Pratap Simha's Blog, page 10

March 5, 2021

March 3, 2021

February 26, 2021

February 24, 2021

February 23, 2021

February 22, 2021

January 3, 2019

December 31, 2017

ಕಾಂಗ್ರೆಸಿಗರು ಪ್ರತಿಭಟಿಸಬೇಕಾದ ಜಾಗ ಗೋವಾ ಕಾಂಗ್ರೆಸ್ ಅಧ್ಯಕ್ಷರ ಮನೆ ಅಂಗಳವೇ ಹೊರತು ಜಗನ್ನಾಥ ಭವನವಲ್ಲ

ಕಾಂಗ್ರೆಸಿಗರು ಪ್ರತಿಭಟಿಸಬೇಕಾದ ಜಾಗ ಗೋವಾ ಕಾಂಗ್ರೆಸ್ ಅಧ್ಯಕ್ಷರ ಮನೆ ಅಂಗಳವೇ ಹೊರತು ಜಗನ್ನಾಥ ಭವನವಲ್ಲ


ಇದೇನು ತುಂಬಾ ಜಟಿಲವಾದ ಸಮಸ್ಯೆಯೂ ಅಲ್ಲ, ಬಗೆಹರಿಸಲಾಗದಂಥ ವಿವಾದವೂ ಅಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಹುಡುಕಲು ಇಷ್ಟೆಲ್ಲಾ ನಾಟಕವನ್ನು ಆಡಬೇಕಾಗಿಯೂ ಇರಲಿಲ್ಲ. ಅದಕ್ಕೆ ಮೊದಲು ಆಗಬೇಕಾಗಿರುವುದು ವಿನಾಕಾರಣ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಕಟಕಟೆಗೆ ಎಳೆದು ತಂದು ನಿಲ್ಲಿಸುವ, ಬಿಜೆಪಿಯನ್ನು ದೂಷಿಸುವ, ಹಿಂಬಾಗಿಲ ರಾಜಕಾರಣ ಮಾಡುವ ಮೂಲಕ ಈ ಹಿಂದಿನ ತನ್ನ ಇಬ್ಬಂದಿತನದ ನಿಲುವನ್ನು ಮರೆಮಾಚಿಕೊಳ್ಳುವ ರಾಜಕೀಯ ತಂತ್ರಗಾರಿಕೆಯನ್ನು ಕಾಂಗ್ರೆಸ್ ಬಿಡಬೇಕು ಅಷ್ಟೇ. ಅದಕ್ಕೂ ಮೊದಲು ವಿಷಯಕ್ಕೆ ಬರೋಣ.


ದಿನಾಂಕ: 24-11-2006

ಕೆ. ವೋಹ್ರಾ, ಹಿರಿಯ ಜಂಟಿ ಆಯುಕ್ತ, ಕೇಂದ್ರ ಜಲಸಂಪನ್ಮೂಲ ಖಾತೆ, ಭಾರತ ಸರಕಾರ, ಶ್ರಮ ಶಕ್ತಿ ಭವನ, ಮಾರ್ಗ, ಹೊಸದೆಹಲಿ. ನಾನು ಈ ಮಧ್ಯಂತರ ಅರ್ಜಿಯನ್ನು ಓದಿ, ಅರ್ಥೈಸಿಕೊಂಡು ದೃಢೀಕರಿಸುತ್ತಿದ್ದೇನೆ ಹಾಗೂ ಈ ಅಫಿಡವಿಟ್ಟಿನಲ್ಲಿರುವ ಎಲ್ಲ ಅಂಕಿ ಅಂಶ, ಸನ್ನಿವೇಶಗಳಿಗೆ ಖುದ್ದು ಸಾಕ್ಷೀಭೂತನಾಗಿ ಭಾರತ ಸರಕಾರದ ಪರವಾಗಿ ಪ್ರಮಾಣೀಕರಿಸುತ್ತಿದ್ದೇನೆ.


