ಚಂದ್ರಶೇಖರ ಪಾಟೀಲ(ಚಂಪಾ) ರ ಹಳೆಯ ಬರಹಗಳ(ಸಂಕ್ರಮಣ ಸಂಚಿಕೆ) ಒಂದು ಪುಸ್ತಕ ಸಿಕ್ಕಿತು. ಬರಹಗಳು ಎಷ್ಟು ಹಳೆಯದೆಂದರೆ 1988 ಸುಮಾರಿದ್ದು. ಆದರೆ ತನ್ನ ವ್ಯಂಗಕ್ಕೆ ಹೆಸರಾದ ಅವರ ಚುಚ್ಚುಮದ್ದು ಈಗಲೂ ಎಷ್ಟು ಪ್ರಸ್ತುತ ನೋಡಿ. ' ಬಹುತೇಕ ಬರಹಗಾರರಲ್ಲಿ ಸೃಜನಶೀಲತೆಯ ಕಾವು ಒಂದೇ ಪ್ರಮಾಣದಲ್ಲಿ ಉಳಿಯುವುದಿಲ್ಲ. ಇದಕ್ಕೆ ಅನೇಕ ಕಾರಣ. ಕೆಲವರು ತಮ್ಮ ಬದುಕಿನ ಕಿಡಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡು ತಾವಾಗಿಯೇ ಉಸಿರುಗಟ್ಟಿ ಸಾಯತೊಡಗುತ್ತಾರೆ. ಇನ್ನು ಹಲವರು ಎಣ್ಣೆ ಹೆಚ್ಚಾಗಿ, ಹಂಗಾಮಿ ಇದ್ದಾಗ ಎಲ್ಲ ನಿಂಗಮ್ಮಗಳನ್ನು ಬಸಿರು ಮಾಡಲು ಪ್ರಯತ್ನಿಸಿ, ಹಂಗಾಮಿ ಮುಗಿದ ನಂತರ ಜೋಳಿಗೆಯಾಗಿ ಜೋತು ಬೀಳುತ್ತಾರೆ. ಕಾರಣ ಏನೇ ಇರಲಿ, ಸ್ನಾಯುಗಳು ಸಡಿಲವಾದಂತೆಲ್ಲ,ನಿಂತ ನೆಲ ಕಾಲ ಕೆಳಗಿಂದ ಸರಿಯುವಂತೆ ಅನಿಸಿ, ತಾವು 'ಭೂತ'ಗಳಾಗುತ್ತಿದ್ದೇವೆಂಬ ಹೆದರಿಕೆಯಿಂದ 'ವರ್ತಮಾನ' ಕ್ಕೆ ಜೋತು ಬೀಳಲು, ಇಂಥ ಕ್ರಿಯಾಶೂನ್ಯ ಚೇತನಗಳು ಅನೇಕ ತಂತ್ರ ಬಳಸುತ್ತವೆ. ಅಂಥ ತಂತ್ರಗಳಲ್ಲಿ ಒಂದು : ಪ್ರಶಸ್ತಿಗಳಿಗಾಗಿ ಪರದಾಡುವುದು' ಇಷ್ಟೆಲ್ಲ ಬರೆದ ಮನುಷ್ಯ ತಾ ಬರೆದಂತೇ ವರ್ತಿಸಿದ್ದು ಮಾತ್ರ ವಿಪರ್ಯಾಸ!