ಛಂದ ಪ್ರಕಾಶನ ಅಂದರೆ ನಂಬಿಕಸ್ತ ಪುಸ್ತಕಗಳು ಎಂಬ ಲೆಕ್ಕಾಚಾರದಲ್ಲಿ ಕೊಂಡದ್ದು. ಇಲ್ಲವಾದರೆ ಹೆಸರೇ ಕೇಳದ ಲೇಖಕರ ಪುಸ್ತಕ ಎಂಬ ಪೂರ್ವಾಗ್ರಹ ಪೀಡಿತ ಅಭಿಪ್ರಾಯ ದಲ್ಲಿ ಎಂತಹ ಅದ್ಬುತ ಪುಸ್ತಕ ಕಳೆದುಕೊಳ್ಳುತ್ತಿದ್ದೆನಲ್ಲ ಎಂಬ ಹಳಹಳಿ. ನಿಸ್ಸಂಶಯವಾಗಿ ಅತ್ಯುತ್ತಮ ಕಾದಂಬರಿ. ಅಹಂಕಾರ ಮಮಕಾರಗಳ ಬಿಡಿಸಿಕೊಂಡು ಸೇವೆ ಮಾಡಲು ಸಾಧ್ಯವೇ ಎಂಬ ಮೂಲ ಪ್ರಶ್ನೆಯನ್ನು ಒಡಲಲ್ಲಿ ಇಟ್ಟು ಕೊಂಡು ಬೆಳೆವ ಕತೆ ಅದರ ಸಾಧ್ಯತೆಯ ಒರೆ ಹಚ್ಚುತ್ತದೆ. ಪ್ರಜ್ಞಾ ಪ್ರವಾಹ ತಂತ್ರದ ಬಳಕೆ ಭೈರಪ್ಪರ ಕಾದಂಬರಿಗಳ ನೆನಪಿಸುತ್ತದೆ. ಅನ್ವೇಷಣೆ,ನಿರಾಕರಣ ಅಲ್ಲಲ್ಲಿ ನೆನಪಾಗುತ್ತದೆ.
ಭಾಷೆಯ ಸಶಕ್ತ ಬಳಕೆ, ಮೊದಲೆರಡು ಪುಟ ಓದುವಾಗಲೇ ನಿಮ್ಮನ್ನು ಅಯಸ್ಕಾಂತದಂತೆ ಸೆಳೆಯುತ್ತದೆ. ಲೇಖಕರ ಮೊದಲ ಕಾದಂಬರಿ ಅಂತ ಮಾಫಿ ಕೊಡಬೇಕಾಗೇ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ನಾನೋದಿದ ಅತ್ಯತ್ತಮ ಕಾದಂಬರಿಗಳಲ್ಲೊಂದು..
'ಒಂದು ಹಂತ ಮುಟ್ಟಿದ ಮೇಲೆ ಸಮಸ್ಯೆಗಳ ಸ್ವರೂಪಗಳೂ ಬದಲಾಗುತ್ತವೆ' ಎಂಬಂತಹ ಅನೇಕ ಜ್ಞಾನೋದಯಗೊಳಿಸುವ ಸಾಲುಗಳಿವೆ. ನನಗೆ ಬಹಳ ಬಹಳ ಇಷ್ಟವಾಯಿತು.must read
ಕಾದಂಬರಿಯ ನಾಯಕನ ಅಧ್ಯಾತ್ಮದ ಪಯಣ , ಅವನು ಸೇರುವ ಆಶ್ರಮ ಅಲ್ಲಿನ ರೀತಿ ನೀತಿಗಳು ಸಾಧನೆಯ ಸಂಘರ್ಷಗಳು , ಆಶ್ರಮದ ಭಕ್ತರ ಮೇಲೆ ಆಗುವ ಪರಿಣಾಮಗಳು , ಬ್ರಹ್ಮಚಾರಿಗಳ ಬದುಕು ಬವಣೆ , ಅವರ ಕಷ್ಟಗಳು , ಆಶ್ರಮದ ಸ್ವಾಮಿಗಳು ಅವರು ಸಾಧನೆ ಮಾಡುವ ವಿಧಾನ , ಮಾನವ ಸಹಜ ಹಮ್ಮು ಬಿಮ್ಮುಗಳ ಒಟ್ಟು ಚಿತ್ರಣವಿರುವ ಕಾದಂಬರಿ . ಗಟ್ಟಿ ಪುಸ್ತಕ ಓದಿ ಮನನ ಮಾಡಲು ಸಮಯ ತಗೊಂಡೆ .