26-04-2006 ರಂದು ಕೇಂದ್ರ ಜಲ ಆಯೋಗದ(ಸಿಡಬ್ಯ್ಲೂಸಿ) ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಈ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಮಹದಾಯಿ ನದಿಯಿಂದ 7.56 ಟಿಎಂಸಿ ನೀರನ್ನು ಬೇರೆಡೆಗೆ ತಿರುಗಿಸುವ ಕರ್ನಾಟಕದ ಪ್ರಸ್ತಾವಕ್ಕೆ ಮುಖ್ಯಮಂತ್ರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕೇಂದ್ರ ಸರಕಾರ (ಜಲಸಂಪನ್ಮೂಲ ಖಾತೆ) ಒಂದು ನಿರ್ಧಾರಕ್ಕೆ ಬಂದಿದೆ. ಈ ವಿವಾದವನ್ನು ಮಾತುಕತೆ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಲು ಸಾಧ್ಯವಿಲ್ಲ. ಹಾಗಾಗಿ ಅಂತರ್ ರಾಜ್ಯ ಜಲವಿವಾದ ಕಾಯಿದೆ-1956 ಹಾಗೂ ಅಂತರ್ ರಾಜ್ಯ ಜಲವಿವಾದ ನಿಯಮ 1959ರ ಅನ್ವಯ ಮುಂದಿನ ಕ್ರಮಕ್ಕೆ ಸಚಿವಾಲಯ ಮುಂದಾಗಿದೆ.


ಹೀಗೆಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲಾಯಿತು. ಆಗಿನ ಕೇಂದ್ರ ಸರಕಾರ ಯಾರದಿತ್ತು? ಕಾಂಗ್ರೆಸ್ಸಿನದ್ದು. ಆಗ ಪ್ರಧಾನಿಗಳು ಯಾರಾಗಿದ್ದರು? ಡಾ. ಮನಮೋಹನ್ ಆಗಿನ ಗೋವಾ ಸರಕಾರ ಯಾರದ್ದಾಗಿತ್ತು? ಕಾಂಗ್ರೆಸಿನದ್ದು. ಕಾಂಗ್ರೆಸ್ ಮುಖ್ಯಮಂತ್ರಿ ಯಾರಾಗಿದ್ದರು? ಪ್ರತಾಪ್ ಸಿಂಗ್ ರಾಣೆ. ಇಲ್ಲಿಗೇ ಮುಗಿಯಲಿಲ್ಲ!


ದಿನಾಂಕ: 29-05-2007

ಗೋವಾದಲ್ಲಿ ವಿಧಾನಸಭೆ ಚುನಾವಣೆ ಏರ್ಪಾಡಾಗಿತ್ತು. ಚುನಾವಣಾ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಲು ಕಾಂಗ್ರೆಸ್ ಅಧಿನಾಯಕಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಬಂದಿದ್ದರು. ಚುನಾವಣೆಯಲ್ಲಿ ಗೆಲ್ಲಬೇಕೆಂದು ಬಹಳ ವೀರಾವೇಶದಿಂದ ಮಾತಿಗಿಳಿದರು. ‘ಯಾವುದೇ ಕಾರಣಕ್ಕೂ ಮಹದಾಯಿ ನದಿ ನೀರನ್ನು ಬೇರೆಡೆಗೆ ತಿರುಗಿಸಲು ಬಿಡುವುದಿಲ್ಲ ಎಂದರು. ಮುಂದುವರಿದು, ಈ ಮಾತಿಗೆ ನಾನು ಎಂದು ಸಾರ್ವಜನಿಕವಾಗಿ ಶಪಥ ಮಾಡಿದರು! ಪರಿಣಾಮವಾಗಿ ಮತ್ತೆ ಗೋವಾದಲ್ಲಿ ಕಾಂಗ್ರೆಸ್ ಸರಕಾರ ಬಂತು! ಸೋನಿಯಾ ಗಾಂಧಿಯವರ ವಾಗ್ದಾನ ಹಾಗೂ ತಂತ್ರಗಾರಿಕೆ ಫಲ ಕೊಟ್ಟಿತು. ದಿಗಂಬರ್ ಕಾಮತ್ ಮುಖ್ಯಮಂತ್ರಿಯಾದರು. 2005ರಿಂದ 2012ರವರೆಗೂ ಗೋವಾದಲ್ಲಿ ಇದ್ದಿದ್ದು ಕಾಂಗ್ರೆಸ್ ಸರಕಾರವೇ. ಇಷ್ಟೂ ಕಾಲ ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಇದ್ದಿದ್ದೂ ಕಾಂಗ್ರೆಸ್ ಸರಕಾರವೇ. ಕೋರ್ಟಿನಾಚೆ ಸೌಹಾರ್ದಯುತ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಕೇಂದ್ರ ಸರಕಾರ ಅಫಿಡವಿಟ್ ಸಲ್ಲಿಸಿದ್ದು, ಸರಕಾರದ ಅಭಿಪ್ರಾಯ ಕೇಳದೆ, ಗಮನಕ್ಕೆ ತಾರದೆ ನ್ಯಾಯಮಂಡಳಿ ಅಥವಾ ನ್ಯಾಯಾಧೀಕರಣವನ್ನು (ಟ್ರಿಬ್ಯೂನಲ್) ಕೇಂದ್ರ ಸರಕಾರ ಸ್ಥಾಪನೆ ಮಾಡಿದ್ದೂ ಇದೇ ಕಾಲದಲ್ಲಿ!


