ಅನುಷ್ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭಾ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಸೇರಿ ಆರಂಭಿಸಿರುವ 'ನಾವು' ಮತ್ತು 'ರಿದಂ ಅಡ್ಡ' ಬ್ಯಾಂಡ್ಗಳ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕೆಲವು ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಅನುಗ್ರಹ ಪ್ರಕಾಶನವನ್ನು ಮುನ್ನಡೆಸುತ್ತಿದ್ದಾರೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳಿಂದ ಪ್ರೇರಿತರಾಗಿ ಸಾಹಿತ್ಯ ಸೃಜಿಸುವೆಡೆಗೆ ಬಂದ ಅನುಷ್ರ ಈವರೆಗಿನ ಬರಹದ ಮೂಲವಸ್ತು ಪ್ರಕೃತಿಮೇ ಆಗಿದೆ. ಸಣ್ಣ ವಿಷಯಗಳಲ್ಲೂ ಕೌತುಕ ತೋರುತ್ತ, ಸದಾ ಊರಿಂದ ಊರಿಗೆ ಓಡಾಡುತ್ತ, ಹಾಡುತ್ತ, ಬರೆಯುತ್ತ ಇರುವ ಇವರು ಸದ್ಯ ಮಡದಿ ಡಾ. ಅನುಷಾ ಅವರೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದಾರೆ.
ಜೋಡ್ಪಾಲ - ಅನುಷ್ ಶೆಟ್ಟಿ. ನಾನು ಓದಿದ ಅನುಷ್ ಶೆಟ್ಟಿಯವರ ಎರಡನೆಯ ಪುಸ್ತಕ. ಮೊದಲನೆಯದಾಗಿ ಪುಸ್ತಕದ ಗುಣಮಟ್ಟ. ಕವರ್ ಪೋಟೋ ಆಗಲಿ,ಮುದ್ರಣವಾಗಲಿ ಅಚ್ಚುಕಟ್ಟಾಗಿ ಕಣ್ಣು ಸೆಳೆಯುತ್ತದೆ. ಇನ್ನು ಕತೆ ಮಡಿಕೇರಿ ಮತ್ತು ಕರಾವಳಿಯಲ್ಲಿ ನಡೆವಂತದ್ದು.ಮಡಿಕೇರಿಯಲ್ಲಿ ಅರಳುವ ಪ್ರೇಮ, ಹುಡುಗಿಯ ಅಪ್ಪ ಮತ್ತವನ ಗೆಳೆಯನ ಚರ್ಚೆ, ಚಿಕ್ಕ ಹುಡುಗರಿಬ್ಬರ ಕುತೂಹಲದ ಕಣ್ಣು ಇವೆಲ್ಲಕ್ಕೆ ಸರಿಯಾಗಿ ರಹಸ್ಯವಾಗಿ ಘಾಟಿ ಯಲ್ಲಿ ಬರುವಾಗ ಪ್ರಪಾತಕ್ಕೆ ಬೀಳುತ್ತಿರುವ ಲಾರಿಗಳು, ಕರಾವಳಿಯಲ್ಲಿ ದಡ ಸೇರುವ ಮೊದಲೇ ಅಪಘಾತಕ್ಕೀಡಾಗುವ ಹಡಗು, ಕರಾವಳಿಯ ಮರಕಾಲರ ಬದುಕು , ಅಪಘಾತಕ್ಕೀಡಾದ ಹಡಗನ್ನು ಲೂಟಿ ಮಾಡುವ ಪರಿಸ್ಥಿತಿಗೆ ಮರಕಾಲರು ಬಂದ ಬಗೆ, ಹಡಗಿಂದ ಕಣ್ಮರೆಯಾದ ವಸ್ತು, ಅದಕ್ಕಾಗಿ ಹುಡುಕಾಟ, ಅದಕ್ಕೂ, ಮರಕಾಲರಿಗೂ,ದೂರದ ಮಡಿಕೇರಿಯಲ್ಲಾಗುವ ಅಪಘಾತಗಳಿಗೂ ಸಂಬಂಧವೇನು? ಅದನ್ನ ಓದಿಯೇ ತಿಳಿಯಬೇಕು.