ವೈರಾಗ್ಯ ಎಲ್ಲರಿಗೂ ವೇದ್ಯವಾಗುವಂತದ್ದಲ್ಲ. ಮನಸ್ಸು ಪಕ್ವವಾಗದೇ ಯಾವುದೋ ಕ್ಷಣಿಕ ನಿರ್ಧಾರದಿಂದಲೋ ಅಥವಾ ಮತ್ಯಾವುದೋ ಮೋಹಕ್ಕೆ ಒಳಗಾಗಿ ಸನ್ಯಾಸ ಸ್ವೀಕರಿಸಿ, ಮತ್ತೆ ಸಮಾಜಕ್ಕೆ ಅಂಟಿಕೊಂಡ ಸನ್ಯಾಸಿಗಳ ಕತೆ, ಕಾದಂಬರಿಯ ಕಥಾವಸ್ತು.
ವಿರಾಗಿಗಳಾಗಿ ತಮ್ಮ ಬದುಕನ್ನು ಸಮಾಜಕ್ಕೆ ಸಮರ್ಪಿಸಿಕೊಂಡರೂ, ಬೆಂಬಿಡದೆ ಕಾಡುವ ಮನೋ ವ್ಯಾಪಾರಗಳ ಮಂಥನವನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಬಹಳ ಇಷ್ಟವಾದದ್ದು, ಭೈರಪ್ಪನವರ "ಅನ್ವೇಷಣೆ" ಯನ್ನು ನೆನಪಿಸುವ ಇವರ ಕಾದಂಬರಿಯ ತಂತ್ರ.
ಕೆಲವೇ ಕೆಲವು ಕಾದಂಬರಿಗಳು ಓದಿ ಮುಗಿದ ಮೇಲೂ ಕಾಡುತ್ತವೆ. ಅಂತಹದ್ದರಲ್ಲೊಂದು #ನ್ಯಾಸ.
ಕಾದಂಬರಿಯ ವಸ್ತು 'ಸಂನ್ಯಾಸ'. ಅದರ ಹರಿವು ದೊಡ್ಡದು, ಅದನ್ನು ಅರಿಯುವುದಕ್ಕೆ ಅಲೆದಾಡುವ 'ಸತ್ಯಪ್ರಕಾಶ'ನ ಪಾತ್ರವು ಕೂಡ ದೊಡ್ಡದು.
ಸಂನ್ಯಾಸ ಎಂದರೆ ಎಲ್ಲವನ್ನೂ ತ್ಯಜಿಸುವುದು. ಆದರೆ ಆ 'ಎಲ್ಲವನ್ನೂ' ಬಿಡುವುದಿದೆಯಲ್ಲ ಅದು ತುಂಬಾನೇ ಕಷ್ಟ. ಆ 'ಎಲ್ಲವುಗಳು', 'ಕಷ್ಟಗಳನ್ನು ' ಪಾತ್ರಗಳ ಮೂಲಕ ಕಾದಂಬರಿಯಲ್ಲಿ ತುಂಬಾ ವಿಸ್ತಾರವಾಗಿ ಮುಕ್ತವಾಗಿ ತೆರೆದಿಟ್ಟಿದ್ದಾರೆ ಲೇಖಕರು.
