"ಶ್ರೀರಾಮನ ಕಾಯುವಿಕೆ; ಕಾಯುವುದರಲ್ಲೇ ಬಾಳುವಿಕೆ; ಸಂಕಲ್ಪವೇ ಶಕ್ತಿಯಾದ ಶಬರಿ ಶ್ರೀ ರಾಮನಿಗೆ ಗುಡಿಯ ಕಟ್ಟಲಿಲ್ಲ; ತನಗಾಗಿ ಗುಡಿಸಲು ಕಟ್ಟಿಕೊಂಡಳು ಶ್ರೀ ರಾಮನಿಗೆ ಮಂತ್ರಪೂಜೆ ಮಾಡಲಿಲ್ಲ; ಹೂ ಬಿಡುವ ಗಿಡಬಳ್ಳಿ ಬೆಳೆಸಿದಳು ಶ್ರೀ ರಾಮನಿಗೆ ಭಕ್ಷಭೋಜದ ಎಡೆಯಿಡಲಿಲ್ಲ; ಹಣ್ಣು ಹಂಪಲು ತಿನಿಸಿದಳು ಶ್ರೀ ರಾಮನಿಗೆ ಕಣ್ಣು ಮುಚ್ಚಿ ತಪಸ್ಸು ಮಾಡಲಿಲ್ಲ; ಕಣ್ತೆರೆದು ಕಾಯುವ ಮನಸಾದಳು ಶ್ರೀ ರಾಮನಿಗೆ ಪೂಜಾರಿಯಾಗಲಿಲ್ಲ; ತಾಯಿಯಾದಳು ಶಬರಿ ಸಿದ್ದ ಮಾದರಿಗಳನ್ನು ಮೀರಿದಳು ಪಂಚೇಂದ್ರಿಯಗಳ ಪೊರೆ ಕಳಚಿದಳು ಈ ಶಬರಿ? ಶಬರಿ ಸಮೂಹ ಸಿದ್ಧವಾಗಬೇಕು; ಶಬರಜ್ಜಿ ಹೊಸದಾಗಿ ನಮ್ಮೊಳಗೆ ಹುಟ್ಟಬೇಕು"
ಇದು ಕಾದಂಬರಿಯಲ್ಲಿ ಬರುವ ಜನಪದ ಗೀತೆ. ಈ ರೀತಿಯ ಕಾದಂಬರಿಗಳನ್ನು ಓದಿದಾಗ ಪ್ರತಿ ಬಾರಿ ಅನಿಸುತ್ತದೆ. ತೀರಾ ದೊಡ್ಡ ಹೆಸರು ಮಾಡಿದ ಲೇಖಕರ ಬರಹಗಳ ಕಾದಂಬರಿಗಳ ನಡುವೆ ಇಂತಹ ಕಾದಂಬರಿಗಳು ಎಲೆಮರೆಕಾಯಿಯಾಂತಾಗಿ ಬಿಡುತ್ತವೆ. ಬರಗೂರರು ಸಾಕಷ್ಟು ಪ್ರಸಿದ್ಧಿಯಾಗಿದ್ದಾರೆ ಆದರೆ ದುರದೃಷ್ಟವಶಾತ್ ಈ ಪುಸ್ತಕದ ಕುರಿತು ಯಾರೂ ಹೇಳಿರಲೇ ಇಲ್ಲ. ಗೆಳೆಯರೊಬ್ಬರು ನಾಗತಿಹಳ್ಳಿ ಚಂದ್ರಶೇಖರ್ ಅವರ ಚುಕ್ಕಿ ಚಂದ್ರಮರ ನಾಡಿಯಲ್ಲಿ ಪುಸ್ತಕದ ಬಗ್ಗೆ ಹೇಳುವಾಗ ಈ ಶಬರಿಯ ಉಲ್ಲೇಖ ಮಾಡಿದ್ದರು.
