ನಮ್ಮ ಮನೆಗಳಲ್ಲಿ, ಕುಟುಂಬಗಳಲ್ಲಿ ಮಾತಾಡುವ ಮಾತುಗಳು, ಸಂಗತಿಗಳು ಬೇರೆಯವರಿಗೆ ಅಪರಿಚಿತವಾಗಿರುತ್ತವೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲಾ ಕುಟುಂಬಗಳ ಕಥೆಗಳು ಒಂದೇ ತೆರನಾಗಿರುತ್ತವೆ. ಅಂದರೆ ಅಪ್ಪ-ಅಮ್ಮ, ಅಜ್ಜ-ಅಜ್ಜಿ, ಅಣ್ಣ-ತಂಗಿ ಹೀಗೆ ಮತ್ತಿತರರ ನಡುವೆ ಪ್ರೀತಿ, ಜಗಳ, ಕೋಪ ತಾಪಗಳು ಎಲ್ಲವೂ ನಡೆಯುತ್ತವೆ. ಕೆಲವು ಬೇಗನೆ ಮುಗಿಯುತ್ತವೆ. ಕೆಲವು ಕಡೆಯವರೆಗೂ ಕಾಡುತ್ತವೆ. ಕೆಲವು ಜೀವನದ ಒಂದು ಹಂತದಲ್ಲಿ ಸರಿಹೋಗುತ್ತವೆ. ಇಂತಹ ಒಂದು ಕುಟುಂಬದೊಳಗಿನ ಕಥೆ-ವ್ಯಥೆಯೇ ಸಂಧಿಕಾಲ.
ತಂದೆ ಇಲ್ಲ. ತಾಯಿ ಗಟ್ಟಿಗಿತ್ತಿ. ಮನೆಯನ್ನು ಮುನ್ನಡೆಸುತ್ತಿದ್ದಾಳೆ. ಅಣ್ಣ ಮನೆಯನ್ನ ಜವಾಬ್ದಾರಿಯುತವಾಗಿ ನಡೆಸುತ್ತಿದ್ದಾನೆ. ಅತ್ತಿಗೆ ಮನೆಯೊಳಗಿನ ಕೆಲಸ ಕಾರ್ಯಗಳಲ್ಲಿ ಬಿಡುವಿಲ್ಲದೆ ದುಡಿಯುವವಳು. ಉಂಡಾಡಿ ಅಲ್ಲದಿದ್ದರೂ ಎಲ್ಲದರಲ್ಲೂ ಎಲ್ಲರಲ್ಲೂ ಒಂದಾಗಿರುವ ನಾಯಕ.
ಮೇಲ್ಮಧ್ಯಮ ವರ್ಗದ ದಂಪತಿಗಳ ಒಬ್ಬಳೇ ಮುದ್ದಿನ ಮಗಳು ನಾಯಕಿ. ಮನೆಯ ವಾತಾವರಣದಿಂದ ನಾಯಕಿಗೆ ಸಹಜವಾಗಿ ಬೆಳೆದಿರುವ ತನ್ನದೇ ನಡೆಯಬೇಕೆಂಬ ಹಠ ಭಾವನೆ. ಯಾವುದೇ ಕೆಲಸಗಳಲ್ಲಿ ಉದಾಸೀನ ಅಲ್ಲದಿದ್ದರೂ ನಿಧಾನ ಅವಳ ಗುಣ.
ನಾಯಕಿ ಮದುವೆಯಾಗಿ ನಾಯಕನ ಮನೆ ಸೇರಿದ ಮೇಲೆ ಕುಟುಂಬದೊಳಗೆ ಜರುಗುವ ಘಟನೆಗಳ ನಾನಾ ಪಕಳೆಗಳು ಒಂದೊಂದಾಗಿ ಬಿಡಿಸಿಕೊಳ್ಳುತ್ತಾ ಹೋಗುತ್ತವೆ. ಯಾವುದೋ ಒಂದು ಕಾರಣಕ್ಕೆ ಅವರಿಬ್ಬರ ದಾಂಪತ್ಯ ಹದಿನೇಳು ವರ್ಷ ಮುರಿದು ಬಿದ್ದಿರುತ್ತದೆ, ಮತ್ಯಾವುದೋ ಒಂದು ಕಾರಣಕ್ಕೆ ಅವರಿಬ್ಬರು ಒಂದಾಗುವ ಸಮಯ ಒದಗುತ್ತದೆ. ಆ ಎರಡು ಕಾರಣಗಳಿಗೆ ಮೂಲವಾದ ಅಂಶಗಳೆನೆಂಬುದನ್ನು ತಿಳಿಯಲು ಕಾದಂಬರಿಯನ್ನು ಓದಬೇಕು.