ಅನುಷ್ ಗೆ ಬರವಣಿಗೆ ಸಿದ್ಧಿಸಿದೆ. ಆರಂಭದಲ್ಲಿ ತೇಜಸ್ವಿಯವರ ಇನ್ನೊಂದು ಆವೃತ್ತಿ ತರಹ ಅನಿಸಿದರೂ ಬಹುಬೇಗ ಅದರಿಂದ ಬಿಡಿಸಿಕೊಂಡು ಒಳಗಿಳಿಯುವಂತೆ ಬರೆಯುತ್ತಾರೆ. ಅದಲ್ಲದೆ ಸ್ಥಳೀಯ ಭಾಷಾ ಬಳಕೆಯೂ ಚೆನ್ನಾಗಿದೆ. ರಪ ರಪ ಓದಿಸಿಕೊಂಡು ಹೋಗುವುದು ಹೆಗ್ಗಳಿಕೆ. ಒಳ್ಳೆಯ ಕಾದಂಬರಿ.
ಜೋಡ್ಪಾಲದ ತಿರುವಿನಲ್ಲಿ ಸಿಕ್ಕಿದ ಕೆಂಪು ಹರಳಿನ ಸರಕ್ಕೂ, ಕಾಣೆಯಾದ ಪೆಮ್ಮಯ್ಯ - ರಾಬರ್ಟ್ - ರಾಜುವಿಗೂ, ಘಾಟಿಯಲ್ಲಿ ಬಿದ್ದ ಟ್ಯಾಂಕರಿಗೂ , ಮಂಗಳೂರಿನ ತಣ್ಣೀರುಬಾವಿಯಲ್ಲಿ ಮುಳುಗಿದ ಕ್ವೀನ್-||| ಹಡಗಿಗೂ, ಅಲ್ಲಿನ ಮೀನು ಹಿಡಿಯುವ ಮರಕಲರಿಗೂ ಏನು ಸಂಭಂದ?
ಜೋಡ್ಪಾಲ - ಕನ್ನಡದ ಉದಯೋನ್ಮುಖ ಲೇಖಕರಾದ ಅನುಷ್ ಶೆಟ್ಟಿಯವರ ಮೂರನೇ ಕೃತಿ. ಕಥೆಯಲ್ಲಿ ಮೂರು ಭಾಗಗಳಿದ್ದು , ಮೊದಲನೆಯದು ಮಡಿಕೇರಿ - ಜೋಡ್ಪಾಲದ ಆಸುಪಾಸಿನಲ್ಲಿ ನಡೆಯುತ್ತದೆ. ಇಲ್ಲಿ ಶೇಖರ - ಬಬಿತಾರ ಪ್ರೇಮ ಕಥೆಯಿದೆ, ರಾಬರ್ಟ್ - ಪೆಮ್ಮಯ್ಯರ beyond the world ಮಾತು ಕತೆಗಳಿವೆ, ಕಿಟ್ಟು ಹಾಗೂ ಎಂದೋ ರಸ್ತೆ ಬದಿ ಕೆಟ್ಟು ನಿಂತ ರೋಡ್ ರೋಲರ್ ನಡುವಿನ ಸ್ನೇಹ ಸಂಬಂಧವಿದೆ. ಎಲ್ಲಾ ಸರಿಯಾಗಿ ನಡೆಯುತ್ತಿದೆ ಎನ್ನುವಾಗ ನಡೆಯುವ ಟ್ಯಾಂಕರ್ ಆಕ್ಸಿಡೆಂಟ್ ಕಥೆಗೆ ಒಂದು ಟ್ವಿಸ್ಟ್ ಕೊಟ್ಟು, ಮುಂದೆ ನಡೆಯುವ ಮಿಸ್ಸಿಂಗ್ ಕೇಸ್ ಗಳಿಗೆ ಮೂಕ ಸಾಕ್ಷಿಯಾಗುತ್ತದೆ. ಕೊನೆಯಲ್ಲಿ ಕಿಟ್ಟುವಿಗೆ ಸಿಕ್ಕ ಕೆಂಪು ಹರಳಿನ ಸರ ಯಾರದ್ದು ? ಇದಕ್ಕೆ ಉತ್ತರ ಎರಡನೇ ಭಾಗದಲ್ಲಿದೆ.
ಎರಡನೇ ಭಾಗದಲ್ಲಿ ಲೇಖಕರು ಓದುಗರನ್ನು ಮಂಗಳೂರಿನ ಕಡಲಂಚಿಗೆ ತಂದು ನಿಲ್ಲಿಸುತ್ತಾರೆ. ಮಲೇಶಿಯಾದಿಂದ ಮಂಗಳೂರಿಗೆ ಬರುವ ಕ್ವೀನ್ 3 ಎಂಬ ಹೆಸರಿನ ಐಷಾರಾಮಿ ಹಡಗು , ಅದರಲ್ಲಿ ಪಯಣಿಸುತ್ತಿದ್ದ ಗಣೇಶ್ ರೈ ದಂಪತಿಗಳು , ಅವರ ಪಯಣದ ಉದ್ದೇಶ , ಜೊತೆಯಲ್ಲಿದ್ದ ಕೆಂಪು ಹರಳಿನ ಸರ, ಹಡಗಿನ ದಾರುಣ ಅಪಘಾತ, ಕತ್ತಲಲ್ಲಿ ನಡೆದ ಹಡಗಿನ ಲೂಟಿ - ಹೀಗೆ ಹಲವು ಘಟನಾವಳಿಗಳು ಜರುಗಿ, ಓದುಗರನ್ನು ಬಹುವಾಗಿ ಕಾಡುತ್ತವೆ.