ಅದ್ಯಾವ ದೈವ ಪ್ರೇರೇಪಣೆಯಿಂದಾಗಿ ಈ ಪುಸ್ತಕ ಕೊಳ್ಳುವ ಮನಸಾಯಿತೋ ಗೊತ್ತಿಲ್ಲ. ಪ್ರೇರೇಪಿಸಿದ ಪ್ರತಿಯೊಂದು ಶಕ್ತಿಗೂ ಧನ್ಯವಾದ ಹೇಳಬೇಕು. ನನ್ನೊಳಗಿನ ಓದುಗನನ್ನು ಗಂಟೆಗಟ್ಟಲೆ ಕಾಡಿದ, ಕಲಕಿದ, ಆವರಿಸಿಕೊಂಡ, ಆವಾಹಿಸಿಕೊಂಡ ಅತ್ಯದ್ಭುತ ಪುಸ್ತಕ - ಶಬರಿ. ಪ್ರಾಯಶಃ ಯಾವ ಪುಸ್ತಕವೂ ಇಲ್ಲಿಯವರೆಗೂ ಇಷ್ಟು ಮನಕಲಕಿಲ್ಲ!!!
ನಾಲ್ಕಾರು ದಶಕಗಳ ಹಿಂದಿನ ಕಥೆಯೆಂದರೇ ತಪ್ಪಾಗುವುದಿಲ್ಲ. ಇಲ್ಲಿ ಬರುವ ಪ್ರತಿಯೊಂದು ಸನ್ನಿವೇಶವನ್ನು ಬರಗೂರರು ಓದುಗರ ಒಡಲಿಗೆ ಬೆಂಕಿ ಮಳೆಯಂತೆ ಸುರಿದಿದ್ದಾರೆ. ಮಡಿಲಿಗೆ ಕೆಂಡದಂತೆ ಕಟ್ಟಿದ್ದಾರೆ. ಇದು ಹಾಡಿಯ ಕಥೆ, ಹಟ್ಟಿಯ ಕಥೆ, ದಬ್ಬಾಳಿಕೆಯ ಕಥೆ, ಸ್ವಾತಂತ್ರ್ಯದ ಕಥೆ, ಸರ್ವಾಧಿಕಾರದ ಕಥೆ, ಶೋಷಣೆಯ ಕಥೆ, ಹಕ್ಕುಗಳ ಕಥೆ, ಬಡತನದ ಕಥೆ, ಸಾವು ನೋವುಗಳ ಕಥೆ, ಮೌಢ್ಯದ ಕಥೆ, ಕುರುಡು ಸಂಪ್ರದಾಯದ ಕಥೆ, ಆಧುನೀಕರಣದ ಕಥೆ, ಈ ರೀತಿ ಹಲವಾರು ಚಹರೆಗಳಲ್ಲಿ ಈ ಕಾದಂಬರಿಯನ್ನು ನೋಡಬಹುದು. ಆದರೆ ನನ್ನ ಮಟ್ಟಿಗೆ ಶಬರಿ ಪ್ರೇಮಕಥೆ... ದಿವ್ಯ ಪ್ರೇಮ ಕಥೆ...
ಆ ಶಬರಿಯಂತೆ ಈ ಶಬರಿಯೂ ಕಾಯುವುದರೊಂದಿಗೆ ಪುಸ್ತಕ ಆರಂಭವಾಗುತ್ತದೆ. ಮೊದಲ ಪುಟದಿಂದಲೇ ಅನೂಹ್ಯವಾದ ಕುತೂಹಲ ಓದುಗನೆದೆಯೊಳಗೆ ಮನೆ ಮಾಡುತ್ತದೆ. ನಂತರ ಬರುವ ಮತ್ತೊಂದು ದೃಶ್ಯ ಮೊದಲು ಹುಟ್ಟಿದ ಕುತೂಹಲವನ್ನು ದುಪ್ಪಟ್ಟು ಮಾಡುತ್ತದೆ. ಆಮೇಲೆ ಪುಸ್ತಕ ಸತ್ಯವಾಗಿಯೂ ರೋಲರ್ ಕೋಸ್ಟರ್ ರೈಡ್! ೨೭೨ ಪುಟಗಳನ್ನು ಒಂದೇ ಗುಕ್ಕಿನಲ್ಲಿ ಓದಿಸಿಕೊಳ್ಳುತ್ತದೆ.
