ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ.
ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್ ಕವಿತೆಗಳು', 'ಜಸ್ಟ್ ಮಾತ್ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.
#ಪರಿಚಯ_೧೨_೨೦೨೬ ಕೃತಿ: ಜಸ್ಟ್ ಮಾತ್ ಮಾತಲ್ಲಿ ಲೇಖಕರು: ಭಾರತಿ ಬಿ.ವಿ ಪ್ರಕಾಶಕರು: ಸಾವಣ್ಣ ಬುಕ್ಸ್, ಬೆಂಗಳೂರು
ಆಹಾ... ಎಂತಹಾ ಲಹರಿಯ ಬರಹಗಳು... ಎಷ್ಟು ಚೆಂದದ ಬರವಣಿಗೆಯೆಂದರೆ ಸ್ವತಃ ನಾವೇ ಘಟನೆಗಳನ್ನು ನೇರವಾಗಿ ಅನುಭವಿಸುವ ಆಪ್ತತೆಯನ್ನೀವ ಅಂಕಣಗಳು. ನೂರೈವತ್ತು ಪುಟಗಳ ಕಿರು ಪುಸ್ತಕದಲ್ಲಿ ಎಲ್ಲಿಯೂ ಒಂದು ಚೂರು ಹದ ತಪ್ಪದ ನಿರೂಪಣೆ. ಹಿತಮಿತವಾಗಿ ಕಟ್ಟಿಕೊಟ್ಟ ಸನ್ನಿವೇಶಗಳು. ಬೆಂಗಳೂರಿನ ಆಟೋ ಪಯಣದ ಸಂದರ್ಭದಲ್ಲಿ ಲೇಖಕಿಯವರು ಮತ್ತು ಆಟೋರಾಜರ ನಡುವಿನ ಸಂವಾದದ ಈ ಬರಹಗಳು ನಮಗರಿವಿಲ್ಲದ ಇನ್ನೊಂದು ಮುಖವನ್ನು ಪರಿಚಯಿಸುತ್ತದೆ. ಸಾಧಾರಣವಾಗಿ ಬೆಂಗಳೂರಿನ ಆಟೋ ಚಾಲಕರೆಂದರೆ ಬಹುಪಾಲು ಜನರು ತಮ್ಮ ಕೆಟ್ಟ ಅನುಭವಗಳನ್ನು ಹೇಳುವುದು ಸಹಜ. ಇದಕ್ಕೆ ತದ್ವಿರುದ್ಧವಾಗಿ ತನ್ನ ಒಟ್ಟಾರೆ ಅನುಭವಗಳನ್ನು ದಾಖಲಿಸಿರುವ ಲೇಖಕರು ನೋಡುವ ಕಣ್ಣಿದ್ದರೆ,ಕೇಳುವ ಮನಸ್ಸಿದ್ದರೆ, ಕಿವಿಯನ್ನು ತೆರೆದುಕೊಂಡಿದ್ದರೆ ಹೊಸ ಪ್ರಪಂಚವನ್ನೇ ನಮ್ಮದಾಗಿಸಿಕೊಳ್ಳಬಹುದೆನ್ನುತ್ತಾರೆ. ವಿರಾಮದ ವೇಳೆಗೆ ಆರಾಮವಾಗಿ ಓದಬಹುದಾದ ಪುಸ್ತಕ.
ಬರಹಗಾರತಿ ತನ್ನ ಆಟೋ ಪ್ರಯಾಣ ಕಥನವನ್ನು ಸೊಗಸಾಗಿ ಬರೆದಿದ್ದಾರೆ, ಇಲ್ಲಿ ಬರುವ ಪ್ರಸಂಗವು ಒಂದೊಂದು ತರವಾರಿಯವು ಮತ್ತು ವಿಡಂಬನಾತ್ಮಕವಾಗಿ ಮೂಡಿಬಂದು ಪ್ರಯಾಸವಿಲ್ಲದೆ ಓದಿಸಿಕೊಂಡುಹೋಗುತ್ತದೆ.
ಬೆಂಗಳೂರಿನ ಆಟೋರಾಜರ ಕಥೆಗಳು.. ಓದುತ್ತಾ ಸಕ್ಕತ್ ಆಗಿ ಇಷ್ಟ ಆಗ್ತಾ ಹೋಗುತ್ತೆ.. ಅದರಲ್ಲೂ ಲೇಖಕಿಯ ಬರಹದ ಶೈಲಿಯಲ್ಲಿ ಒಂದಿಷ್ಟು ನಗೆ, ತರಲೆ, ಮುನಿಸು, ನೋವು, ಅಬ್ಬರ,ಗಲಾಟೆ ಮುಂತಾದ ಎಲ್ಲಾ ‘ನವರಸ’ಗಳೂ ಸೇರಿ ಇದೊಂದು ರಸಪಾಕವೇ ಸೈ. ಆಟೋರಾಜರ ಪ್ರೀತಿ, ಮೋಸ, ಅಲ್ಪತೆ, ಉದಾರತೆ, ಹೃದಯ ಎಲ್ಲದೂ ಈ ಪುಸ್ತಕದಲ್ಲಿ ಅನಾವರಣಗೊಳ್ತಾ ಹೋಗುತ್ತೆ. ಎಲ್ಲರೆಡೆಗೆ ಒಂದು ತೆರೆದ ಮನಸ್ಸನ್ನಿಡುವುದು ಹೇಗೆ ಅನ್ನೋದು ನನಗೀ ಪುಸ್ತಕದ ‘ಟೇಕ್ಅವೇ’ ಒಂದೇ ಗುಕ್ಕಿಗೆ ಓದಿ ಮುಗಿಸಬಹುದಾದ ಪುಸ್ತಕವಾದರೂ, ಹಾಗೇ ಓದಲು ಬೋರಾಗುತ್ತೆ. ಅದರ ಬದಲಾಗಿ ದಿನಕ್ಕಿಷ್ಟೇ ಅಂತ ಇನ್ಸ್ಟಾಲ್ಮೆಂಟ್ನಲ್ಲಿ ಓದಿದರೇ ಸಿಕ್ಕುವ ಕಿಕ್ಕೇ ಬೇರೆ.