ಮೂರನೇ ಭಾಗ , ಮೊದಲೆರಡು ಭಾಗಗಳ ಸಂಗಮ. ಕೆಂಪು ಹರಳಿನ ಸರ , ಅದು ಸೇರಬೇಕಾದ ಸ್ಥಳ ಸೇರುತ್ತದೆಯೇ? ಜೋಡ್ಪಾಲದಲ್ಲಿ ಘಟಿಸಿದ ಮಿಸ್ಸಿಂಗ್ ಕೇಸ್ ಗಳ, ಅಪಘಾತಗಳ ಹಿಂದಿನ ರೂವಾರಿ ಯಾರು? ಪಶ್ಚಿಮ ಘಟ್ಟದ ಕಾಡಿನ ಮಧ್ಯೆ ನೆಲೆಯೂರಿರುವ ಗುಂಪಿನ ಕೆಟ್ಟ ಉದ್ದೇಶವೇನು? ಕಿಟ್ಟು ಬಹುವಾಗಿ ಇಷ್ಟ ಪಟ್ಟಿದ್ದ, ತನ್ನದೇ ಅರಮನೆ ಎಂದು ಭಾವಿಸಿದ್ದ ರೋಡ್ ರೋಲರ್ ಭೀಮ ಕೊನೆಗೆ ಏನಾದ ? ಹೀಗೆ ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ.
ಕಥೆಯಲ್ಲಿ ಕೊನೆಯಲ್ಲಿ ನೀರವ ಮೌನ. ಅರ್ಧ ಮುಳುಗಿದ ಕ್ವೀನ್ 3, ಖಾಲಿಯಾದ ಮರಕಲರ ಹಳ್ಳಿ, ಜಾಗ ಬದಲಿಸಿದ ಭೀಮ, ಖಾಲಿಯಾದ ಜೋಡ್ಪಾಲ ! - ಒಟ್ಟಿನಲ್ಲಿ ಒಂದೇ ದಿನದಲ್ಲಿ ಓದಿಸಿಕೊಂಡು ನಿಟ್ಟುಸಿರು ಬಿಡುವಂತೆ ಮಾಡಿದೆ ಈ ಪುಸ್ತಕ. ನೀವು ಓದಿ, ಅಭಿಪ್ರಾಯ ತಿಳಿಸಿ.
ಒಂದು ಅದ್ಭುತ ಸಸ್ಪೆನ್ಸ್ ಥ್ರಿಲ್ಲರ್ ನ ಎಲ್ಲ ಗುಣಗಳನ್ನೂ ಹೊಂದಿರುವ ಕೃತಿ ಇದು. ಸಾಕಷ್ಟು ಪಾತ್ರಗಳು, ಒಂದಕ್ಕೊಂದು ಹೆಣೆದುಕೊಂಡಿರುವ ಘಟನೆಗಳು, non-linear ನಿರೂಪಣೆ ಹೀಗೆ ಎಲ್ಲವೂ ಇಲ್ಲಿ ಹದವಾಗಿ ಬೆರೆತಿವೆ. ತುಂಬಾ ಸರಾಗವಾಗಿ ಓದಿಸಿಕೊಳ್ಳುವುದು ಇದರ ಹೆಚ್ಚುಗಾರಿಕೆ.
ಇಲ್ಲಿಗೆ ಅನುಷ್ ಶೆಟ್ಟಿ ಅವರ ಎಲ್ಲಾ ಕಾದಂಬರಿಗಳು ಓದಿ ಮುಗಿಸಿದಾಗಾಯಿತು. ಮಿಕ್ಕ ಕಥೆಗಳಂತೆಯೇ ಸಸ್ಪೆನ್ಸ್ ಥ್ರಿಲರ್ ಕಾದಂಬರಿಯೇ ಜೋಡ್ಪಾಲ.
