಕ್ಕಿರುವ ಅವಕಾಶ!
November 13, 2016
November 12, 2016
ಇದು ಕೇವಲ ಎರಡು ನೋಟುಗಳ ಕಥೆಯಲ್ಲ, ದೂರವಾಗಲಿದೆ ದೇಶದ ವ್ಯಥೆ!
ಇದು ಕೇವಲ ಎರಡು ನೋಟುಗಳ ಕಥೆಯಲ್ಲ, ದೂರವಾಗಲಿದೆ ದೇಶದ ವ್ಯಥೆ!
—————————————————————-
ಆ ಅಲರ್ಟ್ ಬಂದಾಗ ನವಂಬರ್ 8, ಸಂಜೆ ಏಳೂಮುಕ್ಕಾಲು! ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂಬ ತುರ್ತು ಸೂಚನೆ ಅದಾಗಿತ್ತು. ಅದಕ್ಕೂ ಮುನ್ನ ನೌಕಾಪಡೆ, ಭೂಸೇನೆ ಹಾಗೂ ವಾಯುಸೇನೆಯ ಮುಖ್ಯಸ್ಥರ ಜತೆ ನರೇಂದ್ರ ಮೋದಿಯವರು ದೀರ್ಘ ಸಮಾಲೋಚನೆ ನಡೆಸಿದ್ದರು. ಅದರ ಬೆನ್ನಲ್ಲೇ ಕ್ಯಾಬಿನೆಟ್ ಮೀಟಿಂಗ್. ಬಳಿಕ ದೇಶವನ್ನುದ್ದೇಶಿಸಿ ಭಾಷಣ, ಮರುಕ್ಷಣವೇ ಸೇನಾಪಡೆಗಳ ಸರ್ವೋಚ್ಛ ದಂಡನಾಯಕರಾದ ರಾಷ್ಟ್ರಪತಿಗಳ ಭೇಟಿ.
ಯುದ್ಧ ಘೋಷಣೆ ಖಂಡಿತ ಎಂದೇ ಎಲ್ಲರೂ ಭಾವಿಸಿದರು!
ಮಾಧ್ಯಮಗಳ ಊಹೆಯೂ ಅದೇ ಆಗಿತ್ತು. ಒಂದೋ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬಹುದು, ಇಲ್ಲವೆ ಚೀನಾ ವಿರುದ್ಧ ತೊಡೆತಟ್ಟಬಹುದು ಎಂದು ಎಲ್ಲರೂ ಅಂದುಕೊಂಡರು. ಇಲ್ಲವಾದರೆ ಸೇನಾಪಡೆಗಳ ಮುಖ್ಯಸ್ಥರನ್ನು ಕರೆಸಿ ಮಾತನಾಡಿದ ನಂತರ, ಕ್ಯಾಬಿನೆಟ್ ಮೀಟಿಂಗ್ನಲ್ಲಿದ್ದ ಸಚಿವರನ್ನು ರೂಮಿನಲ್ಲೇ ಕುಳ್ಳಿರಿಸಿ, ತದನಂತರ ರಾಷ್ಟ್ರಪತಿಗಳನ್ನು ಭೇಟಿಯಾಗುವೆ ಎಂದು ಪ್ರಧಾನಿ ದೇಶವಾಸಿಗಳನ್ನುದ್ದೇಶಿಸಿ ನೇರವಾಗಿ ಭಾಷಣ ಮಾಡಲು ಏಕಾಗಿ ಮುಂದಾಗುತ್ತಾರೆ?
ಆದರೆ ಅವರು ಯುದ್ಧ ಸಾರಿದ್ದು ಹೊರಗಿನ ಶತ್ರುಗಳ ವಿರುದ್ಧವಲ್ಲ, ಒಳಶತ್ರುಗಳ ಮೇಲೆ!
ಒಬ್ಬ ತರಕಾರಿ ಮಾರುವ ತಾಯಿ ಕೂಡಿಟ್ಟೂ ಕೂಡಿಟ್ಟೂ ಆಸ್ಪತ್ರೆ ಕಟ್ಟಿದ ಉದಾಹರಣೆ ನಮ್ಮ ಸಮಾಜದಲ್ಲಿದೆ, ಬಿಟ್ಟು ಹೋದ ವ್ಯಾನಿಟಿ ಬ್ಯಾಗನ್ನೋ, ಮೊಬೈಲನ್ನೋ ಹುಡುಕಿಕೊಂಡು ಬಂದು ಕೊಡುವ ಆಟೋ ಡ್ರೈವರ್ಗಳು ನಮ್ಮ ದೇಶದಲ್ಲಿದ್ದಾರೆ, ಒಂದು ತಿಂಗಳ ನಿವೃತ್ತಿ ವೇತನವನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ಕೊಡುವ ಹಿರಿಯ ನಾಗರೀಕರು ನಮ್ಮಲ್ಲಿದ್ದಾರೆ ಎಂದು ಒಬ್ಬ ಸಾಮಾನ್ಯ ಭಾರತೀಯನಲ್ಲಿರುವ ಪ್ರಾಮಾಣಿಕತೆಯನ್ನು ಹೊಗಳುತ್ತಲೇ ಇನ್ನು ಮುಂದೆ ರಾತ್ರಿ 12 ಗಂಟೆ ನಂತರ ನಿಮ್ಮ ಬಳಿ ಇರುವ 500 ರೂಪಾಯಿ, 1000 ರೂಪಾಯಿ ನೋಟುಗಳು ಕೇವಲ ಕಾಗದದ ತುಂಡುಗಳಷ್ಟೇ ಎಂದು ಅಡ್ಡ ಮಾರ್ಗದಲ್ಲಿ ದುಡ್ಡು ಮಾಡಿದ್ದ ಧನಿಕರ ವಿರುದ್ಧ ಸಮರ ಸಾರಿದರು!