ಸಂನ್ಯಾಸ ಎಂದರೇನು? ಸಂನ್ಯಾಸಿಯು ತನ್ನ ಬಗ್ಗೆ ತನ್ನ ಆಧ್ಯಾತ್ಮಿಕತೆ ಬಗ್ಗೆ ಮಾತ್ರ ಯೋಚಿಸಬೇಕಾ? ಅಥವಾ ಸಮಾಜಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ತೊಡಗಬೇಕಾ? ಸಂನ್ಯಾಸಿಯು ಒಂಟಿಯಾಗಿರಬೇಕಾ? ಅಥವಾ ಮಠಗಳನ್ನು ಕಟ್ಟಿಕೊಂಡು ಅವುಗಳ ಮೂಲಕ ಸಾಮಾನ್ಯರೊಂದಿಗೂ ಬೆರೆಯಬೇಕಾ? ಸಂನ್ಯಾಸದಿಂದ ಕೊನೆಗೆ ದಕ್ಕುವುದಾದರೂ ಏನು? ಇಂತಹ ಅನೇಕ ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರಗಳು ಕಥಾನಿರೂಪಣೆಯಲ್ಲಿ ಸಿಗುತ್ತವೆ.
ಮೊದಲ ಏಳು ಅಧ್ಯಾಯಗಳಲ್ಲಿ ಸತ್ಯನನ್ನು ಸುತ್ತುವರಿದಿರುವ ಪಾತ್ರಗಳ ಮೂಲಕ ಸಂನ್ಯಾಸದ ಹಲವು ಕೋನಗಳನ್ನು ಮತ್ತು ಸತ್ಯನನ್ನು ಪರಿಚಯಿಸುವ ರೀತಿ ಅತ್ಯುತ್ತಮವಾಗಿದೆ ಆದರೆ ಸತ್ಯನ ಸ್ವಗತದಂತಿರುವ ಕೊನೆಯ ಅಧ್ಯಾಯದಲ್ಲಿ ಆ ಅತ್ಯುತ್ತಮತೆ ನನಗೆ ಸಿಗಲಿಲ್ಲ ಅಥವಾ ನನಗೆ ದಕ್ಕಿದೆ ಕಮ್ಮಿ ಇರಬಹುದು.
ಸಂನ್ಯಾಸದ ಜೊತೆ ಜೊತೆಗೆ ಸಾಗುವ ಪ್ರತಿಯೊಂದು ಪಾತ್ರಗಳ ಮನೋಧರ್ಮವನ್ನ ಚಿತ್ರಿಸಿರುವ ರೀತಿ ತುಂಬಾ ಇಷ್ಟವಾಯಿತು.
ಭೈರಪ್ಪನವರ ಹಲವು ಕಾದಂಬರಿಗಳ ಓದು ಒಂದು ವಿಶಿಷ್ಟ ಅನುಭೂತಿ ನೀಡುತ್ತದೆ ಅದೇ ರೀತಿ ಮೊದಲನೇ ಕಾದಂಬರಿಯಲ್ಲೇ ತಮ್ಮೆಲ್ಲ ಅನುಭವ ಸಾರವನ್ನು ಸಾದರಪಡಿಸಿರುವ ಲೇಖಕರ ಈ ಕೃತಿಯು ವಿಶಿಷ್ಟ ಅನುಭೂತಿ ನೀಡಿತು.
ಪುಸ್ತಕ ಓದಿ ಮುಗಿಸಿದಾಗ ಗಾಢ ಚಿಂತನೆಗೆ ದೂಡುವಂತೆ ಪ್ರಭಾವಿಸಬಲ್ಲ ಸಶಕ್ತ ಕಾದಂಬರಿ.
Karma Yoga, of all the 4 yogas, is the hardest to follow and implement. That's why Sri Krishna spends most of the time in Gita talking about it.
In this book, the authors follow the life of multiple people mostly monks or one who wants to become monks. Most of them inspired by the karma yoga teachings of Swami Vivekanda and they want to use it to find god in their life.
As everyone's life unfolds we can see the fight between ideal and reality. The things which are easy to say in books and speeches become difficult to follow in life. A lot of decisions start questions the intent behind them and blurs the line between monk life and ordinary life.
Overall an eye-opening book with a lot of depth and heart. Throughout the book, it asks hard questions about life and ends by saying there are no easy answers. Everyone needs to find their own answers.
I should have read this book two years book. It would have helped immensely. Still, this book gave lot of clarity over the confusions I had few years back. I am happy that I had chosen my parents over my illusions. Must read book.