ತಿರುವಿನಲ್ಲಿ ಬಿದ್ದ ಟ್ಯಾಂಕರ್, ರಾಜು ಅನ್ನೋ ಹುಡುಗ ಕಾಣೆ ಆಗಿರೋದು, ಚಿತ್ರ ವಿಚಿತ್ರ ಭಾಷೆಯಲ್ಲೇ ಮಾತಾಡೋ ರಾಬರ್ಟ್-ಪೆಮ್ಮಯ್ಯ ಜೋಡಿ ಕಾಣೆ, ಹಲವು ರಹಸ್ಯಗಳು ಜೋಡ್ಪಾಲ ಅನ್ನೋ ಹಳ್ಳಿ ಹೊತ್ತು ಕೂತಿದೆ. ಬರಹಗಾರರು ಅದನ್ನ ಚೆನ್ನಾಗೇ ಮೇಂಟೈನ್ ಮಾಡಿದಾರೆ. ಏನಿರ್ಬೋದು ಇದರ ರಹಸ್ಯ ಅನ್ನೋದು ಹಾಗೇ ತಲೆಯಲ್ಲಿ ಕಾಡ್ತಿತ್ತು.
ಉಳಿದಂತೆ ಹಡಗು ಅಪಘಾತ, ಅಮುಲ್ಯ ವಸ್ತುವಿನ ಕಣ್ಮರೆ, ಮರಕಲರ ಕಷ್ಟಕರ ಬದುಕು, ಹಡಗು ಲೂಟಿ, ಊರು ಬಿಡೋ ಸನ್ನಿವೇಶಗಳು ಎಲ್ಲವೂ ಚೆನ್ನಾಗಿ ಬಣ್ಣಿಸಸಿದ್ದಾರೆ.
ಹಡಗು ಅಪಘಾತ ಹಾಗೂ ಅದರ ಲೂಟಿಯ ಬಣ್ಣನೆ ತುಂಬಾ ತುಂಬಾ ಇಷ್ಟಪಟ್ಟೆ. ನನ್ನ ಯೋಚನೆ ಮೀರಿದಕ್ಕೆ ಲೇಖಕರಿಗೆ ಧನ್ಯವಾದಗಳು. ಪೆಮ್ಮಯ್ಯ-ರಾಬರ್ಟ್ಗೆ, ಕಿಟ್ಟಿ-ಭೀಮಗೆ ಇನ್ನು ಸ್ವಲ್ಪ ಜಾಸ್ತಿ ಸ್ಪೇಸ್ ಇದ್ರೆ ಚೆನ್ನಾಗಿತ್ತು. ಮರಕಲರು ಒಂದೇ ಸಮನೆ ನಿರ್ಧಾರಕ್ಕೆ ಬಂದದ್ದು ಅತೀರೆಕ ಅನ್ನಿಸಿತು.
ಕನ್ನಡದಲ್ಲಿ suspense thrillers ಗೆ ನನ್ನನು ಪರಿಚಯಿಸಿದವರು ಅನುಷ್ ಎ ಶೆಟ್ಟಿ ಎಂದರೆ ಸುಳ್ಳಾಗದು. ನಾನು ಓದಿದ ಇವರ ಮೊದಲ ಕಾದಂಬರಿ ಎಂದರೆ ಹುಲಿ ಪತ್ರಿಕೆ. ಈಗಲೂ ಕಣ್ಮುಂದೆ ನಡೆದಿರುವ ಕಥೆಯ ಹಾಗೆ ನೆನಪಿದೆ.
ಜೋಡ್ಪಾಲ ಕಥೆಯೂ ಒಂದು ಅದ್ಬುತ suspense thriller. ಒಂದು ಸುಂದರ ಪ್ರೇಮ ಕಥೆಯಲ್ಲಿ ಶುರುವಾದರು ಮುಂಬರುವ ಭಾಗಗಳಲ್ಲಿ ಕೂತುಹಲ ಮೂಡಿಸುವ ದೃಶ್ಯಗಳು ಓದುಗರ ಮನಸನ್ನು ಕಾಡಿಸುತ್ತದೆ.
ಒಟ್ಟಿನಲ್ಲಿ ನಾನು highly recommend ಮಾಡುವ ಪುಸ್ತಕಗಳಲ್ಲಿ ಜೋಡ್ಪಾಲ ಕಾದಂಬರಿಯು ಸೇರುತ್ತದೆ.
