ಅಲಮೇಲಮ್ಮನ ಶಾಪ ಒಂದು ಶವ ಪರೀಕ್ಷೆ - ಪ್ರೊ ಪಿ.ವಿ.ನಂಜರಾಜ ಅರಸು.
'ತಲಕಾಡು ಮರಳಾಗಲಿ ಮಾಲಂಗಿ ಮಡುವಾಗಲಿ ಮೈಸೂರು ದೊರೆಗಳಿಗೆ ಮಕ್ಕಳಾಗದಿರಿ'
ಇದು ಅಲಮೇಲಮ್ಮನ ಶಾಪ. ಇದು ಸತ್ಯವೇ, ಸುಳ್ಳೇ ಎಂಬ ಕುತೂಹಲ ತಣಿಯಲು ನಂಜರಾಜ ಅರಸು ಒಂದು ಯಾತ್ರೆಗೆ ನಮ್ಮನ್ನು ಹೊರಡಿಸುತ್ತಾರೆ. ಎಲ್ಲಿಗೆ? ಮೈಸೂರು ಅರಸು ವಂಶ ಹೇಗೆ ಸ್ಥಾಪನೆಯಾಯಿತು ಎಂಬಲ್ಲಿಗೆ? ಅದಕ್ಕೆ ಮೂರು ಮೂರು ಆಕರ ಗ್ರಂಥಗಳ ರೆಫರೆನ್ಸ್ . ಇಲ್ಲಿಂದ ಶುರುವಾದ ಕುತೂಹಲಕಾರಿ ಯಾನ ಕಾಲ್ಪನಿಕ ಕತೆಗಳು ಮತ್ತು ಐತಿಹಾಸಿಕ ಆಧಾರಗಳ ತುಲನೆ ಮಾಡುತ್ತಾ ಸಾಗುತ್ತದೆ. ಅಲಮೇಲಮ್ಮನ ಮೂಗುತಿ ಎಷ್ಟು ಭಾರವಿದೆ ಎಂದರೆ ಅದನ್ನೇನಾದರೂ ಅವಳು ಧರಿಸಿದ್ದರೆ ಅವಳ ಮೂಗು ಹರಿದು ಹೋಗಬೇಕಿತ್ತು ಎಂಬ ನಂಬಲಾಗದ ಸತ್ಯದಿಂದ ಹಿಡಿದು, ತಲಕಾಡಲ್ಲಿ ಮರಳು ರಾಶಿ ಇರಲು ವೈಜ್ಞಾನಿಕ ಆಧಾರಗಳು, ಅಲಮೇಲಮ್ಮ ಯಾರು? ಈ ಕತೆಗೂ ಬ್ರಿಟಿಷರಿಗೂ ಏನು ಸಂಬಂಧ? ಶ್ರೀಕಂಠ ದತ್ತ ಒಡೆಯರ್ ಅವರ ಒಂದು ಹೇಳಿಕೆ ಹೇಗೆ ಸದ್ಯಕ್ಕೆ(ಈ ಪುಸ್ತಕ ಪ್ರಕಟವಾದ ಕಾಲಕ್ಕೆ) ಈ ಶಾಪ ಮರುಜೀವ ಪಡೆಯಲು ಕಾರಣವಾಯಿತು. ಜನಪದ ಈ ಬಗ್ಗೆ ಏನು ಹೇಳುತ್ತದೆ? ಇತ್ಯಾದಿ ಪ್ರಶ್ನೆಗಳ ಸುದೀರ್ಘವಾಗಿ ಚರ್ಚಿಸುತ್ತದೆ. ಆರಂಭದ ಮುನ್ನುಡಿ ಎದುರಾಎದುರು ಕೂತು ಮಾತಾಡಿದಂತೆ ಇದ್ದುದರಿಂದ ಕೊಂಚ ಗೊಂದಲಕ್ಕೀಡು ಮಾಡುತ್ತದೆ. ಚಿತ್ರಗಳು ಕಪ್ಪು ಬಿಳುಪಾದ ಕಾರಣ ಕೊಂಚ ಅಸ್ಪಷ್ಟವಾಗಿದೆ.ಅದು ಬಿಟ್ಟರೆ ನೇರ ವಿಷಯಕ್ಕೆ ಬರುವ ಪುಸ್ತಕ ಎಲ್ಲೂ ಬೋರಾಗದಂತೆ ಸಾಗುತ್ತದೆ.ಒಂದು ಸಂಶೋಧನಾ ಕೃತಿ ಈ ತೆರನಾಗೂ ಇರಬಹುದಾ ಎಂದು ಬೆರಗು ಹುಟ್ಟಿಸುತ್ತದೆ. ನನಗಂತೂ ಬಹಳ ಕುತೂಹಲಕಾರಿ ಪಯಣ. ಓದಿ ನೋಡಿ.
ಮೈಸೂರಿನ ಅರಸರ ಇತಿಹಾಸ ಮತ್ತು ಒಂದು ನಂಬಿಕೆಯ ಒರೆ ಹಚ್ಚುವ ಈ ಪ್ರಯತ್ನ ನಿಮಗೂ ಹಿಡಿಸೀತು!