ಹಾಗಿರುವಾಗ, ಈಗ ಮತ್ತ್ಯಾರನ್ನೋ ಏಕೆ ದೂಷಿಸುತ್ತಿದ್ದೀರಿ ಕಾಂಗ್ರೆಸ್ಸಿಗರೇ? ಬಿಜೆಪಿ ರಾಜ್ಯ ಕಚೇರಿಯೆದುರು ಧರಣಿ ಕೂರಿಸಿದ್ದಿರಲ್ಲಾ ಆಗ ಇವೆಲ್ಲಾ ನೆನಪಾಗಲಿಲ್ಲವೇ? ಹಾಗಾದರೆ ನೀವು ಮೋಸ ಮಾಡಿದ್ದು ಯಾರನ್ನು?

ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕು ಎಂದು ಬೊಬ್ಬೆ ಹೊಡೆಯುತ್ತಿದ್ದೀರಲ್ಲ, ನಿಮ್ಮ ಪ್ರಧಾನಿ ಮನಮೋಹನ್ ಸಿಂಗರು 2006ರಿಂದ 2014ರವರೆಗೂ ನಿದ್ರೆ ಕೋರ್ಟಿನಾಚೆ ಸೌಹಾರ್ದಯುತವಾಗಿ ಬಗೆಹರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮುಂದೆ ಹೇಳಿದವರು ಈಗೇಕೆ ನರೇಂದ್ರ ಮೋದಿಯವರತ್ತ ಬೆರಳು ತೋರುತ್ತಿದ್ದೀರಿ? ಟ್ರಿಬ್ಯೂನಲ್ ರಚನೆಯಾದಾಗ ಕೇಂದ್ರ ಸರಕಾರದಲ್ಲಿ ಮಂತ್ರಿಗಳಾಗಿದ್ದ ಐವರು ಕರ್ನಾಟಕ ಕಾಂಗ್ರೆಸಿಗರು (ಮೋಯ್ಲಿ, ಕೃಷ್ಣ, ಖರ್ಗೆ, ಮುನಿಯಪ್ಪ, ಆಸ್ಕರ್) ಏಕೆ ಧ್ವನಿಯೆತ್ತಿರಲಿಲ್ಲ? ಪ್ರಧಾನಿ ಮನಮೋಹನ್ ಸಿಂಗ್ ಮಧ್ಯಸ್ಥಿಕೆ ವಹಿಸಬೇಕೆಂದು ಆಗೇಕೆ ಒತ್ತಾಯಿಸಿರಲಿಲ್ಲ? ನ್ಯಾಯಮಂಡಳಿ ರಚಿಸುವ ಮೊದಲು ನಮ್ಮನ್ನು ಸಂಪರ್ಕಿಸಿ, ನಮ್ಮ ಗಮನಕ್ಕೆ ತನ್ನಿ, ಕಳಸಾ-ಬಂಡೂರಿ ಕಾಮಗಾರಿ ಮುಂದುವರಿಯುವುದಕ್ಕೆ ಅಡ್ಡಿಪಡಿಸಬೇಡಿ ಎಂದು ಆಗಿನ ಬಿ.ಎಸ್. ಯಡಿಯೂರಪ್ಪನವರು ಮನವಿ ಮಾಡಿಕೊಂಡಿದ್ದರೂ ಗಮನಕ್ಕೇ ತಾರದೆ ಏಕಾಏಕಿ ನ್ಯಾಯಮಂಡಳಿಯನ್ನು ಕಾಂಗ್ರೆಸ್ ರಚನೆ ಮಾಡಿದ್ದೇಕೆ?