ತುಂಬಾ ದಿನಗಳ ನಂತರ ನ�� ಓದಿದ ಅನುಷ್ಶೆಟ್ಟಿ ಯವರ ಪುಸ್ತಕ ಸಿಂಪಲ್ ಕಥೆ ಎಲ್ಲೂ ಆಚೆ ಈಚೆ ಹೋಗಲ್ಲ. ನಂಗೆ ಒಂದು ಕ್ಷಣ ಮೂರು ಕಥೆಗಳು ಮೂರು ಕಾಲಗಳಲ್ಲಿ ನಡಿತಿದೆ ಅಂತ ಅನಿಸಿತು ಆಮೇಲೆ ಎಲ್ಲಾ ಒಟ್ಟಿಗೆ ಜೋಡ್ಪಾಲದ ಘಟ್ಟದಲ್ಲಿ ಸೇರಿದಾಗ ತಣ್ಣನೆ ಗಾಳಿ ಬೀಸಿದ ಅನುಭವ ಆಯಿತು. ಒಂದು ಕೂತೂಹಲವಾದ enjoyable ಓದು. ತೇಜಸ್ವಿ ಬರವಣಿಗೆ ನೆನಪಿಸಿದರು ಅವರ ಪುಸ್ತಕದಲ್ಲಿ ಇರುವ ವ್ಯಂಗ್ಯ ಮತ್ತು ಪೊಳ್ಳು ಸಮಾನತೆಯ ವಾದಗಳು ಇವರಲ್ಲಿ ಇರುವುದಿಲ್ಲ.
ಈ ಕಾದಂಬರಿಯಲ್ಲಿರೋದು ಒಟ್ಟು ಮೂರು ಭಾಗಗಳು. ಮೊದಲೆರಡು ಭಾಗಗಳು ಮಡಿಕೇರಿ ಘಾಟಿ ಜೋಡ್ಪಾಲ, ಮಂಗಳೂರಿನಲ್ಲಿ ನಡೆಯುವ ಪ್ರಪಾತಕ್ಕೆ ಬೀಳುತ್ತಿದ್ದ ಲಾರಿಗಳು, ತಣ್ಣೀರುಬಾವಿ ಕಡಲ ಬಳಿ ಬಂಡೆಗೆ ತಾಗಿ ವಾಲಿ ಬೀಳುತ್ತಿರುವ ಕ್ವೀನ್ ೩ ಹಗಡಿನ ಸುತ್ತ ಮುತ್ತ ನಡೆಯುವ ಘಟನೆಗಳನ್ನು ಹೇಳಿದರೆ ಮೂರನೇ ಭಾಗ ಕಾದಂಬರಿಗೆ ಅಂತ್ಯ ನಿಡುತ್ತದೆ.
೧೮೨ ಪುಟಗಳ ಚಿಕ್ಗಾದಂಬರಿಯಿದು. ಸರಿಯಾಗಿ ಎರಡು ಭಾಗಗಳನ್ನು ಮೊದಲ ದಿನಕ್ಕೆ ಕೊನೆಯ ಮೂರನೇ ಭಾಗವನ್ನು ಎರಡನೇ ದಿನಕ್ಕೆ ಇಟ್ಟು ಓದಿ. ಒಮ್ಮೆಲೇ ಕೂತು ಓದೋದಾದರೆ ಮೂರರಿಂದ ನಾಲ್ಕು ಗಂಟೆಗಳು ಹಿಡಿಯಬಹುದು. ಮೊದಲೆರಡು ಭಾಗಗಳ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ನಿಧಾನವಾಗಿ ಓದಿದಾಗ ಕತೆಯ ಜೊತೆ ಅಲ್ಲಿನ ವಾತಾವರಣದ ಅನುಭವವಾಗುತ್ತದೆ.