ಕತೆಯ ಆರಂಭದಲ್ಲೇ ಸಿಗುವ ಅಚ್ಚರಿ, ಗಂಡು ಹೆಣ್ಣಿನ ಆಲೋಚನ ಕ್ರಮಗಳು, ಕುಟುಂಬದೊಳಗಿನ ಸಂಗತಿಗಳ ಸಹಜತೆ, ಪಾತ್ರಗಳು ಎದುರಾದಾಗ ಆಡುವ ಮಾತುಗಳು, ಕಥೆಯ ನಿರೂಪಣೆ ಮತ್ತು ಅದರ ಓಘ. ಇವಿಷ್ಟು ಕಾದಂಬರಿಯಲ್ಲಿ ತುಂಬ ಇಷ್ಟವಾದ ಅಂಶಗಳು.
ದಾಂಪತ್ಯಕ್ಕೆ ಬೇಕಿರುವುದು ತಾಳ್ಮೆ ಪ್ರೀತಿಗಳೇ ಹೊರತು ಹಠ ಅಪನಂಬಿಕೆಗಳಲ್ಲ ಎಂಬುದನ್ನು ನವಿರಾಗಿ ಚಿತ್ರಿಸಿರುವ ಉತ್ತಮ ಕೃತಿ.
ವಸುಮತಿ ಉಡುಪರಿಗೆ ಸಂಬಂಧಗಳ ನೇಯ್ಗೆಯ ಬಗ್ಗೆ ಅಪಾರವಾದ ತಿಳುವಳಿಕೆ ಇದೆ. ಹತ್ತಿರದವರ ನಡುವಿನ ಮನಸ್ತಾಪಗಳು, ಕುಟುಂಬದೊಳಗಿನ ಮುನಿಸಿನ ಒಳಮಾತುಗಳು, ಮುಚ್ಚಿದ ಕೋಣೆಯ ಒಳಗಿನ ಪಿಸುಗುಟ್ಟುವಿಕೆಯ ಅವರಂತೆ ಬರೆದವರಿಲ್ಲ. ಇದಕ್ಕೆ ಕಳಸವಿಟ್ಟಂತೆ ಮಲೆನಾಡಿನ ಪರಿಸರದ ಚಿತ್ರಣ. ಅವರ ಯಾವ ಕಥೆಯನ್ನೋ,ಕಾದಂಬರಿಯನ್ನೋ ಓದ ಹೊರಡುವಾಗ ನಾನು ಧೈರ್ಯ ತಂದುಕೊಳ್ಳುತ್ತೇನೆ. ಯಾಕೆಂದರೆ ಅವರ ಕಥನದಲ್ಲಿ ನಡೆವ ಘಟನೆಗಳು ನಮ್ಮ ಕುಟುಂಬದೊಳಗೇ ನಡೆವಂತಹವು. ಹಾಗಾಗಿ ಅಪ್ರಿಯವಾದ ಆ ಸಂಗತಿಗಳ ಓದುವಾಗ ನಾವು ಅದನ್ನು ಮತ್ತೆ ಅನುಭವಿಸುತ್ತೇವೆ. ಸಂಧಿಕಾಲ ಒಂದು ಕುಟುಂಬದೊಳಗಿನ ಪರಸ್ಪರರ ನಡುವಿನ ಸಂಬಂಧದ್ದೇ ಕಥೆ. ಗಂಡ ,ಹೆಂಡತಿ,ಮಗ,ಮಗಳು,ಅಮ್ಮ ,ಅಣ್ಣಂದಿರು.. ಇವರೆಲ್ಲರೂ ಬರುತ್ತಾರೆ. ಒಂದು ಚಿಕ್ಕ ಮಾತು ಸಂಸಾರವ ಅಗಲಿಸಿ ಯಾವುದೋ ಒಂದು ಅದೃಷ್ಟವಶಾತ್ ಕಾರಣಕ್ಕೆ ಒಂದಾಗುವ ಘಳಿಗೆ ಬಂದು ಕೊನೆಗೆ ಅದು ಉಳಿಯುತ್ತದೋ,ಮತ್ತೆ ತುಂಡರಿಸುತ್ತದೋ ಎಂಬುದು ಇಲ್ಲಿನ ಕಥೆ.. ಟಿಪಿಕಲ್ ವಸುಮತಿ ಉಡುಪರ ಶೈಲಿ.