2010ರಲ್ಲಿ ನ್ಯಾಯಮಂಡಳಿಯನ್ನು ರಚನೆ ಮಾಡಿ ಕೈತೊಳೆದುಕೊಳ್ಳಲು ಪ್ರಯತ್ನಿಸಿದ್ದೇನೋ ಸರಿ. ಆದರೆ ಅದಕ್ಕೆ ಬೇಕಾದ ಸ್ಥಳ, ಸಿಬ್ಬಂದಿ, ಸಲಕರಣೆ ನೀಡಲು 2012ರವರೆಗೂ, ಸುಮಾರು 3 ವರ್ಷಗಳ ಕಾಲ ವಿಳಂಬ ಮಾಡಿದ್ದೇಕೆ? ಇದೆಲ್ಲಕ್ಕಿಂತ ಮುಖ್ಯವಾಗಿ 2012ರಲ್ಲಿ ನ್ಯಾಯಮಂಡಳಿಯ ಕಲಾಪ ಆರಂಭವಾದ ಮೇಲೆ ಗೋವಾ ಸರಕಾರ ಮಧ್ಯಂತರ ಅರ್ಜಿ ಸಲ್ಲಿಸಿ ಕಳಸಾ-ಬಂಡೂರಿ ಕಾಮಗಾರಿಯನ್ನು ತಡೆಯಲು ಯತ್ನಿಸಿದಾಗ ನ್ಯಾಯಮಂಡಳಿ ತೀರ್ಪು ಕೊಡುವವರೆಗೂ ಒಂದು ಹನಿ ನೀರನ್ನೂ ಕಳಸಾ-ಬಂಡೂರಿ ಯೋಜನೆಯಿಂದ ಮಲಪ್ರಭಕ್ಕೆ ಹರಿಸುವುದಿಲ್ಲ ಎಂದು 2014, ಏಪ್ರಿಲ್ 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಚ್ಚಳಿಕೆ ಬರೆದುಕೊಟ್ಟಿದ್ದೇಕೆ?


ಹಾಗಂತ ಕಾಂಗ್ರೆಸ್‌ನತ್ತ ಬೆರಳು ತೋರಿಸಿ ಬಿಜೆಪಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಖಂಡಿತ ಸಾಧ್ಯವಿಲ್ಲ! ಈ ವಿವಾದವೇ ಕಾಂಗ್ರೆಸಿನ ಪಾಪದ ಕೂಸು ಎಂದು ಕೈತೊಳೆದುಕೊಳ್ಳುವುದಕ್ಕೂ ಆಗುವುದಿಲ್ಲ!

ಒಬ್ಬ ಬಿಜೆಪಿ ಸಂಸದನಾಗಿ ಹೇಳುತ್ತಿಲ್ಲ, ಇವತ್ತು ಬಹಳಷ್ಟು ಸಂಘ-ಸಂಸ್ಥೆಗಳು ಕಳಸಾ-ಬಂಡೂರಿ ಹೋರಾಟಕ್ಕೆ ಕೈಜೋಡಿಸಿರಬಹುದು, ಚಲನಚಿತ್ರರಂಗದ ಕೆಲವರೂ ಧರಣಿಯಲ್ಲಿ ಕುಳಿತೆದ್ದು ಹೋಗಿರಬಹುದು. ಈ ಯೋಜನೆಯ ಜಾರಿಗೆ ಇದುವರೆಗೂ ಪ್ರಾಮಾಣಿಕವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇ ಬಿಜೆಪಿ. 2002, ಏಪ್ರಿಲ್ 30ರಂದು ಈ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದೇ ಅಟಲ್ ಬಿಹಾರಿ ವಾಜಪೇಯಿ ಸರಕಾರ!


