ವಿಜಯನಗರ ಸಾಮ್ರಾಜ್ಯವೂ ತಮ್ಮ ಶತ್ರುಸೇನೆಯ ಆಕ್ರಮಣವನ್ನು ತಡೆಯಲು ಒಂದು ಏರ್ಪಾಟು ಮಾಡಿದ್ದರು, ಇವರ ಚಕ್ರಾಧಿಪತ್ಯದ ಪ್ರಮುಖ ಸ್ಥಳಗಳಲ್ಲಿ ಅಧಿಕಾರ ಮಾಡಲು ಪ್ರಮುಖ ಜನರನ್ನು ನೇಮಿಸಿದ್ದರು, ಇವರನ್ನು ಸಾಮಾನ್ಯವಾಗಿ ನಾಯಕರು ಅಥವಾ ಪಾಳಯಗಾರರೆಂದು ಕರೆಯುತ್ತಿದರು ಅವರಲ್ಲಿ ಒಂದು ವರ್ಗವೇ "ಚಿತ್ರದುರ್ಗದ ಪಾಳೆಯಗಾರರು" ಇವರು ನಡೆಸಿದ 211 ವರ್ಷಗಳ ಆಡಳಿತದ ಒಂದು ಪಕ್ಷಿನೋಟವೇ ಈ ಪುಸ್ತಕ.
ಚಿತ್ರದುರ್ಗದ ಸಂಸ್ಥಾನವನ್ನು ಕಾಮಗೇತಿ ವಂಶಜರು ಎರಡು ಸಂತತಿಯಾಗಿ ಆಳುತ್ತಾರೆ
ದಳವಾಯಿ ಮುದ್ದಣ್ಣ, ಮುಮ್ಮಡಿ ಮದಕರಿನಾಯಕನನ್ನು ಕೊಲ್ಲಿಸಿ ತಾನೇ ಸರ್ವಾಧಿಕಾರಿಯಾಗಿ ಮೆರೆದು ಮತ್ತಿ ಸಂತತಿಯನ್ನು ವಿರ್ವಂಶ ಮಾಡಿದನು.
ಎರಡನೆಯ ಸಂತತಿ - ಬಿಳಿಚೋಡು ಸಂತತಿ 1. ಭರಮಪ್ಪ ನಾಯಕ 2. ಹಿರೇಮದಕರಿನಾಯಕ 3. ಇಮ್ಮುಡಿ ಕಸ್ತೂರಿ ರಂಗಪ್ಪನಾಯಕ 4. ಕಡೇ ಮದಕರಿನಾಯಕ
ಈ ಎರಡು ಸಂತತಿಗಳು ಭರ್ತಿ 211 ವರ್ಷಗಳು ಆಳುತ್ತಾರೆ.
ನಮಗೆಲ್ಲ ಚಿತ್ರದುರ್ಗದ ಇತಿಹಾಸದ ಬಗ್ಗೆ ಪ್ರಶ್ನಿಸಿದಾಗ ಸಿಗುವ ಹೆಸರುಗಳು ಮತ್ತು ವಿವರಗಳು ಅತ್ಯಲ್ಪ. ಎಲ್ಲರೂ ಮದಕರಿನಾಯಕ ಎಂಬ ಹೆಸರು ಹೇಳುತ್ತಾರೆ ಎಲ್ಲೋ ಕೆಲವರು ಭರಮಪ್ಪ ನಾಯಕರ ಹೆಸರು ಹೇಳಬಹುದು... ಆದರೆ ಅವರಷ್ಟೇ ಇತರ ವೀರರು ಕೂಡ ಈ ಸಂಸ್ಥಾನವನ್ನು ಆಳಿದ್ದಾರೆ, ಅವರ ಬಗ್ಗೆ ಯಾರೂ ಬೆಳಕು ಚೆಲ್ಲೇ ಇಲ್ಲ. ಉದಾ : ಮತ್ತಿತಿಮ್ಮಣ್ಣನಾಯಕ, ಒಂದು ಪ್ರಸಂಗವಿದೆ, ಸಾಳುವ ನರಸಿಂಗರಾಯನ ಪಾಳಯಕ್ಕೆ ಹೋಗಿ ಅವನ ಖಾಸ ಕುದುರೆಯನ್ನು ಬಿಚ್ಚಲು ಹೋಗಿ ಆ ಕುದುರೆಯ ಸದ್ದಿಗೆ ಕಾಸದಾರನಿಗೆ ಎಚ್ಚರವಾಗಲು, ತಿಮ್ಮಣ್ಣನಾಯಕ ಅಲ್ಲೇ ನೆಲದಮೇಲೆ ಕಾಣದೆ ಮಲಗುತ್ತಾನೆ, ಕಾಸದಾರನು ಬಿಚ್ಚಿ ಹೋದ ಗೂಟವನ್ನು ನೆಲದ ಮೇಲೆ ಇರಿಸಿ ಗಟ್ಟಿಯಾಗಿ ಬಡಿಯುತ್ತಾನೆ, ಅದು ಅಲ್ಲೇ ಮಲಗಿದ್ದ ತಿಮ್ಮಣ್ಣನಾಯಕನ ಬಲಗೈ ಅಂಗೈಯನ್ನು ಹಾದು ನೆಲಕ್ಕೆ ಬಲವಾಗಿ ಇಳಿಯುತ್ತದೆ ... ಆ ಗೂಟಕ್ಕೆ ಕುದುರೆ ಕಟ್ಟಿ ಚಾಕರ ಮಲಗುತ್ತಾನೆ. ತಿಮ್ಮಣ್ಣನಾಯಕ ಎಡಗೈಯಿಂದ ಬಾಕನ್ನು ತೆಗೆದು ತನ್ನ ಬಲಗೈ ಮಣಿಕಟ್ಟನ್ನು ಚರ ಚರನೇ ಕೊಯ್ದುಕೊಂಡು ಅದೇ ಕುದುರೆಯನ್ನು ಏರಿ ದುರ್ಗಕ್ಕೆ ಹೋಗುತ್ತಾನೆ, ಹೀಗೆ ಅವನು "ಮೋಟುಕೈ ಮತ್ತಿ ತಿಮ್ಮಣ್ಣ ನಾಯಕ" ಎಂಬ ಕೀರ್ತಿಗೆ ಪಾತ್ರನಾಗುತ್ತಾನೆ.
ಇಷ್ಟಕ್ಕೆ ನಿಲ್ಲದ ಈತನ ಪರಾಕ್ರಮ, ಸಾಳುವ ನರಸಿಂಗ ಕೂತುಕೊಳ್ಳುವ ಪಟ್ಟದಾನೆಯನ್ನು ನೀರು ಕೊಡಿಸಲು ಬಂದಾಗ ತಿಮ್ಮಣ್ಣ ನಾಯಕ ತನ್ನ ಬಿಲ್ಲನ್ನು ಕಾಲಲ್ಲಿ ಮೆಟ್ಟಿ ಬಾಣಾವನ್ನು ಏರಿಸಿ, ಎಡಗೈಯಲ್ಲಿ ತುಯಿದು ಬಿಟ್ಟನು, ಅದು ಆನೆಗೆ ತಗುಲಿ ನೆಲಕ್ಕೆ ಬಿದ್ದು ಪ್ರಾಣ ಬಿಡುತ್ತದೆ.
ಹೀಗೆ ಎಲ್ಲರ ಪರಾಕ್ರಮ ಇಲ್ಲಿ ದಾಖಲಾಗಿದೆ... ಕಸ್ತೂರಿ ರಂಗಪ್ಪರ ಶೌರ್ಯವೂ ಅಭಿನಂದನಾರ್ಹ...
ಇನ್ನೂ ಕಡೆ ಹಿರೇಮದಕರಿನಾಯಕನ ವಿವರವಂತೂ ಹಬ್ಬದೂಟ, ಹೈದರಾಲಿ ಮತ್ತು ಹಿರೇಮದಕರಿನಾಯಕನ ಯುದ್ಧದ ವಿವರ ತುಂಬಾ ಇಷ್ಟವಾಗುತ್ತದೆ.
ನಮ್ಮ ಸಾಹಿತ್ಯ ಲೋಕದಲ್ಲಿ ಚಿತ್ರದುರ್ಗದ ಇತಿಹಾಸವನ್ನು ಆಧಾರಿಸಿ ಅನೇಕ ಪುಸ್ತಕಗಳು ಬಂದಿವೆ ತ. ರಾ. ಸು ಮತ್ತು ಬಿ ಎಲ್ ವೇಣು ರವರು ಬರೆದ ಇಂತಹ ಪುಸ್ತಕಗಳಿಗೆ ಸಾಮಾನ್ಯವಾಗಿ ಕಂಡು ಬರುವ ಆಕರ ಗ್ರಂಥ ಈ ಪುಸ್ತಕ... ಇಂತಹ ಪುಸ್ತಕ, ಜ್ಞಾನದ ಬಡವನಿಗೆ ಸಿಗುವ ಅತಿ ಮೌಲ್ಯ ವಜ್ರದಂತೆ... ನಮ್ಮ ಭವ್ಯ ಇತಿಹಾಸವನ್ನು ತಿಳಿಯಲು ಅವಣಿಸುವ ಸಹೃದಯಿಗಳಿಗೆ ಇಷ್ಟವಾಗುವ ಪುಸ್ತಕ.