ಶಕ್ತಿಯುತ ಭಾಷೆ , ಸಮೃದ್ಧ ವಿಚಾರಗಳು , ಕಾದಂಬರಿಯನ್ನು ಕಟ್ಟಿಕೊಡುವ ರೀತಿ - ಇವುಗಳನ್ನು ನೋಡಿದರೆ ಹರೀಶ್ ಅವರದು ಮೊದಲ ಕಾದಂಬರಿ ಎನ್ನುವದನ್ನು ಆಶ್ಚರ್ಯದ ವಿಷಯವಾದೀತು. ಕಳೆದ ಕೆಲ ವರುಷಗಳಲ್ಲಿ ಓದಿದ ಅಪರೂಪದ ಪುಸ್ತಕ .
"ಅಹಂಕಾರ ಮಮಕಾರಗಳನ್ನ ಮೀರದೆ ಸತ್ಯದ ದರ್ಶನವಾಗುವುದಿಲ್ಲ".ಈ ವಾಕ್ಯವನ್ನೇ ಮೂರು ನಾಲ್ಕು ದಿನಗಳಿಂದ ಗುನುಗ್ತಾ ಇದೆ ಮನಸ್ಸು.ಇದು ನಿಜ ಅಂತ ಅನ್ಸಿದ್ರೂ ಅಷ್ಟು ಸುಲಭವಾಗಿ ಮನಸ್ಸು ಇವೆರೆಡನ್ನೂ ಮೀರಬಲ್ಲದೆ? ಅಂತ ಮರುಪ್ರಶ್ನೆ ನಮ್ಮಲ್ಲೇ ಉದ್ಭವವಾಗತ್ತೆ.ಹಾಗೆ ಸತ್ಯ ದರ್ಶನವಾಗಬೇಕಂತ ಹೊರಟವರೆಲ್ಲರೂ ಈ ಅಹಂಕಾರ ಮಮಕಾರಗಳನ್ನ ಬಿಟ್ಟಿರ್ತಾರ? ಜೀವನದ ಸತ್ಯ ಏನು? ಸತ್ಯ ಏನು ಅಂತ ಗೊತ್ತಿಲ್ಲದೇನೇ ಹುಡುಕಿ ಹೊರಡೋದು ಅಂದ್ರೆ ಜೀವನಕ್ಕೆ ಬೆನ್ನು ತಿರುಗಿಸಿ ಹೋಗೋದಾ? ಹ���ಗೆ ಸಂನ್ಯಾಸ, ಜೀವನಗಳ ಬಗ್ಗೆ ಸಾವಿರ ಪ್ರಶ್ನೆಗಳು ಹುಟ್ಟಿಕೊಂಡು ಬಿಡತ್ತೆ.ಅದೇ ಗುಂಗಾಗಿ ದಿನಗಟ್ಟಲೆ ಕಾಡತ್ತೆ ಈ "ನ್ಯಾಸ" ಕಾದಂಬರಿ ಓದಿದಾಗ.