ನಮ್ಮ ದೇಶದಲ್ಲಿ 17 ಲಕ್ಷದ 54 ಸಾವಿರ ಕೋಟಿ ರೂಪಾಯಿ ಮೊತ್ತದ ನೋಟುಗಳು ಚಲಾವಣೆಯಲ್ಲಿವೆ. ಅದಲ್ಲಿ 500 ರೂ. ನೋಟುಗಳ ಪ್ರಮಾಣ 45 ಪರ್ಸೆಂಟ್, 1000 ರೂ. ನೋಟುಗಳ ಸಂಖ್ಯೆ 39 ಪರ್ಸೆಂಟ್! ಅಂದರೆ 84 ಪರ್ಸೆಂಟ್ ಒಟ್ಟಾರೆ ನೋಟುಗಳು 500, ಸಾವಿರದಲ್ಲಿವೆ!! ಇಂತಹ ನೋಟುಗಳು ಯಾರ ಬಳಿ ಹೆಚ್ಚಾಗಿವೆ. ಹಳ್ಳಿಯ ರೈತನ ಆದಾಯದ ನೋಟುಗಳು ಎಣಿಕೆಯಾದ ಬೆನ್ನಲ್ಲೇ ಬ್ಯಾಂಕಿನ ಸಾಲಕ್ಕೋ, ಬಡ್ಡಿಯ ಶೂಲಕ್ಕೋ ಹೊರಟುಹೋಗಿ ಬಿಡುತ್ತವೆ. ಕಾರ್ಮಿಕರ, ನೌಕರರ, ಉದ್ಯೋಗಿಗಳ, ಸಾಫ್ಟ್ ವೇರ್ ಎಂಜಿನಿಯರ್ಗಳ ಸಂಬಳದ ನೋಟುಗಳು ಇಎಂಐ ಮೂಲಕವೇ ಹೊರಟು ಹೋಗುತ್ತವೆ, ಉಳಿದವು ಬಾಡಿಗೆ, ದಿನಸಿ, ಡ್ರೆಸ್ಸುಗಳ ರೂಪದಲ್ಲಿ ಕರಗಿ ಒಂದರಿಂದ ಇಪ್ಪತ್ತು ಉಂಡಾಟ, ಇಪ್ಪತ್ತರಿಂದ ಮೂವತ್ತು(ತಿಂಗಳ ತಾರೀಕುಗಳು) ಬಂಡಾಟವೇ ಜೀವನವಾಗಿ ಬಿಡುತ್ತದೆ.
ಹಾಗಿದ್ದರೆ ಈ ನೋಟುಗಳು ಯಾರ ಬಳಿ ಇವೆ ಹಾಗೂ ಮೋದಿ ಸಾರಿದ ಯುದ್ಧ ಯಾರ ಮೇಲೆ?
