ವಸುಮತಿ ಉಡುಪರ ಕತೆಗಳೆಂದರೆ ನನಗೆ ಹೆದರಿಕೆ. ಮಯೂರದಲ್ಲಿ ಅವರ ಕತೆಯೊಂದು ಓದಿದ ಬಳಿಕ ಹುಟ್ಟಿದ್ದು ಅದು. ಮಗ ದೂರದಲ್ಲಿ ವಾಸವಾಗಿರುವಾಗ ಒಂಟಿಯಾಗಿರುವ ವೃದ್ಧ ದಂಪತಿಗಳಿಗೆ ಹತ್ತಿರವಾಗುವ ಅವರ ದೂರದ ಸಂಬಂಧಿಯೊಬ್ಬ ಅವರನ್ನೇ ಮುಗಿಸುವ ಕತೆ ಅದು.
ಇತ್ತೀಚೆಗೆ ವಸುಧೇಂದ್ರ ಅವರನ್ನು ಭೇಟಿಯಾದಾಗ ಅವರು ಮಾತಿನ ನಡುವೆ ತನಗೆ ವಸುಮತಿ ಉಡುಪರ ಕತೆಗಳ ವಾಸ್ತವ ಚಿತ್ರಣ ಇಷ್ಟ ಅಂದಿದ್ದರು.
ವಸುಮತಿ ಉಡುಪರ ಕತೆಗಳೇ ಹಾಗೆ. ಸಾಮಾಜಿಕವಾಗಿ ಬರೆದಾಗ ಸಮಸ್ಯೆಗಳು ದೊಡ್ಡದಾಗಿ ಅಷ್ಟೇನೂ ಕಾಡುವಂತದ್ದು ಇರುವುದಿಲ್ಲ. ಆದರೆ ತೀರ ಹತ್ತಿರದ ಸಂಬಂಧಗಳ ಸಮಸ್ಯೆಗಳ, ಅದು ಕಾಡುವ ಬಗೆಗಳ ಕುರಿತು ಕ್ಷ ಕಿರಣ ಹಾಯಿಸಿದಂತೆ ಅವರು ಬರೆದಾಗ ಒಳಗಿನ ನೋವಿರುವ ನರವೊಂದ ಮೀಟಿದಂತಾಗುತ್ತದೆ. ನಾವೂ ಮನುಷ್ಯರಲ್ವಾ? ಸಿಕ್ಕಿದಾಗ ನಗುತ್ತಾ ಮಾತಾಡಿಸುತ್ತಾ ಇದ್ದವರು ಒಂದು ದಿನ ನಗೆಯರಳಿಸದೆ ಇದ್ದಾಗ ಒಳಗೆಲ್ಲೋ 'ಚಳಕ್' ಅನ್ನುತ್ತಲ್ಲ ಅದೇ ತರಹ.
ಈ ಸಂಕಲನದ ಹೆಸರು ಅರ್ಥವತ್ತಾದದ್ದು. ಹೆಸರೇ ಸೂಚಿಸುವಂತೆ ಇಲ್ಲಿನ ಕತೆಗಳು ಮನುಷ್ಯ ಮನುಷ್ಯರ, ಕುಟುಂಬಗಳ ನಡುವಿನದ್ದು. ಮನೆಯ ಗೋಡೆಗಳಿಗೆ ಬಾಯಿ ಬರುತ್ತಿದ್ದರೆ ಅದೇನು ಹೇಳುತ್ತಿತ್ತೋ ಅದಿಲ್ಲಿ ಕತೆಯಾಗಿದೆ ಅಷ್ಟೇ!
ವಸುಮತಿ ಉಡುಪರ ಕತೆಗಳ ಒಂದೇಟಿಗೆ ಕೂತು 'ಇದೋ ಮುಗಿಸಿದೆ' ಅನ್ನಲು ಸಾಧ್ಯವೇ ಇಲ್ಲ. ಒಂದು ಓದುವಾಗ ನಮ್ಮ ಜೀವನದಲ್ಲೂ ಆದ ಅದೇ ತರಹದ ಘಟನೆ ನೆನಪಿಗೆ ಬರುತ್ತದೆ. ಮನಸು ಸಾಕು ಅನ್ನುತ್ತದೆ. ಚಿಕ್ಕವನಿದ್ದಾಗ ನೆಂಟರ ಮನೆಗೆ ಹೋದಾಗ ನಮ್ಮನ್ನ ಗೆಣ್ಪದಿದ್ದ ದೊಡ್ಡ ಮನುಷ್ಯ ಈಗ ಹೋದ ಕೂಡಲೇ ಬಾಯ್ತುಂಬ ನಗೆ ತುಳುಕಿಸಿದಾಗ ಒಂದು ಅಪರಿಚಿತ ಭಾವ ಕಾಡುತ್ತದಲ್ಲ.ಅದೇ ಇದು!
ಒಂದೇ ಸಮಸ್ಯೆ ಎಂದರೆ ಸಂಬಂಧಗಳೆಲ್ಲ ಪೊಳ್ಳು ಅನ್ನುವ ಸತ್ಯ ಕಣ್ಣಿಗೆ ರಾಚುತ್ತದೆ.ಪ್ರತೀ ಕಥೆಯ ಓದುವಾಗಲೂ ಇನ್ನೇನು ಅವಘಡ ಕಾದಿದೆಯಪ್ಪಾ ಪಾತ್ರಗಳ ಜೀವನದಲ್ಲಿ ಅನಿಸುತ್ತದೆ.ಅದು ಹಾಗೇ ಸಂಭವಿಸುತ್ತದೆ ಕೂಡ.
ಹೆಚ್ಚೇನು ಹೇಳಲಿಕ್ಕಿಲ್ಲ. ನಿಮಗೂ ಸಂಬಂಧಗಳ ನಾಜೂಕಲ್ಲಿ ನೋವಿದೆಯಾ? ಇವರ ಓದಿ. ಆದರೆ ನೀವು ನಿರೀಕ್ಷಿಸುವ ಸಾಂತ್ವನ ಮಾತ್ರ ಸಿಗುವುದಿಲ್ಲ.