ಈ ಯೋಜನೆಗೆ 100 ಕೋಟಿ ರು. ಹಣ ನೀಡಿ ಶಂಕುಸ್ಥಾಪನೆ ಮಾಡಿ, ಯೋಜನೆ 75 ಪರ್ಸೆಂಟ್ ಪ್ರಗತಿಯಾಗಲು ಕಾರಣೀಭೂತರಾಗಿದ್ದೇ ಆಗಿನ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಬಿಎಸ್ ಯಡಿಯೂರಪ್ಪನವರು. ಅವರ ಜತೆಗೆ ನಿಂತವರು ನೀರಾವರಿ ಸಚಿವ ಈಶ್ವರಪ್ಪ, ಶೆಟ್ಟರ್, ಪ್ರಹ್ಲಾದ್ ಜೋಶಿ, ಬೊಮ್ಮಾಯಿಯವರು.


ಮೊದಲೇ ಹೇಳಿದಂತೆ ಇದೇನು ಬಗೆಹರಿಸಲಾಗದಂಥ ಸಮಸ್ಯೆಯಲ್ಲ. ಮಹದಾಯಿ ನದಿ ಹುಟ್ಟುವುದು ಮುಖ್ಯವಾಗಿ ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿ ಹರಿದು ಅರಬ್ಬೀ ಸಮುದ್ರ ಸೇರುವುದು ಗೋವಾದ ಪಣಜಿ ಬಳಿ. ಕರ್ನಾಟಕದಲ್ಲಿ ಇವಳು ಮಹದಾಯಿಯಾದರೆ ಗೋವಾದಲ್ಲಿ ಮಾಂಡೋವಿಯಾಗುತ್ತಾಳೆ. ಸುಮಾರು 2032 ಚದರ ಕಿ.ಮೀ. ಅಚ್ಚುಕಟ್ಟು ಪ್ರದೇಶದಿಂದ ನೀರನ್ನು ಪಡೆದುಕೊಳ್ಳುವ ಮಹದಾಯಿ ಕರ್ನಾಟಕದಲ್ಲಿ 375, ಮಹಾರಾಷ್ಟ್ರದಲ್ಲಿ 77 ಹಾಗೂ ಗೋವಾದಲ್ಲಿ 1580 ಚದರ ಕಿ.ಮೀ. ಅಚ್ಚುಕಟ್ಟು ಹೊಂದಿದ್ದಾಳೆ. ಕೇಂದ್ರ ಜಲ ಅಂದಾಜಿನ ಪ್ರಕಾರ ಇಡೀ ಜಲಾನಯನ ಪ್ರದೇಶ ಸುಮಾರು 200 ಟಿಎಂಸಿ ನೀರನ್ನು ಹೊಂದಿದೆ, ಅದರಲ್ಲಿ ಕರ್ನಾಟಕದಿಂದ ಸೇರುವುದು 45 ಟಿಎಂಸಿ.


ಇತ್ತ ಕೃಷಿ ಪ್ರದೇಶ ಬಿಡಿ ಕುಡಿಯುವ ನೀರಿಗೇ ಹಾಹಾಕಾರ ಎದುರಿಸುತ್ತಿರುವ ಧಾರವಾಡ, ಗದಗ, ಬೆಳಗಾವಿಗಳು ಬಗಲಲ್ಲೇ ಇವೆ. ಹಾಗಾಗಿ ಕಳಸಾ ನಾಲೆಯಿಂದ 3.56 ಹಾಗೂ ಬಂಡೂರಿ ನಾಲೆಯಿಂದ 4 ಟಿಎಂಸಿ ನೀರನ್ನು ಮಹದಾಯಿಯಿಂದ ಮಲಪ್ರಭಾಕ್ಕೆ ತಿರುಗಿಸಿ ಈ ನಗರಗಳಿಗೆ ಕುಡಿಯುವ ನೀರು ನೀಡುವ ಕೂಗು ಆರಂಭವಾಗಿ ಮೂರೂವರೆ ಆದವು. ಆದರೆ ಅದಕ್ಕೆ ನಿಜವಾಗಿಯೂ ಒತ್ತು ಸಿಕ್ಕಿದ್ದು 2002ರಲ್ಲಿ ಅಟಲ್ ಸರಕಾರ ತಾತ್ವಿಕ ಒಪ್ಪಿಗೆ ನೀಡಿದ ನಂತರ. ಅದಾದ ಬಳಿಕ ಗೋವಾದ ಕಾಂಗ್ರೆಸ್ ಸರಕಾರ ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದು, ಕೇಂದ್ರದ ಕಾಂಗ್ರೆಸ್ ಸರಕಾರ ಅಫಿಡವಿಟ್ಟು ಕೊಟ್ಟಿದ್ದು, ಸೋನಿಯಾ ಗಾಂಧಿಯವರು ಗೋವಾದ ಪರ ನಿಲುವು ತಳೆದಿದ್ದು, ಹೇಳದೇ ಕೇಳದೇ ನ್ಯಾಯಾಧೀಕರಣ ರಚನೆ ಮಾಡಿದ್ದು ಹಾಗೂ ಸಿದ್ದರಾಮಯ್ಯನವರು ಮುಚ್ಚಳಿಕೆ ಬರೆದುಕೊಟ್ಟಿದ್ದು ಎಲ್ಲವೂ ನಡೆದುಹೋದವು.


ಆದರೆ…

ಬಹಳ ವಿಷಾದದ ಸಂಗತಿಯೆಂದರೆ ಹಿಂದೆ ನ್ಯಾಯಾಧೀಕರಣ ಟಿಎಂಸಿ ನೀರು ಬಿಡುವಂತೆ ಮಧ್ಯಂತರ ಆದೇಶ ನೀಡುವುದಕ್ಕೆ ನಕಾರ ವ್ಯಕ್ತಪಡಿಸಿದ ಕೂಡಲೇ ನಿದ್ರೆಯಿಂದೆದ್ದ ಕಾಂಗ್ರೆಸಿಗರು ಪ್ರಧಾನಿ ಮೋದಿಯವರನ್ನು ದೂರಲು ಆರಂಭಿಸಿದ್ದಾರೆ! ಹಾಗೆ ದೂರುವ ಮೊದಲು ಸ್ವಲ್ಪ ಅರ್ಥ ಮಾಡಿಕೊಳ್ಳಿ. ಎರಡು ವರ್ಷದ ಹಿಂದೆ ಬರದ ಹಿನ್ನೆಲೆಯಲ್ಲಿ ಮಹದಾಯಿ ವಿಚಾರ ಮತ್ತೆ ನನೆಗುದಿಗೆ ಬಿದ್ದಾಗ 2015, ಅಗಸ್‌ಟ್ 25ರಂದು ಪ್ರಧಾನಿ ಬಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ವಪಕ್ಷ ನಿಯೋಗವನ್ನು ಕೊಂಡೊಯ್ದಿದ್ದರು. ಕೋರ್ಟಿನಾಚೆ ಬಗೆಹರಿಸಿಕೊಡಿ ಎಂದು ಕೇಳಿದಾಗ ನೀವು ಮೊದಲು ಗೋವಾ ಮತ್ತು ವಿರೋಧ ಪಕ್ಷಗಳ(ಕಾಂಗ್ರೆಸ್) ಜತೆ ಮಾತನಾಡಿ ಮನವೊಲಿಸಿ, ನಂತರ ನಾನು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಮತ್ತೆ ತನ್ನ ವರಸೆ ತೋರಿಸಿದ ಕಾಂಗ್ರೆಸ್, ಪ್ರಧಾನಿ ಹೇಳಿದ ಕೆಲಸವನ್ನು ಮರೆತು ಮಧ್ಯಸ್ಥಿಕೆ ವಹಿಸಲು ಮೋದಿ ನಕಾರ ಎಂದು ಹೇಳಿಕೆ ಕೊಟ್ಟರು.


ಗೋವಾ, ಮಹಾರಾಷ್ಟ್ರಗಳ ವಿರೋಧ ಪಕ್ಷಗಳ ಜತೆ ಕನಿಷ್ಠ ನೀವಾದರೂ ಮಾತನಾಡಿ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಜ್ಯ ಬಿಜೆಪಿ ಮಾಡಿಕೊಂಡರೆ, ಆಯಾ ರಾಜ್ಯಗಳಲ್ಲಿ ವಿರೋಧ ಪಕ್ಷಗಳು (ಕಾಂಗ್ರೆಸ್) ತಮ್ಮ ರಾಜಕಾರಣಕ್ಕಾಗಿ ವಿರೋಧ ಮಾಡಿಯೇ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದರು!


ಇಂಥ ಮನಸ್ಥಿತಿ ಏನನ್ನು ತೋರಿಸುತ್ತದೆ ಹೇಳಿ?

