ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು.
ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ (ಪ್ರಬಂಧಗಳು), ಪ್ರಪಂಚ ಪುಸ್ತಕ (ವಿಮರ್ಶಾ ಲೇಖನಗಳು), ಪಂಡಿತ ಭೀಮಸೇನ ಜೋಶಿ (ವ್ಯಕ್ತಿಚಿತ್ರ), ಕಥಾಜಗತ್ತು, ಜಗತ್ತಿನ ಅತಿಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು, ಹಾರಿಕೊಂಡು ಹೋದವನು (ಅನುವಾದಿತ ಕಥೆಗಳು), ವೆನಿಸ್ಸಿನಲ್ಲಿ ಸಾವು, ಹಳ್ಳಿ, ಪೋಸ್ಟ್ ಮ್ಯಾನ್ (ಅನುವಾದಿತ ಕಾದಂಬರಿಗಳು), ಮಾಸ್ಟರ್ ಬಿಲ್ಡರ್ (ಅನುವಾದಿತ ನಾಟಕ), ಶತಮಾನದ ಸಣ್ಣಕತೆಗಳು, ಸಣ್ಣಕತೆ 1983, ಕನ್ನಡ ಅತಿ ಸಣ್ಣಕತೆಗಳು, ನಾದದ ನವನೀತ, ಬೆಸ್ಟ್ ಆಫ್ ಕೇಫ (ಸಂಪಾದಿತ ಕೃತಿಗಳು).
ಅತಿ ಸಣ್ಣ ಕತೆಗಳೆಡೆಗೆ ನನ್ನ ತಕರಾರು ಏನೆಂದರೆ ಇವುಗಳನ್ನು ಓದುವುದು ಸುಲಭ. ಆದರೆ ಕತೆಯ ಆಳಕ್ಕಿಳಿದು ದಕ್ಕಿಸಿಕೊಳ್ಳುವುದು ತುಸು ಕಷ್ಟ. ಅದರಲ್ಲೂ ಇನ್ನೂರು ಮುನ್ನೂರು ಪುಟಗಳ ಕಾದಂಬರಿಯ ಸವಿಸ್ತಾರ ಹರವಿಗೆ ಒಗ್ಗಿಕೊಂಡಿರುವ ಮನಸ್ಸಿಗೆ ಶುರುವಾಗುವುದರೊಳೇ ಈ ಕತೆಗಳು ಮುಗಿದೇ ಹೋಗುವುದು ಒಂದು ಬಗೆಯ ಆಘಾತದಂತೆ.
ಈ ಪುಸ್ತಕದ ಐವತ್ತಾರು ಕತೆಗಳಲ್ಲಿ ಅರ್ಧದಷ್ಟು ಸರಳವಾಗಿ ರಸಯುಕ್ತವಾಗಿದ್ದು ಓದಿನ ಖುಷಿ ಕೊಟ್ಟರೆ ಮಿಕ್ಕರ್ಧ ಕತೆಯ ಒಳಾರ್ಥ, ಸಂದರ್ಭ, ರಾಜಕೀಯ ಪ್ರಸ್ತುತತೆ ಇತ್ಯಾದಿಗಳ ಬಗ್ಗೆ ಕುತೂಹಲ ಮೂಡಿಸುವಂತಿವೆ. ಎಲ್ಲ ಕತೆಗಳೂ ಅರ್ಥವಾದವು ಎನ್ನಲಾರೆ. ಗದ್ಯ ರೂಪಿ ಕಾವ್ಯಗಳಂತೆ ಒಂದೊಂದೂ ವಿಭಿನ್ನವಾಗಿದ್ದು ಹೆಚ್ಚಿನವು ಇಷ್ಟವಾದವು.