ಖೋಟಾ ನೋಟು ಹರಿಬಿಟ್ಟು ನಮ್ಮ ಅರ್ಥವ್ಯವಸ್ಥೆಯನ್ನು ಹಾಳುಗೆಡವಲು ಪ್ರಯತ್ನಿಸುತ್ತಿರುವ ಪಾಕಿಸ್ತಾನ ಹಾಗೂ ಅದರ ಭಯೋತ್ಪಾದನೆ, ಡ್ರಗ್ ಮಾಫಿಯಾ ಮಾತ್ರವಲ್ಲ, ನಮ್ಮ ವ್ಯವಸ್ಥೆಯೊಳಗೇ ಇರುವ ಭ್ರಷ್ಟ ರಾಜಕಾರಣಿಗಳು, ಬಾಯಿಗೆ ಬಂದಂತೆ ಬೆಲೆಯೇರಿಸುವ ರಿಯಲ್ ಎಸ್ಟೇಟ್ ಕುಳಗಳು, ಲೋಕಾಯುಕ್ತದ ದಾಳಿಗೆ ಹೆದರಿ ಮೂಟೆಯಲ್ಲಿ ದುಡ್ಡು ಕಟ್ಟಿಡುವ ಸರ್ಕಾರಿ ಅಧಿಕಾರಿಗಳು, ಕುತ್ತಿಗೆ ಸುತ್ತ ನಾಯಿ ಚೈನಿನಷ್ಟು ದೊಡ್ಡದಾದ ಚಿನ್ನದ ಸರ ಹಾಕಿಕೊಂಡು ಸೊಕ್ಕಿನಿಂದ ತಿರುಗುವ ಮೀಟರ್ ಬಡ್ಡಿದಾರರು, ಕಪ್ಪುಹಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವರು, ಎಷ್ಟೇ ದುಡಿದರೂ ಗಲ್ಲಾಪೆಟ್ಟಿಗೆಯನ್ನು ಖಾಲಿ ತೋರಿಸುತ್ತಿದ್ದ ಹೋಟೆಲ್ನವರು ಹಾಗೂ ಇನ್ನು ಮುಂತಾದವರ ವಿರುದ್ಧ! ಅದಕ್ಕಾಗಿಯೇ ನಮಗೆ ತೊಂದರೆಯಾದರೂ ಪರವಾಗಿಲ್ಲ, ಮೋದಿ ಒಳ್ಳೇ ಕೆಲಸ ಮಾಡಿದ್ದಾರೆ ಎಂದು ಸಾಮಾನ್ಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ಸಿನ ರಾಹುಲ್ ಗಾಂಧಿ, ಸಿದ್ದರಾಮಯ್ಯನವರು, ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶ ಚುನಾವಣೆಯಲ್ಲಿ ಹಣದ ಹೊಳೆ ಹರಿಸಲು ನೋಟು ಸ್ಟಾಕು ಮಾಡಿದ್ದ ಅಖಿಲೇಶ್ ಯಾದವ್ ಬಹಿರಂಗವಾಗಿ ಮೋದಿಯವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಬಿಜೆಪಿ ಬಹಳಷ್ಟು ಆತ್ಮಗಳು ಹೇಳಿಕೊಳ್ಳಲಾಗದೆ ಒಳಗೊಳಗೇ ರೋಧಿಸುತ್ತಿವೆ!
ಇಷ್ಟಕ್ಕೂ ಇದು ಕೇವಲ ಎರಡು ನೋಟುಗಳ ಕಥೆಯಲ್ಲ!
ನರೇಂದ್ರ ಮೋದಿಯವರ ನಿರ್ಧಾರದಿಂದ ಅತಿಹೆಚ್ಚು ಕಷ್ಟಕ್ಕೆ ಸಿಲುಕಿರುವವರು ಯಾರು ಗೊತ್ತೆ? ಜನ ವಿಶ್ವಾಸವಿಟ್ಟು ಗೆಲ್ಲಿಸಿದ ಮರುಕ್ಷಣವೇ, ಈ ಚುನಾವಣೆಗೆ 5 ಕೋಟಿ ಖರ್ಚಾಗಿದೆ, ಮುಂದಿನ ಚುನಾವಣೆಗೆ ಕನಿಷ್ಠ 15 ಕೋಟಿ ಬೇಕು ಎನ್ನುತ್ತಾ ಮರ್ಯಾದೆಯಿಂದ ಕೆಲಸ ಮಾಡದೆ ಕಮಾಯಿಗೆ ಇಳಿಯುತ್ತಿದ್ದ ಕಾರ್ಪೊರೇಟರ್ಗಳು, ಶಾಸಕ, ಸಂಸದ, ಸಚಿವರ ಅಥವಾ ಯಾವುದೇ ಜನಪ್ರತಿನಿಧಿಗಳಿಗೆ. ತಾನು ಶಾಸಕ, ಸಂಸದ, ಸಚಿವನಾಗಿರುವುದರ ಜತೆಗೆ ನನ್ನ ಮಗನಿಗೆ, ಮಗಳಿಗೆ, ಹೆಂಡತಿಗೆ, ತಮ್ಮನಿಗೆ, ತನ್ನ ಭಂಟನಿಗೆ, ಚೇಲಾಗಳಿಗೆ ಟಿಕೆಟ್ ಕೊಡಿ ತಂದು ಒತ್ತಡ ಹೇರುತ್ತಿದ್ದ ರಾಜಕಾರಣಿಗಳಿಗೆ. ನಾನು 25 ಕೋಟಿ ಖರ್ಚು ಮಾಡುತ್ತೇನೆ, ಟಿಕೆಟ್ ಕೊಡಿ ಎಂದು ಬರುತ್ತಿದ್ದ ರಿಯಲ್ ಎಸ್ಟೇಟ್ ಹೈದರಿಗೆ. ಎಂಎಲ್ಸಿ ಟಿಕೆಟ್ ಕೊಡಿ, ಸ್ಥಳೀಯ ಸಂಸ್ಥೆಗಳ ಒಂದು ವೋಟಿಗೆ 20 ಸಾವಿರ ಕೊಡುತ್ತೇನೆ, ಬೈಕ್ ಕೊಟ್ಟು ಗೆದ್ದುಕೊಂಡು ಬರುತ್ತೇನೆ ಎಂದು ಬರುತ್ತಿದ್ದವರಿಗೆ. ಕವರ್ನೊಳಗೆ ನೋಟನ್ಹಾಕಿ ದೇವರ ಫೋಟೋ, ಅಕ್ಷತೆ ಇಟ್ಟು ನಿಮ್ಮನ್ನು ಹೆದರಿಸುತ್ತಿದ್ದವರಿಗೆ. ನಿಮ್ಮ ಒಬ್ಬೊಬ್ಬ ಎಂಎಲ್ಎಗೆ ಇಷ್ಟು, ಪಕ್ಷದ ನಿಧಿಗೆ ಇಂತಿಷ್ಟು ಕೊಡುತ್ತೇನೆ, ಎಂಎಲ್ಸಿ ಟಿಕೆಟ್ ಕೊಡಿ, ರಾಜ್ಯಸಭೆಗೆ ಅಭ್ಯರ್ಥಿಯನ್ನಾಗಿ ಮಾಡಿ ಎಂದು ಬರುತ್ತಿದ್ದ ಧನಿಕರಿಗೆ. ಇದನ್ನೆಲ್ಲಾ ನೋಡೀ ನೋಡೀ, ಚುನಾವಣಾ ಸುಧಾರಣೆಗಳನ್ನು ತರಬೇಕು, ರಾಜಕೀಯದಲ್ಲಿ ಹಣದ ಪ್ರಭಾವಕ್ಕೆ ಕಡಿವಾಣ ಹಾಕಬೇಕು ಎಂದು ನೀವೆಲ್ಲ ಒತ್ತಾಯಿಸುತ್ತಿದ್ದಿರಲ್ಲಾ, 500, 1000 ರೂಪಾಯಿ ನೋಟುಗಳನ್ನು ಮೋದಿ ರದ್ದಿ ಮಾಡಿರುವುದಕ್ಕಿಂತ ದೊಡ್ಡ ಚುನಾವಣಾ ಸುಧಾರಣೆ ಬೇರೇನಿದೆ?! ಮಧ್ಯಾಹ್ನದ ಊಟಕ್ಕೆ ಬಿರ್ಯಾನಿ, ಸಂಜೆ ಮಲಗುವ ಮೊದಲು ಎಣ್ಣೆ ಕೊಟ್ಟು ಪ್ರಚಾರಕ್ಕೆ ಹುಡುಗರನ್ನು ಹಚ್ಚುತ್ತಿದ್ದ, ಮತದಾನದ ಹಿಂದಿನ ದಿನ ಕೈಗೆ 500, 1000 ನೋಟು ಕೊಟ್ಟು ನಿಮ್ಮ ಮತದ ಖರೀದಿಗೆ ಬರುತ್ತಿದ್ದ ರಾಜಕಾರಣಕ್ಕೆ ಇದಕ್ಕಿಂತ ದೊಡ್ಡ ಹೊಡೆತ ಬೇಕೇ?
ಇನ್ನು 25, 50 ಕೋಟಿ ಸುರಿಯುತ್ತೇನೆ ಎಂದು ಬರುತ್ತಿದ್ದ ರಿಯಲ್ ಎಸ್ಟೇಟ್ ಕುಳಗಳು ಸೈಟಿಗೆ 10 ಲಕ್ಷ ಬೆಲೆಯಿದ್ದರೆ ಸರ್ಕಾರಿ ನೋಂದಣಿ ಶುಲ್ಕ ಎರಡೋ ಮೂರು ಲಕ್ಷವನ್ನು ವೈಟ್ನಲ್ಲಿ ತೆಗೆದುಕೊಂಡು ಉಳಿದದ್ದನ್ನು ಬ್ಲಾಕ್ನಲ್ಲಿ ಕೊಡಿ ಎಂದು ನೋಟಿನ ಕಂತೆಗಳನ್ನು ಅಟ್ಟಿ ಕಟ್ಟಿಡುತ್ತಿದ್ದರಲ್ಲಾ ಅವರ ಸ್ಥಿತಿ ನೋಡಿ. ಡಿಸೆಂಬರ್ 31ರೊಳಗೆ ತಮ್ಮ ಬಳಿ ಎಷ್ಟು 500, ಎಷ್ಟು 1000 ರೂಪಾಯಿ ನೋಟಿವೆ ಎಂದು ಲೆಕ್ಕ ಕೊಟ್ಟು ಬ್ಯಾಂಕಿಗೆ ಕಟ್ಟಿ ಚೆಕ್ ಮೂಲಕ ನಿಯಮಿತವಾಗಿ ಬಿಡಿಸಿಕೊಳ್ಳಬಹುದು. ಆದರೆ ಕಟ್ಟಿದ ದುಡ್ಡಿಗೆ ನ್ಯಾಯಯುತ ಮೂಲವನ್ನು ತೋರಿಸಬೇಕು. ಇಲ್ಲವಾದರೆ ಟ್ಯಾಕ್ಸ್ ಮತ್ತು ಆ ಟ್ಯಾಕ್ಸ್ ಮೇಲೆ 200 ಪರ್ಸೆಂಟ್ ದಂಡ ತೆರಬೇಕು. ಒಂದು ವೇಳೆ ನಿಮ್ಮ ಬಳಿ 1 ಕೋಟಿ ಇದೆ ಎಂದಾದರೆ ಎರಡೂವರೆ ಲಕ್ಷಕ್ಕೆ ತೆರಿಗೆಯಿಲ್ಲ, ಉಳಿದ ಎರಡೂವರೆ ಲಕ್ಷಕ್ಕೆ 10 ಪರ್ಸೆಂಟ್ ತೆರಿಗೆ (25 ಸಾವಿರ) ನಂತರದ 5 ಲಕ್ಷಕ್ಕೆ 20 ಪರ್ಸೆಂಟ್ ತೆರಿಗೆ (1 ಲಕ್ಷ) ಉಳಿದ 90 ಲಕ್ಷಕ್ಕೆ 30 ಪರ್ಸೆಂಟ್ ತೆರಿಗೆ (27 ಲಕ್ಷ) ಎಂಬ ಲೆಕ್ಕಾಚಾರ ಇಂಟರ್ನೆಟ್, ವಾಟ್ಸಾಪ್, ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ. ಆದರೆ ಈ ನಿಯಮ ಅನ್ವಯವಾಗುವುದು ಸಾಮಾನ್ಯ ಜನರಿಗೆ ಅಂದರೆ ನಿಮ್ಮ ಬಳಿ 5-10 ಲಕ್ಷವಿದ್ದರೆ ಮಾತ್ರ ಎರಡೂವರೆ ಲಕ್ಷಕ್ಕೆ ತೆರಿಗೆ ಇಲ್ಲ, ಉಳಿದದ್ದಕ್ಕೆ 10, 20 ಪರ್ಸೆಂಟ್ ಟ್ಯಾಕ್ಸ್. ನಿಮ್ಮಲ್ಲಿ ಒಂದು ಕೋಟಿ ಅಥವಾ ಕೋಟಿ ಕೋಟಿ ಕಾಳಧನವಿದೆಯೆಂದಾದರೆ ಮೇಲಿನ ನಿಯಮ ಅಥವಾ ಸ್ಲ್ಯಾಬ್ಗಳ್ಯಾವೂ ಅನ್ವಯವಾಗುವುದಿಲ್ಲ. ನೇರವಾಗಿ ಒಟ್ಟು ಹಣಕ್ಕೂ 30 ಪರ್ಸೆಂಟ್ ಟ್ಯಾಕ್ಸ್. ಆ ಟ್ಯಾಕ್ಸ್ ಮೇಲೆ 3 ಪರ್ಸೆಂಟ್ ಎಜುಕೇಶನ್ ಸೆಸ್. ಅಲ್ಲಿಗೆ 30.9 ಪರ್ಸೆಂಟ್ ಆಗುತ್ತದೆ. 30 ಪರ್ಸೆಂಟ್ ಟ್ಯಾಕ್ಸ್ ಮೇಲೆ 200 ಪರ್ಸೆಂಟ್ ದಂಡ. ಅಂತಿಮವಾಗಿ 90.9 ಪರ್ಸೆಂಟ್! ಒಂದು ಕೋಟಿ ಕಟ್ಟಿದರೆ 9 ಲಕ್ಷ ಕೈಯಲ್ಲಿ ಉಳಿಯುತ್ತದೆ!! ಹಾಗಾಗಿ ಮುಂದಿನ ದಿನಗಳಲ್ಲಿ ಯಾವುದೇ ವ್ಯವಹಾರ ವೈಟ್ನಲ್ಲೇ ನಡೆಯಬೇಕಾದ ಅನಿವಾರ್ಯತೆ ಎದುರಾಗಿ ಕೃತಕವಾಗಿ ಬೆಲೆ ಹೆಚ್ಚಳ ಮಾಡುವುದಕ್ಕೆ ಕಡಿವಾಣ ಬಿದ್ದು ಸೈಟು ಬೆಲೆ ಕುಸಿಯಲಿದೆ. ಇದರ ಲಾಭ ಸಾಮಾನ್ಯ ಜನರಿಗೆ, ಸಂಬಳದಲ್ಲಿ ಬದುಕುವ ಉದ್ಯೋಗಿಗಳಿಗೆ ಹಾಗೂ ನ್ಯಾಯಯುತವಾಗಿ ತೆರಿಗೆ ಕಟ್ಟುವವರಿಗೇ ಅಲ್ಲವೆ?