ಈ ಮಧ್ಯೆ, ಯಾವುದಾದರೂ ವಿಷಯ ನ್ಯಾಯಾಧೀಕರಣದ ಮುಂದಿರುವಾಗ ಅಹವಾಲು ಸಲ್ಲಿಸಿರುವ ಎಲ್ಲ ರಾಜ್ಯಗಳೂ ಒಪ್ಪಿದರೆ ಮಾತ್ರ ಸಂಧಾನ ಪ್ರಕ್ರಿಯೆಯನ್ನು ಆರಂಭಿಸಬಹುದು ಎಂದು ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವೆ ಉಮಾಭಾರತಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು. ಇತ್ತ ದೆಹಲಿಯ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿ ಬಿಜೆಪಿ ರಾಜ್ಯ ಅಧ್ಯಕ್ಷರು ಹಾಗೂ ರೈತನಾಯಕರಾದ ಬಿ.ಎಸ್. ಯಡಿಯೂರಪ್ಪನವರು ‘ಕಾಂಗ್ರೆಸಿಗರು ಗೋವಾ ಹಾಗೂ ಮಹಾರಾಷ್ಟ್ರದಲ್ಲಿರುವ ಪ್ರತಿಪಕ್ಷದವರ(ಕಾಂಗ್ರೆಸ್) ಮನವೊಲಿಸಿ, ನಾವು ಬಿಜೆಪಿ ಮುಖ್ಯಮಂತ್ರಿಗಳ ಮನವೊಲಿಸುತ್ತೇವೆ’ ಎಂದು ಸ್ಪಷ್ಟವಾಗಿ ಹೇಳಿದ್ದರು. ಮೊನ್ನೆ ಕೂಡಾ ಕಾಂಗ್ರೆಸಿನ ದುರುಳ ರಾಜಕಾರಣದ ಹೊರತಾಗಿಯೂ ರೈತರೆಡೆಗೆ ಯಡಿಯೂರಪ್ಪನವರು ಧಾವಿಸಿದ್ದರು. ಗೋವಾ ಮುಖ್ಯಮಂತ್ರಿಯವರನ್ನು ಸಂಪರ್ಕಿಸಿದ್ದರು. ಆದರೂ ಕಾಂಗ್ರೆಸಿಗರ ಪೂರ್ವಗ್ರಹಪೀಡಿತ ದ್ವೇಷದ ರಾಜಕಾರಣ ಮುಂದುವರಿಯುತ್ತಿದೆ. ಬಿಜೆಪಿಯನ್ನು ದೂಷಿಸಲೆಂದೇ ಚಳವಳಿಯ ನಾಟಕ ನಡೆಯುತ್ತಿದೆ.


ಕೆಲವು ಪ್ರಶ್ನೆಗಳಿಗೆ ಕಾಂಗ್ರೆಸ್ ನಾಯಕರಾಗಲೀ ಮುಖ್ಯಮಂತ್ರಿಯಾಗಲೀ ಉತ್ತರ ನೀಡುತಿಲ್ಲ . ಕಳೆದ ಆಗಸ್ಟ್ ನಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಗೋವಾ ಸರಕಾರವನ್ನು ಮನವೊಲಿಸುವ ಕೆಲಸ ನಾವು ಮಾಡುತ್ತೇವೆ, ನೀವು ಗೋವಾ ಕಾಂಗ್ರೆಸ್ ಮನವೊಲಿಸಿ ಎಂದು ಕೇಳಿಕೊಂಡಾಗ, ಮಾತನಾಡುತ್ತೇನೆ ಎಂದಿದ್ದಿರಲ್ಲ ನಿಜಕ್ಕೂ ಮಾತನಾಡಿದಿರಾ? ಮಾತಾಡಿದ್ದರೆ ಅದರ ಫಲಶ್ರುತಿ ಏನು? ಮತ್ತೇಕೆ ಗೋವಾ ಕಾಂಗ್ರೆಸ್ ವಿರೋಧಿಸುತ್ತಿದೆ? ನಿಜ ಸಂಗತಿಯನ್ನೇಕೆ ಮುಚ್ಚಿಡುತ್ತಿದ್ದೀರಿ? ಕುಡಿಯುವ ಸಲುವಾಗಿ ನೀರು ಬಿಡಲು ಸಿದ್ಧನಿದ್ದೇನೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಬಿಎಸ್‌ವೈಗೆ ಪತ್ರ ಬರೆದಿದ್ದನ್ನ ಗೋವಾ ಕಾಂಗ್ರೆಸ್ ಅಧ್ಯಕ್ಷ ನಾಯ್‌ಕ್ ಏಕೆ ವಿರೋಧಿಸುತ್ತಿದ್ದಾರೆ? ನೀವು ಧರಣಿ ಕೂರಬೇಕಾದ ಸ್ಟಳ ಗೋವಾ ಕಾಂಗ್ರೆಸ್ ಅಧ್ಯಕ್ಷರ ಮನೆ ಎದುರು ಇದೆ! ಆದರೆ ನೀವು ಜಗನ್ನಾಥ ಭವನ ಆರಿಸಿಕೊಂಡಿದ್ದಿರಿ ಏಕೆ?