ಕತ್ತಲು, ಮಂಜು, ಗಾಳಿ, ಮಳೆ, ಘಾಟಿ, ಚಳಿ, ಕಡಲು, ನದಿಕಡಲ ಸಂಗಮ ಹೀಗೆ ಹೆಚ್ಚಾಗಿ ಮಳೆಗತ್ತಲಲ್ಲಿ ನಡೆಯೋದು ಒಂದು ತರಹ ಸಿನೆಮಾದ cinematic ಅನುಭವ ಕೊಡುತ್ತದೆ. ಈ ಕಾದಂಬರಿಯಲ್ಲಿ ಎಲ್ಲ ಕಡೆ ಹೆಚ್ಚಾಗಿ ಮಳೆ ಸುರಿಯುತ್ತಿರುತ್ತದೆ. ಶೇಖರ, ಬಬಿತ, ಕಿಟ್ಟಿ, ಭೀಮ, ರಾಬರ್ಟ್ ಮತ್ತು ಪೆಮ್ಮಯ್ಯ, ರಾಂಪ, ಮರಕಲರು ಹೀಗೆ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳು ಕತೆಯ ಮುಖ್ಯ ಪಾತ್ರಗಳಾಗಿ ಕೆಲಸ ಮಾಡೋದು ಇತರ ಎಲ್ಲ ಕೃತಿಗಳಿಗಿಂತ ಈ ಕಾದಂಬರಿಯನ್ನು ವಿಶೇಷವಾಗಿಸುತ್ತದೆ. ಕತೆ ನಡೆಯೊ ಶೈಲಿ, ವಿವರಣೆ ಕಾದಂಬರಿಯತ್ತ ಓದುಗರ ಗಮನ ಚೆನ್ನಾಗಿ ಸೆಳೆಯುತ್ತದೆ. ಓದುತ್ತಾ ಹೋದಂತೆ ನಿರೀಕ್ಷೆಗಳನ್ನ ಮೀರಿ ಘಟನೆ ಜರುಗಿ ಆಶ್ಚರ್ಯ ನೀಡುತ್ತದೆ. ಕಾದಂಬರಿಯಲ್ಲಿ ಯಾವ ಸಾವಾಗದೆ ಅದ್ಭುತ ರೋಚಕತೆ, ಥ್ರಿಲ್ ಅನುಭವ ಸಿಗುತ್ತದೆ. ಅದೇ ಎಲ್ಲ ಕಾದಂಬರಿಗಳಲ್ಲಿ ಕಾಣಸಿಗುವ ಪಾತ್ರಗಳಿಂದ ಈ ಕಾದಂಬರಿ ದೂರವಿರುವುದು ಹೆಚ್ಚು ಇಷ್ಟವಾಗುತ್ತೆ.
ಜೋಡ್ಪಾಲ, ಇದೆಂತಹಾ ಹೆಸರು, ಏನಿರಬಹುದು ಇದರ ಅರ್ಥ ಎಂದು ಓದಲು ಕುಳಿತ ನನಗೆ ಖಂಡಿತಾ ನಿರಾಶೆಯಾಗಲಿಲ್ಲ. ಚೆನ್ನಾಗಿದೆ, ಎಲ್ಲ ಪಾತ್ರಗಳು ಮತ್ತು ಕಥೆ ಹೆಣೆದಿರುವ ರೀತಿ ತುಂಬಾ ಸೊಗಸಾಗಿದೆ. ಎಲ್ಲೂ ಸಪ್ಪೆ ಹೊಡೆಸದೆ, ಪ್ರತೀ ಅಧ್ಯಾಯವೂ ಮುಂದಿನದಕ್ಕೆ ಓದಲು ಪ್ರೇರೇಪಿಸುತ್ತದೆ. ನೆಮ್ಮದಿಯ ಓದಿಗೆ ಬೇಕಾಗುವ ಎಲ್ಲ ಸಾಮಗ್ರಿ ಇದೆ ಎಂದರೆ ತಪ್ಪಾಗಲಾರದು. ಇದನ್ನೂ ಸೇರಿ ಅನೂಶ್ ರವರ ೪ ಪುಸ್ತಕಗಳನ್ನು ಓದಿ ಮುಗಿಸಿದ್ದೇನೆ. ಪುಸ್ತಕದಿಂದ ಪುಸ್ತಕಕ್ಕೆ ಅನೂಶ್ ಅವರ ಭಾಷ ಪ್ರಯೋಗ ಮತ್ತು ವಾಕ್ಯ ರಚನೆಯು ಅದ್ಭುತವಾಗಿ ಬೆಳೆದಿದೆ. ಇದಲ್ಲವೇ ಬೆಳವಣಿಗೆಯ ಸಂಕೇತ. ! ಅವರ ಎಲ್ಲ ಕಾದಂಬರಿಗಳಂತೆ ಇಲ್ಲಿಯೂ ಸಹಾ ಸರಳ ಭಾಷಾ ಪ್ರಯೋಗ, ವಸ್ತು, ವಿವರಣೆಗಳು, ಅಧ್ಯಯನ ಗೋಚರಿಸುತ್ತದೆ. ಅಮೃತ ಹೆಚ್ಚಾದರೆ ವಿಷವಂತೆ. ಎಲ್ಲಿ ಎಷ್ಟು ಬೇಕೋ ಅಷ್ಟೇ ನವಿರಾದ ಸರಳ ವಿವರಣೆ. ಹೆಚ್ಚು ಹೆಚ್ಚು ತುಂಬಿ ಹುಚ್ಚೆಬ್ಬಿಸುವ ಆತುರವಿಲ್ಲ ಅವಸರವಿಲ್ಲ.
ಮಡಿಕೇರಿ, ಆಚೀಚಿನ ರಸ್ತೆಗಳು, ಸಂಪಾಜೆ ಘಾಟಿ, ಸುತ್ತಲಿನ ಪರಿಸರ, ಝರಿ, ತೊರೆ, ಪಶ್ಚಿಮ ಘಟ್ಟಗಳ ವಿಶೇಷತೆ, ಮಂಗಳೂರು, ಭೂತಾರಾಧನೆ, ತಣ್ಣೀರು ಭಾವಿ, ಹಾಗೆ ಒಂದು ಸಾರಿ ಘಟ್ಟದ ತಗ್ಗನ್ನು ಇಳಿದು ಕರಾವಳಿಯಲ್ಲಿ ಮರಕಲರು ಮಾಡಿಕೊಂಡಿರುವ ಜೀವನ, ಜೀವನೋಪಾಯಗಳು, ಕಷ್ಟ ಕಾರ್ಪಣ್ಯಗಳನ್ನು ಕಣ್ಣಾಡಿಸಿ ಬಂದ ಹಾಗಿದೆ ಇದರ ಅನುಭವ.! ಓದಿಯೇ ಸವಿಯಬೇಕು.
ಮಳೆಗಾಲದ ಮಡಿಕೇರಿಯ ಸುಂದರ ಅನುಭವಗಳು, ಸದಾ scientist ಗಳಂತೆ ಯೋಚಿಸುವ ಮಿತ್ರರು, ಮಡಿಕೇರಿಯ ರಾಜಾಸಿಟ್ ನಲ್ಲಿ ಬೇಟಿಯಾಗಿ ಪ್ರೇಮ ಪ್ರಸ್ತಾಪಿಸಿದ ಪ್ರೇಮಿಗಳು, ದಿನೇ ದಿನೇ ಹೆಚ್ಚಾಗುತ್ತಿರುವ ಜೋಡ್ತಾಲದ ಅಪಘಾತಗಳು.
ಕರಾವಳಿಯ ಮರಕಾಲರು ರಾತ್ರಿ ವೀರರಾದ ಕಥೆ.ಅವರ ಅತಿಯಾದ ಆಸೆ ಆಸೆಯ ಹಿಂದಿರುವ ಉದೇಶ,ಮುಳುಗಿದ ರ ಕ್ರೀನ್- ಹಡಗಿನ ದರೋಡೆ, ಕರಾವಳಿಯ ದೈವಾರಾಧನೆ ವಿವರಿಸಿದ್ದಾರೆ
ಮೊದಲೆರಡು ಭಾಗಗಳ ಸಂಗಮವೇ ಮೂರನೆಯ thriller and suspense. ಜೋಡ್ತಾಲದ ತಿರುವಿನಲ್ಲಿ ಸಿಕ್ಕಿದ ಕೆಂಪು ಹರಳಿನ ಸರಕ್ಕೂ ಹಸಿರಿನ ಹಾಸಿಗೆ ಯಂತಿರುವ ಕಾಡಿನ ಮಧ್ಯೆ ನೆಲೆಸಿರುವರ ಗುಂಪಿಗೂ, ಕಾಣೆಯಾದ ಪೆಮ್ಮಯ್ಯ-ಶ್ರೀ ರಾಬರ್ಟ್ - ರಾಜುವಿಗೂ. ಪಾಟಿಯಲಿಲ ತ ಬಿದ್ದ ಟ್ಯಾಂಕರಿಗೂ ಮಂಗಳೂರಿನ ತಣ್ಣೀರೆಬಾವಿಯಲ್ಲಿ ಮುಳುಗಿದ ಕೀನ್- " ಹಡಗಿಗೂ, ಅಲಿನೆ - ಮೀನು ಮುಳುಗಿದ ಹಿಡಿಯುವ
ಕೊನೆಯಲ್ಲಿ ನೀರವತೆ ಆವರಿಸಿದಳ - ಜೋಡ್ತಾಲದ ಕಣಿವೆ .ಮರಳಿನ ಅಂಚಿನಲ್ಲಿ ಖಾಲೆಯಾಗಿ ನಿಂತಿರುವ ಮರಕಾಲರ ದೋಣಿಗಳು,ಪ್ರಕೃತಿಯ ಬಳ್ಳಿಗಳ ಜೊತೆ ಬೆರೆತಿದ್ದ ಭೀಮನೆ ರೋಡ್ ರೋಲರ್ ತೆರವು ಇವೆಲ್ಲವೂ ಓದುಗರ ಮನಸ್ಸು ಕಾಡುತ್ತದೆ....
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿ. ಮಡಿಕೇರಿ ಘಾಟ್ನ ಜೋಡ್ಪಾಲ ತಿರುವಿನಲ್ಲಿ ವಾಹನಗಳು ಕಂದರಕ್ಕುರುಳಿ ಆಗುತ್ತಿರುವ ಸರಣಿ ಅಪಘಾತ, ಮಂಗಳೂರಿನ ತಣ್ಣೀರು ಭಾವಿಯಲ್ಲಿ ಅರ್ಧ ಮುಳುಗಿದ ಕ್ವೀನ್ III ಹಡಗೂ, ಮಲೇಷಿಯಾದಿಂದ ಮಂಗಳೂರಿಗೆ ಬಂದ ಗಣೇಶ್ ದಂಪನಿಯವರ ತಲತಲಾಂರದಿಂದ ಬಳುವಳಿಯಾಗಿ ಬಂದ ಕಲ್ಲುಟಿ ದೇವರ ಮಿಂಚುವ ಕೆಂಪುರತ್ನದ ಸರದ ಕಳ್ಳತನ ಹೀಗೆ ಸಮಾನಾಂತರವಾಗಿ ನಡೆಯುವ ಎರಡು ಮೂರು ಕತೆಯನ್ನು ಹೆಣೆದು ಈ ಕಾದಂಬರಿಯ ಕತೆಯು ರೋಚಕತೆಯಿಂದಲೇ ಸಾಗುತ್ತದೆ. ಮೊದಲ ಭಾಗ ಮಡಿಕೇರಿಯ ಆಸುಪಾಸಿನಲ್ಲಿ ನಡೆದರೆ, ಎರಡನೇಯ ಭಾಗ ಮಂಗಳೂರಿನ ಪ್ರಾಂತ್ಯದಲ್ಲಿ ತುಳು ಭಾಷೆ ಹಾಗು ಮಂಗಳೂರಿನ ಸ್ಥಳೀಯ ಕನ್ನಡದ ಸೊಗಡಿನೊಂದಿಗೆ ಸಾಗುತ್ತದೆ. ಮೂರನೇ ಭಾಗದಲ್ಲಿ ಈ ಎರಡೂ ಕತೆಯ ಕೊಂಡಿಗಳನ್ನು ಪೋಣಿಸಿ ಕತೆಗೊಂದು ಮುಕ್ತಾಯ ಹೇಳಿದ್ದಾರೆ. 8/10⭐
ಅನುಷ್ ಅವರ ಕಾದಂಬರಿಗಳಲ್ಲಿ, ಮಳೆ, ಮಲೆನಾಡು, ಕಡಲು ಅಥವಾ ನದಿ ಇವೆಲ್ಲದರ ಜೊತೆಗೆ ರೋಚಕತೆ ಇದ್ದೆ ಇರುತ್ತೆ. ಈ ಕಾದಂಬರಿಯಲ್ಲಿ, ಓದುಗರನ್ನು ಕಾಫಿ ತೋಟಗಳಲ್ಲಿ, ಮಡಿಕೇರಿಯ ಸಂದುಗೊಂಲೆಲ್ಲಾ ಸುತ್ತಾಡಿಸಿ, ಘಾಟಿ ಇಳಿಸಿ ತಣ್ಣಿರುಬಾವಿಯ ಕಡಲ ತೀರದಲ್ಲಿ ಅಲೆದಾಡಿಸಿ ಮತ್ತೆ ಘಾಟಿ ಹತ್ತಿಸ್ತಾರೆ. ಅಂದರೆ ಕಥೆಯು ಅಷ್ಟೇ ರೋಚಕವಾಗಿ ಸಿನಿಮೀಯ ಶೈಲಿಯಲ್ಲಿ ಸಾಗುವುದು ಎಂದರ್ಥ. ಒಂದೆಡೆ ಕುಳಿತು ಪಟಪಟನೆ ಓದಿ ಮುಗಿಸಬಹುದಾದಂತಹ ಕಾದಂಬರಿ ಇದಾಗಿದೆ. ಕ್ಲೈಮ್ಯಾಕ್ಸ್ ನಲ್ಲಿ ಕೇಡಿಗಳ ಸಂಹಾರ ಆಗಿದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ನನಗೆ ಅನ್ನಿಸ್ತು, ಒಟ್ಟಾರೆ ಒಂದು ಒಳ್ಳೆಯ ರೋಚಕ ಅನುಭವ ಸಿಗುವುದರಲ್ಲಿ ಎರಡು ಮಾತಿಲ್ಲ.