ಇನ್ನು ಮೀಟರ್ ಬಡ್ಡಿದಾರರ ಕಥೆ ಕೇಳಿ. ಛಾಪಾ ಕಾಗದದ ಮೇಲೆ ಬರೆಸಿಕೊಂಡು ನಿಮ್ಮ ಆಸ್ತಿಯನ್ನು ಅಡವಿಟ್ಟುಕೊಂಡು, 15 ಲಕ್ಷವನ್ನು ಚೆಕ್ನಲ್ಲಿ 25 ಲಕ್ಷವನ್ನು ಬ್ಲಾಕ್ನಲ್ಲಿ ಕೊಟ್ಟು ನಿಮ್ಮ ಜೀವ ಹಿಂಡುತ್ತಿದ್ದರಲ್ಲಾ ಅವರನ್ನು ಕೋರ್ಟಿಗೆಳೆಯಿರಿ. ಚೆಕ್ನಲ್ಲಿ ಕೊಟ್ಟಿದ್ದಷ್ಟೇ ಚೆಕ್ಕಕ್ಕೆ ಬರುತ್ತದೆ. ಹೀಗೆ ಮೋದಿ ಬಡ್ಡಿದಾರರನ್ನು ಬಗ್ಗುಬಡಿದು ಅಮಾಯಕರನ್ನು ರಕ್ಷಿಸಿದ್ದಾರೆ.
ಅರ್ಥಶಾಸ್ತ್ರಕ್ಕೆ ಗಣಿತಶಾಸ್ತ್ರದ ರೀತಿಯ ಪರಿಷ್ಕಾರಗಳನ್ನು ತಂದುಕೊಟ್ಟ ಜೆ.ಎಂ. ಕೇನ್ಸ್ ಒಮ್ಮೆ ಹೀಗೆ ಹೇಳಿದ್ದ: “ಅರ್ಥಿಕ ಜಿಜ್ನಾಸೆಗೆ ಬೇಕಾದದ್ದು ತಾರ್ಕಿಕತೆಯ ಜೊತೆಗೆ ಕರಾರುವಕ್ಕಾದ ಅಳತೆಗೆ ಸಿಕ್ಕಿದ ಭಾವನಾತ್ಮಕ ಅಂಶಗಳ ಮತ್ತು ವಾಸ್ತವಿಕ ಸಂಗತಿಗಳ ಪರಿಜ್ನಾನ”. ಕೇನ್ಸ್ ನ ಆರ್ಥಿಕತೆಯ ಕುರಿತಾದ ಪಠ್ಯಗಳನ್ನು ಪದವಿ ಮಟ್ಟದಲ್ಲಿ ಎಕನಾಮಿಕ್ಸ್ ತೆಗೆದುಕೊಂಡ ಒಬ್ಬ ಸಾಮಾನ್ಯ ವಿದ್ಯಾರ್ಥಿಯೂ ಓದಿರುತ್ತಾನೆ. ಪದವಿ ಮುಗಿದ ನಂತರ ಕೇನ್ಸ್ ಎಲ್ಲೋ ಆತ ಎಲ್ಲೋ. ಏಕೆಂದರೆ ಕೇನ್ಸ್ ನ ತತ್ವಗಳು ಸಾಮಾನ್ಯನಿಗೆ ಅಗತ್ಯವಿಲ್ಲ. ಅದರ ಅರಿವು ಇರಬೇಕೆಂಬ ನಿಯಮಗಳೂ ಇಲ್ಲ. ಆದರೆ ಈಗ ಕೇನ್ಸ್ ನ ವ್ಯಾಖ್ಯಾನವನ್ನು ಕೇಳುತ್ತಿದ್ದರೆ ಸಾಮಾನ್ಯ ವ್ಯಕ್ತಿಗೂ ಅದು ಹೌದು ಎನಿಸತೊಡಗುತ್ತದೆ. ಏಕೆಂದರೆ ಈಗ ಕೇನ್ಸ್ ಎಂದಾಗ ಆತನಿಗೆ ಮೋದಿ ನೆನಪಾಗುತ್ತಾರೆ. ಇತಿಹಾಸಕ್ಕೆ ಸರಿದ ಆ ಎರಡು ನೋಟುಗಳು ನೆನಪಾಗುತ್ತವೆ. ಅಂದು ಪದವಿಯಲ್ಲಿ ಓದಿದ್ದ ಹುಡುಗನ ಮುಂದೆ ಮೋದಿ ಈಗ ಮಹಾನ್ ಅರ್ಥಶಾಸ್ತ್ರಜ್ಞನಂತೆ ಬಂದು ನಿಲ್ಲುತ್ತಾರೆ. ಅಂದು ಕೇನ್ಸ್ ತನ್ನ ವ್ಯಾಖ್ಯಾನವನ್ನು ಕೇವಲ ಅರ್ಥಶಾಸ್ತ್ರಜ್ಞನಿಗೆ ಮಾತ್ರ ನೀಡಿದ್ದ. ಈಗ ಅದು ಸಮಸ್ತ ದೇಶಕ್ಕೇ ಅರ್ಥವಾಗುತ್ತದೆ. ಮೋದಿ ಮಾಡಿದ ಮಾರ್ಪಾಡುಗಳ ಹಿರಿಮೆಯನ್ನೊಮ್ಮೆ ಅಂದಾಜಿಸಿ. ಇತಿಹಾಸವನ್ನು ನೋಡಿದರೂ ಸುಮಾರು ಮೂರು ಸಾವಿರ ವರ್ಷಗಳ ಹಿಂದಿನಿಂದಲೇ ನಾಗರಿಕತೆಯ ವಿಕಾಸ ಪ್ರಕೃತಿಯ ಮೇಲೆ ಒತ್ತಡಗಳನ್ನು ಹೇರುತ್ತಾ ಬಂದಿದ್ದರೂ ಅದು ಮಾನವನ ಅಗತ್ಯ ಮತ್ತು ಸಂಪನ್ಮೂಲಗಳಗಳ ನಡುವೆ ಸಮತೋಲನವನ್ನು ಸ್ಥಾಪಿಸುವ ಪ್ರಯತ್ನಗಳು ನಡೆಸಿದ್ದನ್ನು ಕಾಣುತ್ತೇವೆ. ಈಗ ಮೋದಿ ಸರ್ಕಾರ ಮಾಡಿದ್ದು ಅದನ್ನೇ ಅಲ್ಲವೇ? ಆಧುನಿಕ ಅರ್ಥ ಜಗತ್ತಿನಲ್ಲಿ ದೇಶದ ತುರ್ತನ್ನು ಮನಗಂಡ ಅಪರೂಪದ ಜನನಾಯಕನ ಕಾಲಕ್ಕೆ ಸಾಕ್ಷಿಯಾದೆವೆಂದು ಜನ ಇಂದು ಸಂತಸ ಪಡುತ್ತಿದ್ದಾರೆ. ಏಕೆಂದರೆ ಆರ್ಥಿಕತೆಯು ಈಗ ಯಾಂತ್ರಿಕತೆಯಿಂದ ಹೊರಬಂದು ಸಮಾಜದ ಅಭಿಮುಖ ದಿಕ್ಕಿನತ್ತ ನಡೆಯುತ್ತಿದೆ. ಇದನ್ನು ಕಾಣಲು ನಾವು ಸ್ವಾತಂತ್ರ್ಯ ಬಂದು 70 ವರ್ಷ ಕಾಯಬೇಕಾಯಿತು!
1997ರವರೆಗೆ “ಏಷ್ಯನ್ ಹುಲಿ”ಗಳೆಂದು ಕರೆಯಲ್ಪಡುತ್ತಿದ್ದ ಥೈಲ್ಯಾಂಡ್, ದ.ಕೊರಿಯಾ, ಫಿಲಿಫೈನ್ಸ್, ಮಲೇಶ್ಯಾ, ಇಂಡೋನೇಶ್ಯಾ ಮೊದಲಾದ ರಾಷ್ಟ್ರಗಳು ತಮ್ಮ ಮುಳುಗಿಹೋಗುತ್ತಿರುವ ಆರ್ಥಿಕ ನೀತಿಯನ್ನು ರಕ್ಷಿಸಿಕೊಳ್ಳುವುದಕ್ಕೆ ನಾನಾ ತಂತ್ರಗಳನ್ನು ಹೂಡಿ ಫಲಿಸದೆ ಸೋತುಹೋದವು. ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ವಿಶ್ವಸಂಸ್ಥೆ ಮತ್ತಿತರ ಜಾಗತಿಕ ಹಣಕಾಸು ಸಂಸ್ಥೆಗಳು ಆ ದೇಶಗಳತ್ತ ಧಾವಿಸಿದವು. ಒಮ್ಮೆ ಈ ಸಂಸ್ಥೆಗಳ ಸುಳಿಗೆ ಸಿಕ್ಕಿದ ಈ ರಾಷ್ಟ್ರಗಳು ಅದರಿಂದ ಹೊರಬರಲು ಹೆಣಗಿದವು. ಈಗಲೂ ಹೆಣಗುತ್ತಿವೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ಏಷ್ಯನ್ ಹುಲಿಗಳ ಅವಸ್ಥೆ ಗೊತ್ತಿತ್ತು. ಅದಕ್ಕೆ ಅವರು ಬ್ರಿಕ್ಸ್ ಬ್ಯಾಂಕ್ ಕಟ್ಟಿದರು. ಅದರ ನಂತರ ಅವರ ಆರ್ಥಿಕ ನಡೆಗಳೆಲ್ಲಾ ಸರ್ಕಾರದ ಯೋಜನೆಗಳಾಗಿ ಅನುಷ್ಠಾನವಾದದ್ದು ನಮ್ಮ ಕಣ್ಣಮುಂದೆಯೇ ಇದೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಕಪ್ಪುಹಣದ ತನಿಖೆಗಾಗಿ ಎಸ್ಐಟಿ ರಚನೆ ಮಾಡಿದರು. ತದನಂತರ ಪ್ರತಿಯೊಂದೂ ಕುಟುಂಬಕ್ಕೂ ಒಂದೊಂದು ಬ್ಯಾಂಕ್ ಖಾತೆ ಕೊಡುವ ಪ್ರಧಾನಮಂತ್ರಿ ಜನಧನ್ ಯೋಜನೆ ಜಾರಿಗೆ ತಂದರು. 21 ಕೋಟಿ ಹೊಸ ಅಕೌಂಟ್ಗಳು ತೆರೆದವು. ಅಕೌಂಟ್ ತೆರೆಯುವುದರಿಂದ ಏನು ಬಂತು ಬಹಳ ಜನ ಕೇಳಿದರು. ಅದ ಬೆನ್ನಲ್ಲೇ ವಿದೇಶಗಳಲ್ಲಿ ಹಣವಿಟ್ಟಿರುವವರ ಹಿಂದೆ ಬಿದ್ದರು, 80 ಸಾವಿರ ಕೋಟಿ ಪತ್ತೆ ಮಾಡಿದರು. ಕೂಡಲೇ ಸ್ವಯಿಚ್ಛೆಯಿಂದ ಆದಾಯ ಘೋಷಣೆ ಮಾಡಿ, ಹಣದ ಮೂಲ ಕೇಳುವುದಿಲ್ಲ, 45 ಪರ್ಸೆಂಟ್ ಬಡ್ಡಿ ಕಟ್ಟಿ, ಉಳಿದದ್ದನ್ನು ವೈಟ್ ಮಾಡಿಕೊಳ್ಳಿ ಎಂದರು. 65 ಸಾವಿರ ಕೋಟಿ ಸಂಗ್ರಹವಾಗಿ 29.5 ಸಾವಿರ ಕೋಟಿ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಬಂತು. ಈ ಕಪ್ಪುಹಣ ಹೊಂದಿರುವವರನ್ನು ಮೂಲೋತ್ಪಾಟನೆ ಮಾಡುವ ಸಲುವಾಗಿ 500, 1000 ರೂ. ನೋಟುಗಳನ್ನೇ ರದ್ದಿ ಮಾಡಿದ್ದಾರೆ. ಇನ್ನು ಮುಂದೆ ಬ್ಲಾಕ್ಮನಿ ವಿಚಾರದಲ್ಲಿ ಯಾರೊಬ್ಬರೂ ಚಕಾರವೆತ್ತುವ ಹಾಗಿಲ್ಲ. ಎರಡು ವರ್ಷದಲ್ಲಿ ಮೋದಿ ಏನು ಮಾಡಿದ್ದಾರೆ ಎಂದು ಕೇಳುತ್ತಿದ್ದಿರಲ್ಲಾ, ಆ ಪ್ರಶ್ನೆಗೆ ಉತ್ತರ ಸಿಕ್ಕಿತಲ್ಲಾ? ಪ್ರತಿಯೊಬ್ಬ ವ್ಯಕ್ತಿಯೂ ಬ್ಯಾಂಕ್ ಖಾತೆಯನ್ನು ಹೊಂದಬೇಕು ಎಂದು ಅಂದು ಪ್ರಧಾನಿಗಳು ಹೇಳಿದಾಗ ತುಂಬಾ ಜನಕ್ಕೆ ಅರ್ಥವಾಗಿರಲಿಲ್ಲ. ಸರ್ಕಾರ ಕೈಗೊಂಡ ಪ್ರತೀ ಯೋಜನೆಯ ಹಿಂದೆ ಒಂದು ದೊಡ್ಡ ಆರ್ಥಿಕ ಸುಧಾರಣೆಯ ಯೋಚನೆಯಿತ್ತು, ಗೊತ್ತಾಯಿತಲ್ಲಾ?
ಇಷ್ಟಕ್ಕೂ ಇದು ಎರಡು ನೋಟಿನ ಕಥೆಯಲ್ಲ, ದೂರವಾಗಿಸಲಿದೆ ದೇಶದ ವ್ಯಥೆ.
November 11, 2016
November 10, 2016
Pratap Simha's Blog
- Pratap Simha's profile
- 58 followers