ಈ ಹಿಂದೆ ಎತ್ತಿನಹೊಳೆ ಯೋಜನೆಯ ಕನಸ್ಸು ಭಿತ್ತಿ ಮೊಯಿಲಿ 2 ಚುನಾವಣೆ ಗೆದ್ದರು, ಅಲ್ಲದೆ ನಾಲ್ಕುಮುಕ್ಕಾಲು ವರ್ಷ ರಾಜ್ಯ ಆಳಿದಿರಿ. ಆದರೆ ಆಡಿದ್ದೇನು, ಮಾಡಿದ್ದೇನು? ಆಗ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರದ ಜನರೊಂದಿಗೆ ಆಟವಾಡಿದ್ದು ಸಾಲದೇ? ಈಗ ಉತ್ತರ ಕರ್ನಾಟಕದ ರೈತರ ನಿಮ್ಮ ಕಣ್ಣು ಬಿತ್ತೇ? ಮೊನ್ನೆ ತಾನೇ ಉತ್ತರ ಕರ್ನಾಟಕ ಬಂದ್ ಮಾಡಿಸಿ, ಬಿಜೆಪಿ ಕಾರ್ಯಾಲಯಗಳ ಮೇಲೆ ಕಲ್ಲೆಸೆಸಿದಿರಲ್ಲ ಪ್ರಾಮಾಣಿಕವಾಗಿ ಹೇಳಿ ನಿಮ್ಮ ಬಂದ್ ಯಾರ ವಿರುದ್ಧ? ಗೋವಾ ಕಾಂಗ್ರೆಸಿಗರ ಮನವೊಲಿಸುವ ಪ್ರಯತ್ನವನ್ನೇ ಮಾಡದ ನಿಮ್ಮ ವಿರುದ್ಧವೋ? ನೀರು ಬಿಡುವ ವಾಗ್ದಾನ ಮಾಡಿದ ಪರಿಕ್ಕರ್ ವಿರುದ್ಧ ಹರಿಹಾಯುತ್ತಿರುವ ಗೋವಾ ಕಾಂಗ್ರೆಸ್ ಅಧ್ಯಕ್ಷ ನಾಯ್ಕ್ ವಿರುದ್ಧವೋ? ಅಥವಾ ಮಾಂಡೋವಿಯಿಂದ ನೀರನ್ನು ಬೇರೆಡೆಗೆ ತಿರುವಲು ಬಿಡುವುದಿಲ್ಲ ಎಂದ ಸೋನಿಯಾ ವಿರುದ್ಧವೋ? ಕೊನೆಯದಾಗಿ ನಿಮಗೆ ನಿಮಗೆ ಕನ್ನಡಿಗರ ಬಗ್ಗೆ ಕಾಳಜಿಯಿದ್ದರೆ, ಗೋವಾ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಯನ್ನು ಖಂಡಿಸಿ ಹಾಗು ಈ ಹಿಂದೆ ಮಹದಾಯಿ ನದಿ ನೀರನ್ನು ತಿರುವಲು ಬಿಡುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದು ಸರಿಯಲ್ಲ ಎನ್ನಿ ನೋಡೋಣ?


 


 •  0 comments  •  flag
Share on Twitter
Published on December 31, 2017 00:57

December 29, 2017

Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.