ನಾಲ್ಕುನೂರು ಪುಟಗಳ ದೊಡ್ಡ ಪುಸ್ತಕ.ಐದಾರು ದಿನಗಳಿಂದ ಆವರಿಸಿಬಿಟ್ಟಿದೆ.ಜೀವನ ಸಿದ್ದ ಸೂತ್ರ ಬದಿಗಿಟ್ಟು ಆಶ್ರಮ ಸೇರಬೇಕು.ಜೀವನದ ಸತ್ಯ ತಿಳೀಬೇಕು ಅಂತ ಹೊರಡೋ ಸತ್ಯಪ್ರಕಾಶ ಅನ್ನೋ ಯುವಕನ ಕತೆಯನ್ನ ಅವನ ಸುತ್ತಲಿನ ಜನರು ತಮ್ಮ ಕತೆಯೊಂದಿಗೆ ಇಷ್ಟಿಷ್ಟೇ ಬಿಚ್ಚಿಡ್ತಾ ಹೋಗ್ತಾರೆ.ಸತ್ಯನ ತಂದೆಯ ಭಾಗವನ್ನಂತೂ ಎರಡು ಮೂರು ಬಾರಿ ಪದೇ ಪದೇ ಓದಿಕೊಳ್ಳಬೇಕಿನಿಸಿತು.ನನ್ನ ಸುತ್ತಲಿನವರೋ ಮನೆಯವರೋ ಸರಿಯಿಲ್ಲ ಅಂತ ತಿಳಿದೂ ಯಾಕೆ ಅವರನ್ನ ಬೆನ್ನಿಗೆ ಕಟ್ಟಿಕೊಳ್ತೀವಿ?ಅದೇ ಬೇರೆಯವರಾಗಿದ್ರೆ ಹಾಗೆ ಮಾಡ್ತಿದ್ವಾ?ಸತ್ಯಕ್ಕಿಂತ ಮಮಕಾರವೇ ದೊಡ್ಡದಾ?ನಮ್ಮನ್ನ ಸಾಕಲಿ ಅಂತ ಮಕ್ಕಳನ್ನ ಅಷ್ಟು ಮುಚ್ಚಟೆಯಿಂದ ಬೆಳೆಸ್ತೀವಾ?ನಾವು ಸಾಯೋವರೆಗೂ ದುಡಿದು ದುಡಿದು ಸಾಕಲಿ ಅಂತಾನಾ? ಹೀಗೇ ಜೀವನದ ಮೂಲಭೂತ ಪ್ರಶ್ನೆಗಳೇ ಕಾಡತೊಡಗತ್ತೆ.
ಸಂನ್ಯಾಸ ಅಂದ್ರೆ ಎಲ್ಲದರ ಮೋಹವನ್ನ ಬಿಡೋದು ಅಂತಲ್ವಾ.ಸಂಸಾರ ಮನೆಯನ್ನ ಬಿಟ್ಟು ಮಠ ,ದೇವಸ್ಥಾನ,ಸ್ಕೂಲು ಇವೆಲ್ಲವನ್ನ ಕಟ್ಟಿ ಬೆಳಸಬೇಕು ಅಂತ ಒದ್ದಾಡೋದಾದ್ರೆ ಮೋಹವನ್ನ ಎಲ್ಲಿ ಬಿಟ್ಟಂತಾಯ್ತು? ಸಂಸಾರದ ಮೇಲಿನ ಮೋಹವನ್ನ ಬಿಟ್ಟೆ ಅಂದುಕೊಂಡ್ರು ಕೀರ್ತಿಯ ಮೋಹವನ್ನ ಬಿಡೋದು ಕಷ್ಟವಾ? ಈ ಸಂಧರ್ಭದಲ್ಲಿ ಸತ್ಯನ ಮಾತು ಬಹಳ ಮಾರ್ಮಿಕವಾಗಿದೆ ಅನ್ನಿಸ್ತು."ಜೀವನ ಪೂರ್ತಿ ಹೆಸರಿಗಾಗೇ ದುಡಿದ ಸ್ವಾಮಿಜಿಯ ಹೆಸರಲ್ಲಿ ಉಳಿಯೋ ಸಮಾಧಿ ಬೇಡ ಅಂತ ನಾವಂದರೆ ಅವರ ಒಂದು ಕೀರ್ತಿಸ್ಥಾನವನ್ನು ನಾವು ಕಿತ್ತುಕೊಂಡಂತಾಗುತ್ತೆ."
ಮತ್ತೆ ಮತ್ತೆ ಓದಿ ಅರ್ಥಮಾಡಿಕೊಳ್ಳಬೇಕೆನಿಸೋ ಪುಸ್ತಕ.ಬಹಳ ಕಾಡತ್ತೆ.ಲೇಖಕರ ಮೊದಲ ಪುಸ್ತಕ ಅಂತ ಹೇಳೋಕೆ ಆಗೋದೇ ಇಲ್ಲ ಅಷ್ಟು ಸಮೃದ್ದ ವಿಚಾರಗಳು.ಭೈರಪ್ಪನವರು ನೆನಪಾಗ್ತಾರೆ ಬಹಳ ಸಲ.ಇತ್ತೀಚಿನ ಓದಿನಲ್ಲಿ ಬಹಳ ಇಷ್ಟಪಟ್ಟ ಪುಸ್ತಕ.