ವಿಕ್ರಮ್ ಹತ್ವಾರ್ರ ಎರಡನೆಯ ಕಥಾಸಂಕಲನ. ಮೊದಲನೆಯ ಸಂಕಲನ ಝೀರೋ ಮತ್ತು ಒಂದು ಬಹಳಷ್ಟು ಒಳ್ಳೆಯ ಕಥೆಗಳ ಒಳಗೊಂಡು ಪ್ರಶಸ್ತಿ ಬಹುಮತಿಗಳ ಪಡಕೊಂಡ ಪುಸ್ತಕ.
ವಿಕ್ರಮರ ಕಥೆಗಳು ಹೆಚ್ಚಾಗಿ ಐಟಿ ಅಥವಾ ನಗರ ಕೇಂದ್ರಿತ. ಅದರಲ್ಲೂ ಬೆಂಗಳೂರು ಅಂದರೆ ಹೆಚ್ಚು ಸರಿ. ಐಟಿ ಜಗತ್ತಿನ ಕೆಲಸಗಾರರ ಕಷ್ಟಗಳು, ಸಂಬಂಧಗಳು ,ನಗರಪ್ರಜ್ಞೆಯ ಕಾಡುವ ಏಕಾಕಿತನ ಇವೆಲ್ಲ ಒಂಥರಾ ಟಿಪಿಕಲ್ ಅನ್ನಿಸುವ ಕಥೆಗಳು. ಹೀಗಂದರೆ ಸರಿಯಲ್ಲ. ವಿಕ್ರಮರ ಕತೆಗಳಲ್ಲಿ ಒಳಗೊಂದು ದಾರಿಯಿದೆ. ಆ ಕಾಲುದಾರಿಗೆ ಹೋಗುವ ಗೇಟೊಳಗೆ ನಮ್ಮನ್ನು ಒಳಬಿಟ್ಟುಕೊಂಡು ಅವರು ಅದನ್ನು ಮುಚ್ಚಿ ಹೋಗಿಬಿಡುತ್ತಾರೆ. ಅಪರಿಚಿತ ಪ್ರದೇಶದಲ್ಲಿ ದಾರಿ ಹುಡುಕಿಕೊಂಡು ಹೋಗುವಾಗ ಏನೆಲ್ಲ ಅನುಭವ ಆಗುತ್ತದೋ ಅದೆಲ್ಲವನ್ನೂ ವಿಕ್ರಮರ ಕಥೆ ಓದುವಾಗ ನಮಗಾಗುತ್ತದೆ.
ಕೊನೆಯಲ್ಲೊಂದು ನೀಳ್ಗತೆ ಇದೆ. ಹಮಾರ ಬಜಾಜ್. ಕಿಡ್ನಿ ವೈಫಲ್ಯಕ್ಕೀಡಾಗಿ ಚಿಕಿತ್ಸೆ ಪಲಕಾರಿಯಾಗದೆ ಅಪ್ಪ ತೀರಿಕೊಂಡ ಬಳಿಕ ತನ್ನ ಹಾರ್ಡ್ ಡಿಸ್ಕಿನಲ್ಲಿನ ಡೈರಿಯ ಪುಟಗಳ ಓದುತ್ತಾ ಅಪ್ಪನ ಮಾರಿಹೋದ ಬಜಾಜ್ ಸ್ಕೂಟರಿನ ಇನ್ನೊಬ್ಬರಿಂದ ಪಡೆಯಲು ಯತ್ನಿಸುವ ಮಗ..ಈ ಕಥೆಯಲ್ಲಿ ಹತ್ವಾರ್ ಅವರ ಶಕ್ತಿ ಎದ್ದು ಕಾಣುತ್ತದೆ. ಯಾರದೂ ಸರಿ ತಪ್ಪುಗಳ ಹೇಳ ಹೋಗದೆ, ಇನ್ನೊಬ್ಬರ ಸಂಸಾರ ಎಲ್ಲ ಸರಿಯಾಗಿದ್ದರೆ ನಮ್ಮ ಸಂಸಾರದ ಕಥೆಯೂ ಇಷ್ಟೇ ಅಲ್ಲವೇ ಅನಿಸಿಬಿಡುವ ದಟ್ಟ ನಗರ ಪ್ರಜ್ಞೆಯ ಕಥೆ. ಸಾವೆಂಬ ಮಾಯಾವಿ ಇಡೀ ಕಥೆಯ ಎತ್ತರವನ್ನು ಇನ್ನೂ ಹೆಚ್ಚಿಸಿದೆ. ಹಲವಾರು ಬಗೆಯಿಂದ ಇದು ಕನ್ನಡದ ಉತ್ತಮ ಕಥೆಗಳಲ್ಲೊಂದು.
ವಿಕ್ರಮರ ಕಥೆಗಳ ವೈಶಿಷ್ಟ್ಯ ಅದರಲ್ಲಿ ಭಾವನೆಗಳು ದಟ್ಟವಾಗಿರುತ್ತವೆ .ಹಾಗಾಗಿಯೇ ಮುಖ್ಯ ಪಾತ್ರಗಳ ಮನೋ ವ್ಯಾಪಾರ ನಮಗೂ ತಳಮಳವನ್ನುಂಟು ಮಾಡುತ್ತದೆ. ಒಳ್ಳೆಯ ಕಥೆಗಳ ಲಕ್ಷಣವೆ ಅದು.