ಪುಸ್ತಕದ ಮತ್ತೊಂದು ವಿಶೇಷತೆಯೆಂದರೆ ಸ್ಥಾಯಿಭಾವವನ್ನೇ ಉಳಿಸುವುದಿಲ್ಲ. ಭಾವಗಳ ಕೋಲಾಹಲವೆದ್ದಿರುತ್ತದೆ. ಒಮ್ಮೆ ಗೆಲುವು, ಒಮ್ಮೆ ಸೋಲು, ಒಮ್ಮೆ ಸಂತೃಪ್ತಿ, ಒಮ್ಮೆ ಅತೃಪ್ತಿ. ಎಷ್ಟು ಅಸಹಾಯಕರೆನಿಸುತ್ತೀವೋ ಅಷ್ಟೇ ಧೈರ್ಯಶಾಲಿ ಧ್ಯೇಯಶಾಲಿಗಳೂ ಆಗುತ್ತೇವೆ. ಆ ಹಾಡಿಯವರ ಹಾಡಿನೊಳಗೆ ಸೇರಿ ಹೋಗುತ್ತೇವೆ. ಅವರೊಂದಿಗೆ ಅವರ ನೋವು ನಲಿವುಗಳನ್ನು ಹಂಚಿಕೊಳ್ಳುತ್ತವೆ. ಪ್ರತಿ ಪಾತ್ರವನ್ನು ಜೀವಿಸಬೇಕು ಎನಿಸುತ್ತದೆ.
ಬರಗೂರರು ಸೇರಿಸಿರುವ ಮತ್ತೊಂದು ಪ್ರಮುಖ ಅಂಶವೆಂದರೇ ಸಣ್ಣ ಸಣ್ಣ ಕವನಗಳು. ಕಾದಂಬರಿಯಲ್ಲಿನ ಪ್ರಮುಖ ಘಟ್ಟಗಳಲ್ಲಿ ಪಾತ್ರಗಳ ಮನದಲ್ಲಾಗುವ ತಲ್ಲಣಗಳನ್ನು ಸೆರೆಹಿಡಿದಂತೆ ಕವನಗಳನ್ನು ಕಟ್ಟಿದ್ದಾರೆ. ಅಲ್ಲಲ್ಲಿ ಜನಪದ ಗೀತೆಗಳೂ ಕೂಡ ಇವೆ. ಒಟ್ಟಿನಲ್ಲಿ ಅಮೋಘ ಕಾದಂಬರಿ!!!
ನೀವು ಮೃದು ಮನಸ್ಸಿನರಾಗಿದ್ದರೇ ಅಥವಾ ಯಾವುದಾದರೂ ತೀರಾ ಕಾಡುವಂಥ ಪುಸ್ತಕ ಓದಿ ಮುಗಿಸಿದ್ದರೇ ಶಬರಿಯನ್ನು ಕೈಗೆತ್ತಿಕೊಳ್ಳಬೇಡಿ. ಈ ಪುಸ್ತಕ ನೀಡುವಂಥ ಮಾನಸಿಕ ತಳಮಳ ಹಾಗೂ ಮಾನವಿಕ ಮೌಲ್ಯಗಳನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ.
ಆದರೆ... ಈ ಪುಸ್ತಕ ಓದದೇ ಇರಬೇಡಿ. ಮತ್ತಷ್ಟು ಜನಕ್ಕೆ ಹಂಚಿ! ಸಾಹಿತ್ಯ ಸ್ವಚ್ಛಂದವಾಗಿ ಪಸರಿಸಲಿ!!!!